ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸೂರಿಕುಮೇರು ಎಂಬಲ್ಲಿ ಮಸೀದಿ ಮುಂಭಾಗ ಮಂಗಳವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಒಂದು ಮಗುಚಿಬಿದ್ದ ಪರಿಣಾಮ ಬೆಳಗ್ಗೆ 4 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕಲ್ಲಡ್ಕ ಮತ್ತು ಮಾಣಿ ಮಧ್ಯೆ ವಾಹನ ಸಂಚಾರ ಸ್ಥಗಿತಗೊಂಡಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಲೀ, ಗ್ಯಾಸ್ ಸೋರಿಕೆಯಾಗಲೀ ನಡೆಯದಿದ್ದ ಕಾರಣ ಭಾರೀ ಅನಾಹುತವೊಂದು ತಪ್ಪಿಹೋಯಿತು. ಬೆಳಗ್ಗೆ ಸುಮಾರು 4 ಗಂಟೆ ವೇಳೆಗೆ ಈ ಅಪಘಾತ ಸಂಭವಿಸಿದೆ. ವಿಟ್ಲ ಎಸ್.ಐ.ವಿನೋದ್ ರೆಡ್ಡಿ, ಬಂಟ್ವಾಳ ಟ್ರಾಫಿಕ್ ಎಸ್.ಐ. ರಾಜೇಶ್ ಸಹಿತ ಬಂಟ್ವಾಳ ಪೊಲೀಸರು ಸಂಚಾರ ನಿಯಂತ್ರಣದೊಂದಿಗೆ ತೆರವು ಕಾರ್ಯಾಚರಣೆಯನ್ನು ಆರಂಭಿಸಿದರು. ಮಧ್ಯಾಹ್ನ 2 ಗಂಟೆಯ ವೇಳೆಗೆ ಕ್ರೇನ್ ಮೂಲಕ ಮಗುಚಿದ ಟ್ಯಾಂಕರ್ ಅನ್ನು ಮೊದಲಿನಂತೆ ಮಾಡಲಾಯಿತು. ಬಳಿಕ ಅದನ್ನು ರಸ್ತೆಯಿಂದ ಬೇರೆಡೆಗೆ ಸರಿಸಲಾಯಿತು. ಅಷ್ಟು ಹೊತ್ತಿಗಾಗಲೇ ವಾಹನಗಳು ಎರಡೂ ಬದಿ ಸಾಲುಗಟ್ಟಿ ನಿಂತಿದ್ದವು. ಟ್ಯಾಂಕರ್ ಅಪಘಾತ ಸ್ಥಳಕ್ಕೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭ, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ್ ಉಪಸ್ಥಿತರಿದ್ದರು. ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಭರತ್ ಕುಮಾರ್, ಬಂಟ್ವಾಳ ಅಗ್ನಿಶಾಮಕ ಠಾಣಾಧಿಕಾರಿ ಯೋಗೀಶ್, ವಿಟ್ಲ ಎಸೈ ವಿನೋದ್ ರೆಡ್ಡಿ, ಮೆಲ್ಕಾರ್ ಟ್ರಾಪಿಕ್ ಠಾಣಾ ಎಸೈ ರಾಜೇಶ್ ಕೆ.ವಿ, ಪುತ್ತೂರು ಅಗ್ನಿಶಾಮಕದಳ, ಉಪ್ಪಿನಂಗಡಿಯ ಕ್ರೈನ್ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು, ಮಧ್ಯಾಹ್ನ ಎರಡು ಗಂಟೆ ವೇಳೆ ಹೆದ್ದಾರಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
(more…)