ವಿಟ್ಲ

ವಿಟ್ಲ ಪರಿಸರದಲ್ಲಿ ನಿರ್ಭೀತಿಯಿಂದ ಕೃತ್ಯವೆಸಗುವ ಕಳ್ಳರು

ಇನ್ನು ಎಷ್ಟು ಅಂಗಡಿ, ಬ್ಯಾಂಕು, ಮನೆಗಳಿಗೆ ಚೋರರು ಲಗ್ಗೆ ಇಡಬೇಕು?

www.bantwalnews.com

ಜಾಹೀರಾತು

ಸಹಕಾರಿ ಸಂಘ, ಜವಳಿ ಅಂಗಡಿ, ಸೆಲೂನ್, ಮನೆ…

ಇದು ಯಾವುದೋ ಬೀದಿಯಲ್ಲಿ ಏನಿದೆ ಎಂದು ಹೇಳುವ ಲೆಕ್ಕ ಅಲ್ಲ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿಂದ ಕಳ್ಳರು ತಮ್ಮ ಕೃತ್ಯಕ್ಕಾಗಿ ನಿರ್ಭಯವಾಗಿ ‘ವಿಸಿಟ್’ ಮಾಡುವ ಜಾಗಗಳು.

ವಿಟ್ಲ ಪೊಲೀಸರಿಗೂ ತಲೆನೋವು, ಜನರಿಗೂ ತಲೆನೋವು. ಕಳ್ಳರು ಅದು ಹೇಗೆ ಡಾಂಬರು ರಸ್ತೆಯಲ್ಲೇ ಬಂದು ಕಳವು ಕೃತ್ಯವನ್ನೋ, ವಿಫಲ ಯತ್ನವನ್ನೋ ನಡೆಸಿ ಮರಳುತ್ತಾರೆ? ಊರಿಡೀ ಕಳ್ಳತನದ ಬಗ್ಗೆ ಚರ್ಚೆಗಳು ನಡೆದರೂ ಯಾವುದೇ ಹೆದರಿಕೆ ಇಲ್ಲದೆ ಇನ್ನೊಂದು ಕಳವು ಅಥವಾ ಕಳವು ಯತ್ನ ಕೃತ್ಯ ಅದು ಹೇಗೆ ನಡೆಯುತ್ತದೆ?

ಹೀಗಾಗಿ ವಿಟ್ಲ ಪರಿಸರದ ಜನರೇ ಹುಷಾರು. ನಿಮ್ಮ ಜಾಗ್ರತೆಯಲ್ಲಿ ನೀವಿರಿ. ಕಳ್ಳರು ಬರಬಹುದು ಎಂದು ಒಬ್ಬರಿಗೊಬ್ಬರು ಜಾಗ್ರತೆ ಎಂದು ಹೇಳುವ ಪರಿಸ್ಥಿತಿ ಇಂದು ಬಂದೊದಗಿದೆ.

ಈ ಮಾತುಗಳು ಯಾಕೆ ಈಗ ಎಂದು ಕೇಳಿದರೆ ಇಂದು ಬೆಳಗ್ಗೆ ಸಾಲೆತ್ತೂರಿನಲ್ಲಿ ಏನಾಯಿತು ಎಂಬ ವಿಚಾರವನ್ನು ಇಲ್ಲಿ ಪ್ರಸ್ತಾಪಿಸಬೇಕಾಗುತ್ತದೆ.

ಸಾಲೆತ್ತೂರಿನಲ್ಲಿ ಏನಾಯಿತು?

ಜಲೀಲ್ ಎಂಬವರ ಜವುಳಿ ಮಳಿಗೆ, ಸೆಲೂನ್ ಅಂಗಡಿ, ರಾಮಕೃಷ್ಣ ಶೆಟ್ಟಿ ಪೆರ್ಲದಬೈಲು ಎಂಬವರ ಅಂಗಡಿ ಹಾಗೂ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಸಾಲೆತ್ತೂರು ಶಾಖೆಯಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಘ್ಗಿನ ಮಧ್ಯೆ ಕಳವು ಯತ್ನಗಳು ನಡೆದಿದೆ. ಜವಳಿ ಮಳಿಗೆಯ ಹಾಗೂ ಸೆಲೂನ್‌ನ ಬಾಗಿಲು ತುಂಡರಿಸಲು ಯತ್ನಿಸಿದ್ದು, ಸಾಧ್ಯವಾಗದೇ ಬಿಟ್ಟಿದ್ದಾರೆ. ಬಸ್ ನಿಲ್ದಾಣದ ಪಕ್ಕದಲ್ಲಿ ರಾಮಕೃಷ್ಣ ಪೆರ್ಲದಬೈಲು ಎಂಬವರಿಗೆ ಸೇರಿದ ಅಂಗಡಿಯ ಬಾಗಿಲು ಮುರಿದು ಒಳಗೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಸಿಗರೇಟ್ ಪ್ಯಾಕ್ ಹಾಗೂ ಚಿಲ್ಲರೆ ಹಣವನ್ನು ಕದ್ದೊಯ್ಯಲಾಗಿದೆ.

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಕಚೇರಿ ಮೊದಲ ಮಹಡಿಯಲ್ಲಿದೆ. ಇದರ ಮೆಟ್ಟಲಿಗೆ ಇದ್ದ ಸೇಫ್ ಗಾರ್ಡ್ ಕೊರೆದು, ಶಟರ್ ನ ಎರಡು ಲಾಕ್ ಚಿಲಕವನ್ನು ತುಂಡರಿಸಿ ಒಳನುಗ್ಗಿದ ಕಳ್ಳರು, ದಾಖಲೆ ಹಾಗೂ ಕಾಗದ ಪತ್ರಗಳನ್ನು ಚೆಲ್ಲಾಡಿ ಲಾಕರ್ ಅನ್ನು ತೆರೆಯಲು ಪ್ರಯತ್ನಿಸಿದ್ದರು. ಇಷ್ಟು ಹೊತ್ತಿಗೆ ಕಟ್ಟಡದ ಮಾಲಿಕರಿಗೆ ಶಬ್ದ ಕೇಳಿ ಎಚ್ಚರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಾಗಲೇ ಕಳ್ಳರು ಪರಾರಿಯಾಗಿದ್ದರು.

ಇತ್ತೀಚಿಗಿನ ಪ್ರಕರಣಗಳು:

ತೀರಾ ಇತ್ತೀಚಿನ ಪ್ರಕರಣಗಳು ಇವು. ವಿಟ್ಲ ಕಲ್ಲಡ್ಕ ರಸ್ತೆಯ ಮಂಗಳಪದವು ಎಂಬಲ್ಲಿ ನ.28ರಂದು ಕೋ ಅಪರೇಟಿವ್ ಸೊಸೈಟಿಗೆ ನುಗ್ಗಿದ ಕಳ್ಳರು ದರೋಡೆಗೆ ವಿಫಲ ಯತ್ನ ನಡೆಸಿದ್ದರು.

ಡಿ.7ರಂದು ಉಕ್ಕುಡದಲ್ಲಿ ಮನೆಯೊಂದರಿಂದ ಸುಮಾರು 10.5 ಲಕ್ಷ ರೂ. ಮೌಲ್ಯದ ಬಂಗಾರ ಕಳ್ಳತನ ನಡೆದಿತ್ತು.

ಸಾಲೆತ್ತೂರಿನಲ್ಲೂ ಖಾಸಗೀ ಬಸ್ ನಿಂದ ಬ್ಯಾಟರಿ ಕಳವು, ಅಂಗಡಿ ಕಳವು ಸೇರಿ ಹಲವು ಪ್ರಕರಣಗಳು ಸಾಲೆತ್ತೂರಿನಲ್ಲಿ ನಡೆದಿದ್ದವು.

ಜಾಹೀರಾತು
Harish Mambady

ಕಳೆದ 27 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ. Harish Mambady - who has experience working as a Journalist in various Print and Digital Media in Dakshina Kannada, Udupi (Mangalore, Manipal, and Bantwal) for the past 27 years, He Started digital Media www.bantwalnews.com in 2016.