ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹವಾದ್ರೆ ದೊರೆಯಲಿದೆ ಸವಲತ್ತು

  • ಹಿಂದುಗಳ ಸಾಮೂಹಿಕ ವಿವಾಹ ಯೋಜನೆ ಪ್ರಕಟಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ದೇಗುಲಗಳಲ್ಲಿ ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆಯಾದ್ರೆ ಹಲವು ಸವಲತ್ತುಗಳು ಸರಕಾರದಿಂದ ದೊರೆಯುತ್ತವೆ. ಆದರೆ ಇವಕ್ಕೆ ಕೆಲ ಷರತ್ತುಗಳೂ ಅನ್ವಯಿಸುತ್ತವೆ.

ಜಾಹೀರಾತು

ಬೆಂಗಳೂರಿನಲ್ಲಿ ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ , ಮುಂದಿನ ವರ್ಷದಿಂದ ಸಾಮೂಹಿಕ‌ ಮದುವೆಗಳನ್ನು ಸರ್ಕಾರದಿಂದ ಮಾಡಲು ನಿರ್ಧರಿಸಲಾಗಿದೆ. ಎ ದರ್ಜೆಯ 90 ರಿಂದ 100 ದೇವಾಲಯಗಳಲ್ಲಿ ಸಾಮೂಹಿಕ ಮದುವೆ ನೆರವೇರಲಿದೆ. ಮೊದಲ ಸಾಮೂಹಿಕ ಮದುವೆ ಏಪ್ರಿಲ್ 26 ಮತ್ತು ಎರಡನೇ ಸಾಮೂಹಿಕ ಮದುವೆ ಮೇ 24 ರಂದು ಆಯೋಜಿಸಲಾಗುವುದು ಎಂದರು.

ಕೊಲ್ಲೂರು ಮೂಕಾಂಬಿಕೆ, ಬೆಂಗಳೂರಿನ ಬನಶಂಕರಿ, ಮೈಸೂರು ಚಾಮುಂಡೇಶ್ವರಿ, ಕುಕ್ಕೆ ಸುಬ್ರಮಣ್ಯ, ನಂಜನಗೂಡು ನಂಜುಂಡೇಶ್ವರ ಸೇರಿ ಮುಜರಾಯಿ ಇಲಾಖೆ ವ್ಯಾಪ್ತಿಯ 90 ರಿಂದ 100 ಎ ಶ್ರೇಣಿಯ ಪ್ರತಿಷ್ಠಿತ ಮತ್ತು ಶ್ರೀಮಂತ ದೇವಾಲಯಗಳಲ್ಲಿ ಸರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸುತ್ತದೆ.

30 ದಿನಗಳ ಮೊದಲೇ ನೋಂದಣಿ ಮಾಡಬೇಕು. ವಧು-ವರ ಎರಡೂ ಕಡೆಯವರು ಮದುವೆಯಲ್ಲಿ ಪಾಲ್ಗೊಳ್ಳಬೇಕು,  2ನೇ ಮದುವೆಗೆ ಅವಕಾಶವಿಲ್ಲ. ವರನಿಗೆ 21 ಮತ್ತು ವಧುವಿಗೆ 18 ವರ್ಷ ತುಂಬಿರಲೇಬೇಕು., ಹುಡುಗ ಮತ್ತು ಹುಡುಗಿಯ ಹೆತ್ತವರ ಒಪ್ಪಿಗೆ ಕಡ್ಡಾಯ.

ವಧುವಿನ ತಾಳಿಗಾಗಿ 40 ಸಾವಿರ ರೂ, ಧಾರೆ ಸೀರೆ ಖರೀದಿಸಲು 10 ಸಾವಿರ ರೂ  ವರನಿಗೆ ಪಂಚೆ, ಧೋತಿ ಖರೀದಿಗೆ 5 ಸಾವಿರ ರೂ ನೀಡಲಾಗುತ್ತದೆ. ಆಯಾ ಜಿಲ್ಲಾಧಿಕಾರಿಗಳು ವರ ಮತ್ತು ವಧುವಿನ ಖಾತೆಗಳಿಗೆ ಈ ಮೊತ್ತ ಜಮಾ ಮಾಡಲಿದ್ದಾರೆ

ಜೋಡಿಗೆ ಶಿಶು ಕಲ್ಯಾಣ ಇಲಾಖೆಯ ಪ್ರೋತ್ಸಾಹ ಧನ ಸೇರಿ ಸರಕಾರದ ಇನ್ನಿತರ ಸವಲತ್ತುಗಳೂ ಸಿಗಲಿವೆ. ವಧು -ವರ ಎರಡೂ ಕಡೆಯವರಿಗೆ ಭೋಜನ ವ್ಯವಸ್ಥೆಯೂ ಉಚಿತವಾಗಿ ಇರಲಿದೆ.

ಹಿಂದೂ ಸಂಪ್ರದಾಯದ ವಿಧಿ -ವಿಧಾನಗಳಂತೆ ವಿವಾಹಗಳು ನಡೆಯಲಿದ್ದು, ಬಡವರು ಅಥವಾ ಶ್ರೀಮಂತರು ಎಂಬ ಬೇಧ ಭಾವವಿಲ್ಲ. ಯಾರು ಬೇಕಾದರೂ ತಿಂಗಳ ಮೊದಲೇ ಅರ್ಜಿ ಸಲ್ಲಿಸಿ ವಿವಾಹ ಮಾಡಿಕೊಳ್ಳಬಹುದು.  ಹಿಂದೂ ಕ್ಯಾಲೆಂಡರ್‌ ಪ್ರಕಾರವೇ ಶುಭ ದಿನವನ್ನು ನಿಶ್ಚಯಗೊಳಿಸಲಾಗಿದೆ

ಮುಜರಾಯಿ ಇಲಾಖೆಯಿಂದ ಹಿಂದೂ ಪದ್ಧತಿಯಂತೆ ಈ ವಿವಾಹ ಕಾರ್ಯಕ್ರಮ ನಡೆಯುವುದರಿಂದ ಅನ್ಯ ಧರ್ಮೀಯರಿಗೆ ಈ ಯೋಜನೆಯಲ್ಲಿ ಅವಕಾಶವಿಲ್ಲ. ಆದರೆ, ವಧು -ವರ ಎರಡೂ ಕಡೆಯ ಹೆತ್ತವರ ಒಪ್ಪಿಗೆಯೊಂದಿಗೆ ಅಂತರ್ಜಾತಿ ವಿವಾಹಕ್ಕೆ ಅವಕಾಶವಿರುತ್ತದೆ.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ಅರ್ಜಿದಾರರ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಿ, ಆಕ್ಷೇಪಗಳು ಬಂದರೆ ಆಲಿಸಲಾಗುವುದು. ಸರ್ವಸಮ್ಮತ ಮದುವೆಯೇ ಒಟ್ಟಾರೆ ಆಶಯ ಎಂದು ಸಚಿವರು ತಿಳಿಸಿದ್ದಾರೆ.

  • ಬೆಂಗಳೂರು ವರದಿ

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹವಾದ್ರೆ ದೊರೆಯಲಿದೆ ಸವಲತ್ತು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*