ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದತೆಯೆಡೆಗೆ ಸಾಮರಸ್ಯದ ನಡಿಗೆ ಮಂಗಳವಾರ ಬೆಳಗ್ಗೆ 9 ಗಂಟೆಯ ಬಳಿಕ ಆರಂಭಗೊಳ್ಳಲಿದೆ. ಬಹುಭಾಷಾ ಚಲನಚಿತ್ರನಟ ಪ್ರಕಾಶ್ ರೈ ಸಹಿತ ಚಿತ್ರೋದ್ಯಮದ ಸ್ಥಳೀಯ ತಾರೆಗಳು, ರಾಜಕಾರಣಿಗಳು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ.
ಫರಂಗಿಪೇಟೆಯಲ್ಲಿ ಶಾಂತಿಯ ಸಂಕೇತವಾಗಿ ಪಾರಿವಾಳಗಳನ್ನು ಹಾರಿಬಿಡುವ ಮೂಲಕ ನಡಿಗೆ ಆರಂಭಗೊಳ್ಳುತ್ತದೆ. ಅಲ್ಲಿಂದ ಮಾರಿಪಳ್ಳ, ತುಂಬೆ, ಶಾಂತಿಯಂಗಡಿ, ಬಿ.ಸಿ.ರೋಡ್ ಮೂಲಕ ಮೇಲ್ಕಾರ್ ಗೆ ಯಾತ್ರೆ ಸಾಗುತ್ತದೆ. ಮೇಲ್ಕಾರ್ ನಲ್ಲಿ ಭೋಜನ ಮುಗಿಸಿದ ಬಳಿಕ ಯಾತ್ರೆ ಕಲ್ಲಡ್ಕ ಮೂಲಕ ಸಾಗಿ ಮಾಣಿ ತಲುಪುತ್ತದೆ. ಅಲ್ಲಿ ಸಭಾ ಕಾರ್ಯಕ್ರಮ ಇರಲಿದೆ ಎಂದು ಯಾತ್ರೆ ರೂವಾರಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಬಹುಭಾಷಾ ಚಿತ್ರನಟ ಪ್ರಕಾಶ್ ರೈ, ಸಿಪಿಎಂ ರಾಜ್ಯ ಮಂಡಳಿ ಕಾರ್ಯದರ್ಶಿ ಜಿ.ವಿ.ಶ್ರೀರಾಮ ರೆಡ್ಡಿ, ಸಿಪಿಐ ಹಿರಿಯ ಮುಖಂಡ ಡಾ.ಸಿದ್ದನಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಡಾ.ಎಲ್.ಹನುಮಂತಯ್ಯ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸುವರು. ಮತೀಯ ಸಾಮರಸ್ಯ, ಬಂಟ್ವಾಳ ತಾಲೂಕು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ, ಸಾಮರಸ್ಯ ಬಯಸುವವರಿಗೆ ಇದೊಂದು ಸಂದೇಶ. ಯಾರೊಡನೆಯೂ ದ್ವೇಷ ಬೇಡ. ಎಲ್ಲರಲ್ಲೂ ಶಾಂತಭಾವ ಮೂಡಲಿ. ಮನಸ್ಸು, ಮನಸ್ಸುಗಳು ಒಂದಾಗಿ ಬೆಸೆಯಲಿ. ಇದು ರಾಜಕೀಯ ಯಾತ್ರೆಯಲ್ಲ. ಜನರಲ್ಲಿ ಎಲ್ಲರೂ ಒಂದು, ನಾವೆಲ್ಲ ಒಂದಾಗಿ ಬಾಳಬೇಕು ಎಂಬ ಭಾವನೆ ಮೂಡಿಸುವುದಷ್ಟೇ ನಮ್ಮ ಉದ್ದೇಶ ಎಂದು ರೈ ಸ್ಪಷ್ಟಪಡಿಸಿದ್ದಾರೆ.