![](https://i0.wp.com/bantwalnews.com/wp-content/uploads/2020/09/ಬಂಟ್ವಾಳನ್ಯೂಸ್.jpg?resize=640%2C236&ssl=1)
![](https://i0.wp.com/bantwalnews.com/wp-content/uploads/2021/08/WhatsApp-Image-2021-08-23-at-09.27.36.jpeg?resize=512%2C1024&ssl=1)
![](https://i0.wp.com/bantwalnews.com/wp-content/uploads/2021/03/WhatsApp-Image-2021-03-07-at-15.28.54.jpeg?resize=724%2C1024&ssl=1)
![](https://i0.wp.com/bantwalnews.com/wp-content/uploads/2021/07/aaniya-darbar.jpeg?resize=456%2C640&ssl=1)
![](https://i0.wp.com/bantwalnews.com/wp-content/uploads/2021/04/BHADRA-9.jpeg?resize=910%2C1024&ssl=1)
ಸತ್ಯವನ್ನು ಮರೆತ ಧರ್ಮಕ್ಕೆ ಬೆಲೆಯಿಲ್ಲ. ಧರ್ಮವನ್ನು ಮರೆತ ಸತ್ಯಕ್ಕೂ ಬೆಲೆಯಿಲ್ಲ. ಧರ್ಮದ ಸಂರಕ್ಷಣೆಗೆ ನಾವು ಸಂಕಲ್ಪ ಮಾಡಬೇಕು. ಅದು ನಮ್ಮ ಕರ್ತವ್ಯವಾಗಬೇಕು. ಧರ್ಮಕ್ಕೆ ಜಯ ನಿಶ್ಚಿತ. ಅದಕ್ಕೆ ಪೂರಕವಾದ ದೇಶ ಭಾರತ ಎಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿದರು.
ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಜರಗಿದ ಒಡಿಯೂರು ಶ್ರೀಗಳವರ ಷಷ್ಠ್ಯಬ್ದ ಸಂಭ್ರಮ ಕರೋಪಾಡಿ ಗ್ರಾಮ ಸಮಿತಿಯ ವತಿಯಿಂದ ಜರಗಿದ ಜ್ಞಾನವಾಹಿನಿ–ಮನೆ–ಮನೆ ಭಜನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ದಿವ್ಯ ಸಂದೇಶ ನೀಡಿದ ಪೂಜ್ಯ ಶ್ರೀಗಳವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುವಾಗ, ಕರೋಪಾಡಿಯಲ್ಲಿಯೂ ಶ್ರೀ ರಾಮ ಮಂದಿರ ನಿರ್ಮಾಣ ಆಗಲಿ. ನಿರಂತರ ಭಜನೆಯಿಂದ ಆಪತ್ತಿಲ್ಲ. ಭಜನೆಗೆ ಎಷ್ಟು ಶಕ್ತಿ ಇದೆ ಎಂಬುದನ್ನು ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ. ನಿಮ್ಮ ಪ್ರೀತಿಯೇ ನನಗೆ ಹಿರಿದಾದ ಸಂಪತ್ತು. ಸಹಾಯದ ಅಗತ್ಯತೆ ಎಲ್ಲಿ ಇದೆಯೋ ಅಲ್ಲಿಗೆ ಸ್ಪಂದಿಸಬೇಕು. ಕರೋಪಾಡಿ ಗ್ರಾಮವನ್ನು ಬಯಲು ಶೌಚಾಲಯಮುಕ್ತ ಮಾಡುವುದು ನಮ್ಮ ಧ್ಯೇಯವಾಗಿದೆ. ಗ್ರಾಮಸ್ಥರ ಸಹಯೋಗದಲ್ಲಿ ಅದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಶ್ರೀ ಸಂಸ್ಥಾನದ ಟ್ರಸ್ಟಿನಿಂದ ನೀಡಲಾಗುವುದು. ಸತ್ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಬಲಿಷ್ಠ ಸಂಘಟನೆ ನಮ್ಮಲ್ಲಿ ಬೇಕು. ದೇಶವನ್ನು ಬಲಿಷ್ಠಗೊಳಿಸುವುದರಲ್ಲಿ ಸ್ತ್ರೀಯರ ಪಾತ್ರವು ಮಹತ್ತ್ವವಾದದ್ದು ಎಂದರು.
ಈ ಸುಸಂದರ್ಭ ಪೂಜ್ಯ ಶ್ರೀಗಳವರಿಗೆ ಸಮಿತಿಯವರು ಸಮರ್ಪಿಸಿದ ಮನೆ ಮನೆ ಭಜನೆಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಪೂಜ್ಯ ಶ್ರೀಗಳವರು ಪಳ್ಳದಕೋಡಿ ಶ್ರೀ ರಾಮ ಭಜನಾ ಮಂದಿರದ ನಿರ್ಮಾಣಕ್ಕೆ ನೀಡಿದರು.
ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ ಪೂಜ್ಯ ಶ್ರೀಗಳವರು ಹುಟ್ಟಿ–ಬೆಳೆದ ಊರಿನಲ್ಲಿ ಷಷ್ಠ್ಯಬ್ದ ಆಚರಣೆ ಮಾಡಿರುವುದು ಹೆಮ್ಮೆಯ ವಿಚಾರ. ಆ ಮೂಲಕ ನೀವೆಲ್ಲರೂ ಪ್ರೀತಿಯನ್ನು ಸಮರ್ಪಿಸಿ, ಪೂಜ್ಯ ಶ್ರೀಗಳವರ ಹೃದಯವನ್ನು ಗೆದ್ದಿದ್ದೀರಿ. ಸಮಿತಿಯು ಆಯೋಜಿಸಿದ ಸಮಾರಂಭ ಧರ್ಮಜಾಗೃತಿಯ ಕಾರ್ಯದ ಮೂಲಕ ಭಾರತೀಯ ಸಂಸ್ಕೃತಿ ಉಳಿವಿಗೆ ಪೂರಕವಾಗಿದೆ. ಭಾರತೀಯತೆ–ಸಂಸ್ಕೃತಿಯ ಉಳಿವಿನ ಜೊತೆಗೆ ಧಾರ್ಮಿಕ ಕಾರ್ಯದ ಮೂಲಕ ಆತ್ಮ ಕಲ್ಯಾಣ–ಜನಕಲ್ಯಾಣವೇ ಪೂಜ್ಯ ಶ್ರೀಗಳವರ ಸಂಕಲ್ಪವಾಗಿದೆ ಎಂದರು.
ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಮುಗುಳಿ ತಿರುಮಲೇಶ್ವರ ಭಟ್, ಶ್ರೀ ಸುಬ್ರಹ್ಮಣ್ಯೇಶ್ವರ ಕಲಾ ಸಂಘದ ಗೌರವಾಧ್ಯಕ್ಷ ಶ್ರೀ ಪಟ್ಲಗುತ್ತು ಮಹಾಬಲ ಶೆಟ್ಟಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ರಘುನಾಥ ಶೆಟ್ಟಿ ಪಟ್ಲಗುತ್ತು, ಮೈಸೂರಿನ ನ್ಯಾಯವಾದಿ ಶ್ರೀ ಶ್ಯಾಮ ಭಟ್ ಒಡಿಯೂರು ಉಪಸ್ಥಿತರಿದ್ದರು.
ಷಷ್ಠ್ಯಬ್ದ ಸಂಭ್ರಮ ಸಮಿತಿಯ ಅಧ್ಯಕ್ಷ ಶ್ರೀ ಸತ್ಯನಾರಾಯಣ ಭಟ್ ಸೇರಾಜೆ ಮಾತನಾಡಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ, ನೀಡುತ್ತಿರುವ ಒಡಿಯೂರು ಶ್ರೀಗಳವರು ಬರಡು ಭೂಮಿಯಲ್ಲಿ ಸಂಸ್ಥಾನವನ್ನು ಸ್ಥಾಪಿಸಿದುದು ಅವರ ಅಗೋಚರ ಶಕ್ತಿಯ ದ್ಯೋತಕವಾಗಿದೆ. ಮಠದ ಅಭಿವೃದ್ಧಿಯ ಜೊತೆಗೆ ಜನಕಲ್ಯಾಣ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನೀಯ. ತನ್ನ ಸಂಕಲ್ಪ ಶಕ್ತಿಯಿಂದ ಸಂಸ್ಥಾನ ನಿರ್ಮಿಸಿ, ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿರುವುದು ಸಮಾಜದ ಎಲ್ಲಾ ಬಂಧುಗಳಲ್ಲಿ ಅವರು ಇಟ್ಟಿರುವ ಪ್ರೀತಿಯೇ ಕಾರಣ. ಇವರ ಹುಟ್ಟಿದೂರು ’ಒಡಿಯೂರು’ ಕರೋಪಾಡಿ ಗ್ರಾಮದಲ್ಲಿರುವುದು ನಮ್ಮೆಲ್ಲರ ಸೌಭಾಗ್ಯ ಎಂದು ಗುರುನಮನ ಸಲ್ಲಿಸಿದರು.
ವಗೆನಾಡು ಶ್ರೀ ಸುಬ್ರಾಯ ದೇವಸ್ಥಾನದ ನಿರ್ವಹಣಾ ಸಮಿತಿಯ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಪ್ರಸ್ತಾವನೆಗೈದು ಸ್ವಾಗತಿಸಿದರು. ಶ್ರೀ ವಿನೋದ್ ಶೆಟ್ಟಿ ಪಟ್ಲ ವಂದಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಶಿಕ್ಷಕಿ ಶ್ರೀಮತಿ ಅನಿತಾ ಭಟ್ ಸಾಯ ನಿರೂಪಿಸಿದರು.
ಗ್ರಾಮದ ಎಲ್ಲಾ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಪೂಜ್ಯ ಶ್ರೀಗಳವರಿಗೆ ಗುರುವಂದನೆಗೈದರು. ಕಾರ್ಯಕ್ರಮದಲ್ಲಿ ಭಜನೆ, ಶ್ರೀ ಹನುಮಾನ್ ಚಾಲೀಸಾ ಪಠಣ ನಡೆಯಿತು. ಪೂಜ್ಯ ಶ್ರೀಗಳವರು ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸ್ವ–ಸಹಾಯ ಸಂಘಗಳಿಗೆ ಲಾಭಾಂಶ ವಿತರಿಸಿದರು. ದೇವರ ಸನ್ನಿಧಿಯಲ್ಲಿ ಸಮಿತಿಯ ಪರವಾಗಿ ವಿಶೇಷ ರಂಗಪೂಜೆ ಸಂಪನ್ನಗೊಂಡಿತು.
![](https://i0.wp.com/bantwalnews.com/wp-content/uploads/2019/10/bantwalnews.png?w=400&ssl=1)
Be the first to comment on "ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ: ಕರೋಪಾಡಿ ಗ್ರಾಮ ಸಮಿತಿಯ ಜ್ಞಾನವಾಹಿನಿ, ಮನೆ-ಮನೆ ಭಜನೆ ಸಮಾರೋಪ"