ಮಾ.5ರಂದು ಬಂಟ್ವಾಳದಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆ ಸಂಚಾರ

ರಾಜ್ಯ ಸರ್ಕಾರದ ಹಿಂದು ವಿರೋಧಿ ನೀತಿ ವಿರೋಧಿಸಿ ಸರ್ಕಾರವನ್ನು ಕಿತ್ತೆಸೆಯುವ ಉದ್ದೇಶದಿಂದ ಶನಿವಾರ ಕುಶಾಲನಗರದಿಂದ ಬಿಜೆಪಿಯ ಜನಸುರಕ್ಷಾ ಯಾತ್ರೆ ಮಂಗಳೂರು ಚಲೋ ನಡೆಯಲಿದ್ದು, ಮಾ.5ರಂದು ಬಂಟ್ವಾಳ ಕ್ಷೇತ್ರ ಪ್ರವೇಶಿಸಲಿದೆ.

ಜಾಹೀರಾತು

ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರ ಜಿತೇಂದ್ರ ಎಸ್. ಕೊಟ್ಟಾರಿ, ಮಾಣಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುತ್ತಿದ್ದು, ಬಳಿಕ ಬೈಕ್ ರ್‍ಯಾಲಿ ಮೂಲಕ ಮೇಲ್ಕಾರ್‌ಗೆ ತಲುಪಿ, ಅಲ್ಲಿಂದ ಪಾದಯಾತ್ರೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದು ವಿವರಿಸಿದರು.

ಸಭೆಯಲ್ಲಿ ಯಾತ್ರೆ ನೇತೃತ್ವ ವಹಿಸುತ್ತಿರುವ ಸಂಸದರಾದ ಪ್ರತಾಪ್‌ಸಿಂಹ ಮತ್ತು ನಳಿನ್ ಕುಮಾರ್ ಕಟೀಲ್ ಮಾತನಾಡಲಿದ್ದು, ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಬಳಿಕ ಯಾತ್ರೆ ಮೂಡುಬಿದಿರೆಯತ್ತ ತೆರಳಲಿದೆ ಎಂದರು.

ಮಾ.೬ರಂದು ಮಂಗಳೂರಿನಲ್ಲಿ ಅಂಕೋಲದಿಂದ ಉಡುಪಿ ಮೂಲಕ ಮಂಗಳೂರಿಗೆ ಸಚಿವ ಅನಂತಕುಮಾರ ಹೆಗಡೆ ಮತ್ತು ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಆಗಮಿಸುವ ಜನಸುರಕ್ಷಾ ಯಾತ್ರೆ ಮಂಗಳೂರಿಗೆ ತಲುಪಲಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ ಕೇಂದ್ರ ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ. ಸಮಾವೇಶದಲ್ಲ ಬಂಟ್ವಾಳ ಕ್ಷೇತ್ರದಿಂದ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಜಾಹೀರಾತು

ದ.ಕ.ಜಿಲ್ಲೆಯಲ್ಲಿ ಭಯಮುಕ್ತ, ಹತ್ಯಾಮುಕ್ತ ಸಮಾಜ ನಿರ್ಮಿಸುವ ಉದ್ದೇಶದಿಂದ ಈ ಯಾತ್ರೆ ನಡೆಸಲಾಗುತ್ತಿದ್ದು, ಇದನ್ನು ಬಯಸುವ ಎಲ್ಲ ಸಮಾಜ, ಜಾತಿಯ ಬಂಧುಗಳು, ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸುವಂತೆ ಇನ್ನೋರ್ವ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ತಿಳಿಸಿದರು. ಸಮಾವೇಶದಲ್ಲಿ ಅವಿಭಜಿತ ಜಿಲ್ಲೆಯ ಮಹಿಳಾ ಬೃಹತ್ ಸಮಾವೇಶ ನಡೆಯಲಿದೆ ಎಂದು ಹರಿಕೃಷ್ಣ ಹೇಳಿದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಮುಖ ಭಾಷಣ ಮಾಡಲಿದ್ದು, ಪಕ್ಷ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಭಾಧ್ಯಕ್ಷತೆ ವಹಿಸುವರು ಎಂದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯೆ ನಿಷೇಧವನ್ನು ರದ್ದುಗೊಳಿಸಿದ ಪರಿಣಾಮ ಅಕ್ರಮ ಗೋಸಾಗಾಟ, ತಲವಾರು ತೋರಿಸಿ ಹಟ್ಟಿಯಿಂದಲೇ ಗೋಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಸುಮಾರು 23 ಬಿಜೆಪಿ  ಸಂಘಪರಿವಾರ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ. ಮಠ ಮಂದಿರ ವಶಪಡಿಸುವ ಹುನ್ನಾರ, ಪಿಎಫ್‌ಐ ಕಾರ್ಯಕರ್ತರ ಮೇಲಿನ ಕೇಸು ವಾಪಸ್ ಪಡೆದಿರುವುದು, ಟಿಪ್ಪು ಜಯಂತಿ ಆಚರಣೆ, ಬಹುಮನಿ ಸುಲ್ತಾನ್ ಜಯಂತಿ ಆಚರಣೆ, ಸಂಘ ಪರಿವಾರ ಕಾರ್ಯಕರ್ತರ ಮೇಲೆ ಸುಳ್ಳು ಕೇಸು ದಾಖಲೆ, ಹಿಂದು ಸಂಘಟನೆ ಹತ್ತಿಕ್ಕುತ್ತಿರುವುದು ಹಾಗೂ ತಾಲೂಕಿನ ಎರಡು ಶಾಲೆಗಳಿಗೆ ಅನ್ನದಾಸೋಹ ನೆರವು ರದ್ದುಗೊಳಿಸಿರುವುದು ಹಿಂದು ವಿರೋಧಿ ನೀತಿಗೆ ಪ್ರಮುಖ ಉದಾಹರಣೆ ಎಂದರು.

ಜಾಹೀರಾತು

ಬಂಟ್ವಾಳ ತಾಲೂಕಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಸಹಿತ ಹಿಂದು ಕಾರ್ಯಕರ್ತರ ಹತ್ಯೆಗೆ ನ್ಯಾಯ ಒದಗಿಸುವ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳುವ ಹಿನ್ನೆಲೆಯಲ್ಲಿ ಯಾತ್ರೆಗೆ ಮಹತ್ವವಿದೆ ಎಂದು ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಜಿ.ಆನಂದ, ರಾಮದಾಸ ಬಂಟ್ವಾಳ, ಶ್ರೀಕಾಂತ ಶೆಟ್ಟಿ, ದಿನೇಶ್ ಭಂಡಾರಿ, ಸುಗುಣ ಕಿಣಿ, ವಜ್ರನಾಥ ಕಲ್ಲಡ್ಕ, ರಂಜಿತ್ ಕುಮಾರ್ ಮೈರ, ಸೀತಾರಾಮ ಪೂಜಾರಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಾ.5ರಂದು ಬಂಟ್ವಾಳದಲ್ಲಿ ಬಿಜೆಪಿಯ ಜನಸುರಕ್ಷಾ ಯಾತ್ರೆ ಸಂಚಾರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*