ಶಾಸಕ ರಾಜೇಶ್ ನಾಯ್ಕ್ ನೇತೃತ್ವದ ಸಭೆ ಬಳಿಕ ಜಿಪಂ ಸಿಇಒ ಕುಮಾರ್ ಮಾಹಿತಿ
![](https://i0.wp.com/bantwalnews.com/wp-content/uploads/2021/04/WhatsApp-Image-2021-04-25-at-11.15.08-1.jpeg?resize=512%2C1024&ssl=1)
![](https://i0.wp.com/bantwalnews.com/wp-content/uploads/2020/10/ಬಂಟ್ವಾಳನ್ಯೂಸ್-1.jpg?resize=640%2C236&ssl=1)
![](https://i0.wp.com/bantwalnews.com/wp-content/uploads/2021/03/BHADRA-6.jpeg?resize=777%2C953&ssl=1)
![](https://i0.wp.com/bantwalnews.com/wp-content/uploads/2021/05/WhatsApp-Image-2021-05-26-at-15.38.16.jpeg?resize=777%2C422&ssl=1)
![](https://i0.wp.com/bantwalnews.com/wp-content/uploads/2021/05/0c28e3a4-afa0-4431-99f3-c23877ed872f.jpg?resize=777%2C517&ssl=1)
ಬಂಟ್ವಾಳ: ಕೊರೊನಾ ಸೋಂಕಿತರಿಗೆ ಆಶಾ ಕಾರ್ಯಕರ್ತೆಯರ ಮೂಲಕ ಮೆಡಿಕಲ್ ಕಿಟ್ ನೀಡುವುದು, ಪ್ರಾಥಮಿಕ ಸಂಪರ್ಕ ಹೊಂದಿದವರ ಮನೆಗೇ ತೆರಳಿ ಸ್ಯಾಂಪಲ್ ಸಂಗ್ರಹಿಸಲು ವಾಹನ ವ್ಯವಸ್ಥೆ, ಸಂಗ್ರಹಿತ ಗಂಟಲು ದ್ರವ ಮಾದರಿಯನ್ನು ಅಂದೇ ಲ್ಯಾಬ್ ಗೆ ರವಾನೆ. ಜಿಲ್ಲೆಯ ಪ್ರತಿ ಗ್ರಾಪಂಗಳಿಗೆ ಗ್ಲುಕೋಮೀಟರ್ ಸಹಿತ ಕಿಟ್.
ಇದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಮಾರ್ ಅವರು ಬಂಟ್ವಾಳದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ನಡೆಸಿದ ತಾಲೂಕು ಮಟ್ಟದ ಉನ್ನತ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದ ಮಾಹಿತಿ.
ಗಂಟಲು ದ್ರವ ಮಾದರಿಯ ಸಂಗ್ರಹವನ್ನು ಮೊಬೈಲ್ ವ್ಯಾನ್ ಗಳ ಮೂಲಕ ಮನೆ ಮನೆಗೆ ತೆರಳಿ ಸಂಗ್ರಹಿಸಬೇಕು ಎಂದು ಸೂಚಿಸಲಾಗಿದ್ದು, ಐದು ಗ್ರಾಮ ಪಂಚಾಯಿತಿಗಳಿಗೆ ಒಂದರಂತೆ ವಾಹನ ಒದಗಿಸಲಾಗುವುದು ಎಂದು ಹೇಳಿದ ಕುಮಾರ್, ಸ್ಯಾಂಪಲ್ ಗಳನ್ನು ದಿನಕ್ಕೆರಡು ಬಾರಿ ಮಂಗಳೂರಿನ ಜಿಲ್ಲಾ ಲ್ಯಾಬ್ ಗೆ ರವಾನಿಸಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಮಧ್ಯಾಹ್ನ 1 ಗಂಟೆಯಿಂದ ನಂತರ ಸಂಗ್ರಹಿಸಿದ ಗಂಟಲು ದ್ರವವನ್ನು ಅದೇ ದಿನ ಲ್ಯಾಬ್ ಗೆ ಕಳುಹಿಸಬೇಕು ಎಂದು ಸೂಚಿಸಿದರು. ಮಂಗಳೂರಿನ ಲ್ಯಾಬ್ ನಲ್ಲಿ 25 ಮಂದಿ ಸಿಬ್ಬಂದಿ ಮೂರು ಹಂತದಲ್ಲಿ ಕೆಲಸ ಮಾಡುತ್ತಿದ್ದು, ಒಂದು ದಿನದಲ್ಲಿ ಟೆಸ್ಟಿಂಗ್ ರಿಪೋರ್ಟ್ ಕೊಡಲಾಗುತ್ತಿದೆ. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಕಡೆಯ ಗಂಟಲು ದ್ರವ ಮಾದರಿಯನ್ನು ಮಂಗಳೂರಿನಲ್ಲಿ ಕಡಬ, ಪುತ್ತೂರು ಸುಳ್ಯದ ಸ್ಯಾಂಪಲ್ ಅನ್ನು ಸುಳ್ಯದ ಕೆವಿಜಿಯಲ್ಲಿ ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, 24 ತಾಸಿನೊಳಗೆ ಫಲಿತಾಂಶ ದೊರಕಿಸಲು ಇದು ಸುಲಭವಾಗುತ್ತದೆ ಎಂದು ಹೇಳಿದರು.
ಫಲಿತಾಂಶವನ್ನು ಜನರಿಗೆ ವೇಗವಾಗಿ ತಿಳಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಡೇಟಾ ಅಪ್ಲೋಡ್ ಮಾಡಿದ ಕೂಡಲೇ ಮೆಸೇಜ್ ಬರುವಂತೆ ಏಜನ್ಸಿಯೊಂದರ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಪಾಸಿಟಿವ್ ಬಂದವರನ್ನು ಸ್ಪಂದಿಸಲು ವೈದ್ಯರ ವಾರ್ ರೂಮ್ ಸಕ್ರಿಯವಾಗಿದೆ. ಈಗಾಗಲೇ ಮೈಸೂರು ಮತ್ತು ಮಂಗಳೂರುಗಳಲ್ಲಿ ಬೆಡ್ ಮ್ಯಾನೇಜ್ಮೆಂಟ್ ಅನ್ನು ಆನ್ಲೈನ್ ನಲ್ಲಿ ಕಲ್ಪಿಸಲಾಗಿದೆ. ತಾಲೂಕಿನಲ್ಲಿಯೂ ಪಂಚಾಯಿತಿ ವತಿಯಿಂದ ಆಶಾ ಕಾರ್ಯಕರ್ತೆಯರು, ಶಿಕ್ಷಕಿಯರಿಗೆ ಹೆಲ್ಪ್ ಲೈನ್ ಮೂಲಕ ಮಾಹಿತಿ ರವಾನಿಸಲಾಗುತ್ತದೆ ಎಂದರು.
ಸೋಂಕಿತರಿಗೆ ಮೆಡಿಕಲ್ ಕಿಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರಿಗೆ ಈಗಾಗಲೇ 10 ಸಾವಿರ ಮೆಡಿಕಲ್ ಕಿಟ್ ತಯಾರಿಸಲಾಗಿದ್ದು, ಇವರಲ್ಲಿ ಲಕ್ಷಣರಹಿತರು, ಲಕ್ಷಣಸಹಿತರಿಗೆ ಪ್ರತ್ಯೇಕ ಕಿಟ್ ಇರುವುದು. ಮೂರು ಸಾವಿರ ಕಿಟ್ ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಬುಧವಾರ ಬಂಟ್ವಾಳದಲ್ಲಿ ವಿತರಣೆ ನಡೆದಿದೆ ಎಂದು ಕುಮಾರ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರೋಗ್ಯ ಇಲಾಖೆಗೆ 1400 ಪಲ್ಸ್ ಆಕ್ಸೋಮೀಟರ್ ಅನ್ನು ಕೊಡಲಾಗಿದೆ. 10 ಸಾವಿರ ಮೆಡಿಕಲ್ ಕಿಟ್ ತಯಾರಿಯಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ 15 ಲಕ್ಷ ರೂ ವೆಚ್ಚದಲ್ಲಿ ಬ್ಯಾಂಕ್ ಆಫ್ ಬರೋಡಾ ಸಹಕಾರದೊಂದಿಗೆ ಗ್ಲುಕೊಮೀಟರ್, 500 ಮಾಸ್ಕ್, ಸ್ಯಾನಿಟೈಸರ್ ಜಿಲ್ಲೆಯಲ್ಲಿರುವ ಎಲ್ಲಾ ಪಂಚಾಯಿತಿಗಳಿಗೆ ಒದಗಿಸಲಾಗುತ್ತದೆ ಎಂದರು. ಸಭೆಯಲ್ಲಿ ತಹಸೀಲ್ದಾರ್ ರಶ್ಮಿ ಎಸ್.ಆರ್, ತಾಪಂ ಇಒ ರಾಜಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಬುಡಾ ಅಧ್ಯಕ್ಷ ದೇವದಾಸ ಶೆಟ್ಟಿ, ನೋಡಲ್ ಅಧಿಕಾರಿಗಳಾದ ಗಾಯತ್ರಿ ಕಂಬಳಿ, ಆರ್.ಐ.ಗಳಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮೆಡಿಕಲ್ ಕಿಟ್ ಮತ್ತು ಪಲ್ಸ್ ಆಕ್ಸೋಮೀಟರ್ ಅನ್ನು ವಿತರಿಸಲಾಯಿತು.
Be the first to comment on "ಪ್ರತಿ ಸೋಂಕಿತರಿಗೆ ಮೆಡಿಕಲ್ ಕಿಟ್, ಮನೆ ಮನೆಗೆ ತೆರಳಿ ಟೆಸ್ಟಿಂಗ್, ಸ್ಯಾಂಪಲ್ ರವಾನೆಗೆ ವ್ಯವಸ್ಥೆ"