‘ಪಾಣೇರ್ ಸಂಕ’ ಉಳಿಸಲು ಹರಸಾಹಸ: ಘನವಾಹನ ತಡೆಗೆ ಮತ್ತೆ ಮುಂದಾದ ಆಡಳಿತ

ಬ್ರಿಟಿಷರ ಕಾಲದ ರಚನೆಗಳಲ್ಲಿ ಬಹುಮುಖ್ಯವಾದದ್ದು ಎಂದು ಹೇಳಲಾಗುವ ಪಾಣೇರ್ ಸಂಕ ಎಂದೇ ಸ್ಥಳೀಯವಾಗಿ ಜನಜನಿತವಾಗಿರುವ ಪಾಣೆಮಂಗಳೂರು ಉಕ್ಕಿನ ಸೇತುವೆಯನ್ನು ಸಂರಕ್ಷಿಸಲು ಇಲ್ಲಿ ಘನವಾಹನ ಸಂಚರಿಸದಂತೆ ಆಗಾಗ್ಗೆ ನಿರ್ಬಂಧಗಳನ್ನು ಹೇರುತ್ತಿದ್ದರೂ ವಾಹನ ಸವಾರರು ಕ್ಯಾರೆನ್ನುತ್ತಿರಲಿಲ್ಲ. ಇದೀಗ ಛಲಬಿಡದ ಆಡಳಿತ ಮತ್ತೆ ತಡೆ ಹಾಕಲು ಮುಂದಾಗಿದೆ. ಕಳೆದ ಬಾರಿ ಹಾಕಿದ ತಡೆ ಕುಸಿದು ಬಿದ್ದಿತ್ತು. ಈ ಬಾರಿ ಮತ್ತೆ ತಡೆ ಹಾಕಿ ಘನ ವಾಹನಗಳು ಓಡಾಡದಂತೆ ಮಾಡಲು ನಿರ್ವಹಣೆ ಹೊತ್ತಿರುವ ಬಂಟ್ವಾಳ ಪುರಸಭೆ ಮುಂದಾಗಿದೆ.

ಎತ್ತರದ ಯಾವುದೇ ವಾಹನಗಳು ಅಲ್ಲಿ ಸಂಚರಿಸದಂತೆ ತಡೆಯನ್ನು ಹಾಕುವ ಕಾರ್ಯ ಮಂಗಳವಾರ ಗೂಡಿನಬಳಿಯಲ್ಲಿರುವ ಪಾಣೆಮಂಗಳೂರು ಸೇತುವೆಯ ಆದಿ, ಅಂತ್ಯದಲ್ಲಿ ನಡೆಯಿತು.

ಜಾಹೀರಾತು

ಈ ಸೇತುವೆ ಕಾಲಕಾಲಕ್ಕೆ ಬಿರುಕು ಬಿಟ್ಟಿದೆ ಎಂಬ ಸುದ್ದಿಗಳು ಹಬ್ಬಿದ್ದವು. ಆದರೆ ಸ್ವಾತಂತ್ರ್ಯಾನಂತರ ಕಟ್ಟಿದ ಸೇತುವೆಗಳಿಗಿಂದ ಇದು ಗಟ್ಟಿಯಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಲಾಗುತ್ತಿತ್ತು. ಸುಮಾರು 23 ವರ್ಷಗಳಿಗೆ ಮೊದಲು ಹೊಸ ಸೇತುವೆಯನ್ನು ನಿರ್ಮಿಸಿದ ಬಳಿಕ ಈ ಸೇತುವೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಯಿತು. ಆದರೆ ಹೊಸ ಸೇತುವೆಯಲ್ಲಿ ವಾಹನದಟ್ಟಣೆಯಾದಾಗ ಪಾಣೆಮಂಗಳೂರು ಸೇತುವೆಯಲ್ಲಿ ಸಂಚರಿಸುವ ಪರಿಪಾಠ ಮುಂದುವರಿಯಿತು. ಇಲ್ಲಿ ಅತಿಭಾರದ ಲಾರಿಗಳು ಸಂಚರಿಸುವುದು ನಿಂತಿಲ್ಲ ಎಂದು ದೂರುಗಳು ಕೇಳಿಬಂದಿದ್ದವು.  ಜಿಲ್ಲಾಡಳಿತ ಈ ಬಗ್ಗೆ ಕಟ್ಟುನಿಟ್ಟಾಗಿ ಅದೇಶ ಹೊರಡಿಸಿ, ಘನ ವಾಹನ ಸಂಚಾರ ನಿಷೇಧ ಹೇರಿ ಸೇತುವೆಯ ಎರಡು ಭಾಗದಲ್ಲಿ ಸೂಚನ ಫಲಕ ಅಳವಡಿಸಿತ್ತು.  ಆದರೆ ಸೂಚನಾಫಲಕದ ಅದೇಶ ಫಲಕಕ್ಕೆ ಮಾತ್ರ ಸೀಮಿತವಾಗಿ ಉಳಿದಿತ್ತು.

ಮೂಲರಪಟ್ಣ ಸೇತುವೆ ಕುಸಿದ ಸಂದರ್ಭ ಪಾಣೆಮಂಗಳೂರು ಸೇತುವೆಯ ಸುರಕ್ಷತೆ ಕುರಿತು ಆತಂಕಗಳು ಎದ್ದಿದ್ದವು. ಆ ಸಂದರ್ಭವೂ ಇದರ ಸುರಕ್ಷತೆಯ ಕುರಿತು ಚರ್ಚೆಗಳಾಗಿದ್ದವು. ಒಂದೆರಡು ಬಾರಿ ಬ್ಯಾನರ್ ಕಟ್ಟಿ ಇಲ್ಲಿ ನಿಷೇಧ ಎಂಬ ಸೂಚನೆಯನ್ನು ಹಾಕಿದ್ದು ಹೊರತುಪಡಿಸಿದರೆ, ಯಾವುದೇ ಬಿಗು ಕ್ರಮಗಳನ್ನು ಕೈಗೊಳ್ಳಲಾಗಿರಲಿಲ್ಲ.

ಕೆಲ ತಿಂಗಳ ಹಿಂದೆ ವಿಡಿಯೋವೊಂದು ವೈರಲ್ ಆಗಿ ಸೇತುವೆ ಬಿರುಕುಬಿಟ್ಟಿದೆ ಎಂಬ ಪುಕಾರು ಹಬ್ಬಿತ್ತು. ಈ ಸಂದರ್ಭ ಇಲಾಖೆ ಎರಢೂ ಬದಿಯಲ್ಲಿ ಬ್ಯಾನರ್ ಕಟ್ಟಿ, ತಡೆಯನ್ನೂ ಮಾಡಿತ್ತು. ಆದರೆ ಇಲ್ಲಿವರೆಗೆ ಬಂದು ತಡೆಯನ್ನು ನೋಡಿ, ಮರಳದೆ ಅಲ್ಲೇ ನುಸುಳುವ ಪ್ರಯತ್ನ ಮಾಡಿದ ಪರಿಣಾಮ, ಲಾರಿಯೊಂದು ಸಂಚಾರಕ್ಕೆ ಮುಂದಾಗಿ ತಡೆ ಎರಡೇ ದಿನದಲ್ಲಿ ಮುರಿದುಬಿತ್ತು. ಇಲಾಖೆ  ಇದೀಗ ಕಿಂಟ್ಚಾಲ್ ಗಟ್ಟಲೆ ತೂಕದ ಕಂಬಗಳನ್ನು ಸೇತುವೆಯ ಎರಡು ಬದಿಗೆ ಹಾಕಿ ಘನ ಗಾತ್ರದ ವಾಹನಗಳು ಸಂಚಾರ ಮಾಡದಂತೆ ತಡೆಯಲು ಹೊರಟಿದೆ.

ಜಾಹೀರಾತು

About the Author

Harish Mambady
ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.

Be the first to comment on "‘ಪಾಣೇರ್ ಸಂಕ’ ಉಳಿಸಲು ಹರಸಾಹಸ: ಘನವಾಹನ ತಡೆಗೆ ಮತ್ತೆ ಮುಂದಾದ ಆಡಳಿತ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*