ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿ ವಿರೋಧಿಸಿ ಸರ್ಕಾರವನ್ನು ಕಿತ್ತೆಸೆಯುವ ಉದ್ದೇಶದಿಂದ ಶನಿವಾರ ಕುಶಾಲನಗರದಿಂದ ಬಿಜೆಪಿಯ ಜನಸುರಕ್ಷಾ ಯಾತ್ರೆ ಮಂಗಳೂರು ಚಲೋ ನಡೆಯಲಿದ್ದು, ಮಾ.5ರಂದು ಬಂಟ್ವಾಳ ಕ್ಷೇತ್ರ ಪ್ರವೇಶಿಸಲಿದೆ.
ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಎಸ್. ಕೊಟ್ಟಾರಿ, ಮಾಣಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುತ್ತಿದ್ದು, ಬಳಿಕ ಬೈಕ್ ರ್ಯಾಲಿ ಮೂಲಕ ಮೇಲ್ಕಾರ್ಗೆ ತಲುಪಿ, ಅಲ್ಲಿಂದ ಪಾದಯಾತ್ರೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ವಿವರಿಸಿದರು.
ಸಭೆಯಲ್ಲಿ ಯಾತ್ರೆ ನೇತೃತ್ವ ವಹಿಸುತ್ತಿರುವ ಸಂಸದರಾದ ಪ್ರತಾಪ್ಸಿಂಹ ಮತ್ತು ನಳಿನ್ ಕುಮಾರ್ ಕಟೀಲ್ ಮಾತನಾಡಲಿದ್ದು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ ಯಾತ್ರೆ ಮೂಡುಬಿದಿರೆಯತ್ತ ತೆರಳಲಿದೆ ಎಂದರು.
ಮಾ.೬ರಂದು ಮಂಗಳೂರಿನಲ್ಲಿ ಅಂಕೋಲದಿಂದ ಉಡುಪಿ ಮೂಲಕ ಮಂಗಳೂರಿಗೆ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆಗಮಿಸುವ ಜನಸುರಕ್ಷಾ ಯಾತ್ರೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕೇಂದ್ರ ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ. ಸಮಾವೇಶದಲ್ಲ ಬಂಟ್ವಾಳ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.
ದ.ಕ.ಜಿಲ್ಲೆಯಲ್ಲಿ ಭಯಮುಕ್ತ, ಹತ್ಯಾಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುತ್ತಿದ್ದು, ಇದನ್ನು ಬಯಸುವ ಎಲ್ಲ ಸಮಾಜ, ಜಾತಿಯ ಬಂಧುಗಳು, ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸುವಂತೆ ಇನ್ನೋರ್ವ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ತಿಳಿಸಿದರು. ಸಮಾವೇಶದಲ್ಲಿ ಅವಿಭಜಿತ ಜಿಲ್ಲೆಯ ಮಹಿಳಾ ಬೃಹತ್ ಸಮಾವೇಶ ನಡೆಯಲಿದೆ ಎಂದು ಹರಿಕೃಷ್ಣ ಹೇಳಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ಭಾಷಣ ಮಾಡಲಿದ್ದು, ಪಕ್ಷ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಭಾಧ್ಯಕ್ಷತೆ ವಹಿಸುವರು ಎಂದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧವನ್ನು ರದ್ದುಗೊಳಿಸಿದ ಪರಿಣಾಮ ಅಕ್ರಮ ಗೋಸಾಗಾಟ, ತಲವಾರು ತೋರಿಸಿ ಹಟ್ಟಿಯಿಂದಲೇ ಗೋಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 23 ಬಿಜೆಪಿ ಸಂಘಪರಿವಾರ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಮಠ ಮಂದಿರ ವಶಪಡಿಸುವ ಹುನ್ನಾರ, ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸು ವಾಪಸ್ ಪಡೆದಿರುವುದು, ಟಿಪ್ಪು ಜಯಂತಿ ಆಚರಣೆ, ಬಹುಮನಿ ಸುಲ್ತಾನ್ ಜಯಂತಿ ಆಚರಣೆ, ಸಂಘ ಪರಿವಾರ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲೆ, ಹಿಂದು ಸಂಘಟನೆ ಹತ್ತಿಕ್ಕುತ್ತಿರುವುದು ಹಾಗೂ ತಾಲೂಕಿನ ಎರಡು ಶಾಲೆಗಳಿಗೆ ಅನ್ನದಾಸೋಹ ನೆರವು ರದ್ದುಗೊಳಿಸಿರುವುದು ಹಿಂದು ವಿರೋಧಿ ನೀತಿಗೆ ಪ್ರಮುಖ ಉದಾಹರಣೆ ಎಂದರು.
ಬಂಟ್ವಾಳ ತಾಲೂಕಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಸಹಿತ ಹಿಂದು ಕಾರ್ಯಕರ್ತರ ಹತ್ಯೆಗೆ ನ್ಯಾಯ ಒದಗಿಸುವ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಹಿನ್ನೆಲೆಯಲ್ಲಿ ಯಾತ್ರೆಗೆ ಮಹತ್ವವಿದೆ ಎಂದು ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಜಿ.ಆನಂದ, ರಾಮದಾಸ ಬಂಟ್ವಾಳ, ಶ್ರೀಕಾಂತ ಶೆಟ್ಟಿ, ದಿನೇಶ್ ಭಂಡಾರಿ, ಸುಗುಣ ಕಿಣಿ, ವಜ್ರನಾಥ ಕಲ್ಲಡ್ಕ, ರಂಜಿತ್ ಕುಮಾರ್ ಮೈರ, ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.
Be the first to comment on "ಮಾ.5ರಂದು ಬಂಟ್ವಾಳದಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆ ಸಂಚಾರ"