
ಗ್ರಾಮ್ಯ ಬದುಕಿನ ಆಚರಣೆ ಸಂಪ್ರದಾಯಗಳನ್ನು ನಾಳಿನ ಸಮಾಜಕ್ಕೆ ವರ್ಗಾಯಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾದರೆ ಸಾಂಪ್ರದಾಯಿಕ ಸಂಸ್ಕೃತಿಗಳು ಮೂಲ ನೆಲೆಗಟ್ಟಿನಲ್ಲಿ ಉಳಿಯುತ್ತವೆ. ತುಳುನಾಡಿನ ಜನರ ಬದುಕಿನಲ್ಲಿ ಆಟಿ ತಿಂಗಳು ವಿಶೇಷ ಪ್ರಾಧಾನ್ಯತೆ ಪಡೆದಿದೆ. ಈ ನಿಟ್ಟಿನಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ “ಬರವುದ ಬಿತ್ತ್ ಲ್ಡ್ ಆಟಿದ ಕೂಟ” ಎಂಬ ಆಟಿ ತಿಂಗಳ ವಿಶೇಷತೆಯ ಕುರಿತು ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

OPTIC WORLD
ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಹಾಗೂ ಎಸ್ ವಿ ಎಸ್ ಮಹಾವಿದ್ಯಾಲಯ ಬಂಟ್ವಾಳ ಪ್ರಾಂಶುಪಾಲರಾದ ಎಂ.ಡಿ ಮಂಚಿ ಇವರು ಅತಿಥಿಗಳಾಗಿ ಆಗಮಿಸಿ, “ತುಳುನಾಡಿನ ಸಾಂಪ್ರದಾಯಿಕ ಬದುಕಿನಲ್ಲಿ ಆಟಿ ತಿಂಗಳಂದರೆ ವಿರಾಮದ ಹಾಗೂ ಹೊಟ್ಟೆಪಾಡಿಗೆ ಕಷ್ಟಪಡುವ ದಿನಗಳೆಂದು ಬಿಂಬಿತ. ಇಂತಹ ದಿನಗಳಲ್ಲಿ ಮೂಲ ನಿವಾಸಿಗರು ನೈಸರ್ಗಿಕವಾಗಿ ದೊರೆಯುವ ಉತ್ಪನ್ನಗಳನ್ನೇ ಹಸಿವು ನೀಗಿಸಲು ಬಳಸುತ್ತಿದ್ದರೆಂದು ಇತಿಹಾಸ. ಆಟಿ ತಿಂಗಳ ಕಷ್ಟ ಕಾರ್ಪಣ್ಯಗಳ ಮಾರಿಯನ್ನು ಹೊಡೆದೋಡಿಸಲು ಆಟಿ ಕಳಂಜ ದೈವೀಶಕ್ತಿಯಾಗಿ ಮನೆಮನೆಗೂ ಭೇಟಿ ನೀಡುವ ಪ್ರತೀತಿ ವಿರಳವಾದರೂ ಈಗಲೂ ಸಂಪ್ರದಾಯ ಉಳಿದುಕೊಂಡು ಬಂದಿದೆ. ಸಾಂಸ್ಕೃತಿಕ ಹಿನ್ನೆಲೆಯುಳ್ಳ ಈ ಆಚರಣೆ ನಿಸರ್ಗದ ಜೊತೆಗಿನ ಆಪ್ತ ಭಾವವನ್ನು ಒಡಮೂಡಿಸುತ್ತದೆ.” ಎಂದು ಆಟಿ ತಿಂಗಳ ಮಹತ್ವದ ಕುರಿತು ಉಪನ್ಯಾಸ ನೀಡಿದರು. ನಂತರ ತೆಂಬರೆ ಜೊತೆ ಆಟಿಕಳೆಂಜನ ಪಾಡ್ಡನ ಹಾಡಿ ಎಲ್ಲರನ್ನು ರಂಜಿಸಿದರು.

ಈ ಕಾರ್ಯಕ್ರಮದ ಜೊತೆಗೆ ಸೆಲ್ಕೋ ಸೋಲಾರ್ ಲೈಟ್ಸ್ ಪ್ರೈವೇಟ್ ಲಿಮಿಟೆಡ್ ಇವರು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಪ್ರಬಂಧ ಮತ್ತು ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆಯನ್ನು ಅತಿಥಿಯಾಗಿ ಆಗಮಿಸಿದ ಸಂಸ್ಥೆಯ ಪ್ರತಿನಿಧಿ ರವೀನಾ ಹಾಗೂ ಹಿರಿಯ ವಿದ್ಯಾರ್ಥಿ ಸುರೇಖಾ ಡಿ ಶೆಟ್ಟಿ ಮೇರಾವು ನೆರವೇರಿಸಿದರು. ತಾರಾನಾಥ್ ಕೈರಂಗಳ ಸ್ಪರ್ಧೆಯ ನಿರ್ವಹಣೆ ಮಾಡಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಶಂಕರ್ ರಾವ್ ಮಾತನಾಡಿ, “ನೈಸರ್ಗಿಕ ಆಹಾರ ಹಾಗೂ ಜನಪದೀಯ ಹಿನ್ನೆಲೆಯ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು” ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಂಚಿ ಶಿವಶಂಕರ್ ಭಟ್ ಇವರ ಪಾರಂಪರಿಕ ವಸ್ತುಗಳ ಪ್ರದರ್ಶನವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಗಣೇಶ್ ಪ್ರಭು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ್ ರೈ ತಿರುವಾಜೆ, ಶಾಲಾಭಿವೃದ್ಧಿಸಮಿತಿಯ ಸದಸ್ಯರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಸುಶೀಲ ಸ್ವಾಗತಿಸಿ, ಸಮಾಜ ವಿಜ್ಞಾನ ಶಿಕ್ಷಕ ಜಗನ್ನಾಥ ಪಿ ವಂದಿಸಿ ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರ್ವಹಿಸಿದರು


Be the first to comment on "Kolnadu High School: ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಬರವುದ ಬಿತ್ತ್ ಲ್ಡ್ ಆಟಿದ ಕೂಟ"