ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 22: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಣೆ

.ಗೋ. ಎಂದೇ ಚಿರಪರಿಚಿತರಾಗಿದ್ದ ಪದ್ಯಾಣ ಗೋಪಾಲಕೃಷ್ಣ (1928-1997) ಕನ್ನಡದ ಪ್ರಸಿದ್ಧ ದಿನಪತ್ರಿಕೆಗಳಲ್ಲಿ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಕೆಲಸ ಮಾಡಿದವರು. ನೇರ, ನಿಷ್ಠುರ ನಡೆಯ .ಗೋ. ಅವರು ಪತ್ರಕರ್ತನಾಗಿ ವೃತ್ತಿಜೀವನದುದ್ದಕ್ಕೂ ಸಿದ್ಧಾಂತ ಹಾಗೂ ಪ್ರಾಮಾಣಿಕತೆಯ ಹಾದಿ ಹಿಡಿದಿದ್ದರು. ವೃತ್ತಪತ್ರಿಕಾ ಜಗತ್ತಿನ ಎಲ್ಲ ಮುಖಗಳ ಅನುಭವವನ್ನು ವೃತ್ತಿನಿರತ ಪತ್ರಿಕೋದ್ಯೋಗಿಯಾಗಿ ಕಂಡ ನಾನಾ ಮುಖಗಳೂ, ಅನುಭವಿಸಿದ ನೋವು, ನಲಿವುಗಳನ್ನು ನಿರ್ಮೋಹದಿಂದ, ವಸ್ತುನಿಷ್ಠವಾಗಿ ಬರೆದ ವಿಶೇಷ ಸೃಷ್ಟಿಯ ಲೋಕದಲ್ಲಿ ವೃತ್ತಪತ್ರಿಕೆಗಳ ಕಾಲಂ ಸಾಹಿತ್ಯ ಮತ್ತು ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಬರವಣಿಗೆಇದು .ಗೋ. ಆತ್ಮಕತೆಯ ಭಾಗವೂ ಹೌದು. 2005ರಲ್ಲಿ ಪುಸ್ತಕವಾಗಿಯೂ ಪ್ರಕಟಗೊಂಡಿವೆ.

pa gO cartoon by Harini

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯನಡ್ಕದಲ್ಲಿ ಜನಿಸಿದ .ಗೋ, ಅವರ ಕೃತಿಯನ್ನು ಬಂಟ್ವಾಳನ್ಯೂಸ್ ಓದುಗರಿಗಾಗಿ ಒದಗಿಸಿಕೊಟ್ಟವರು .ಗೋ ಅವರ ಪುತ್ರ ಪದ್ಯಾಣ ರಾಮಚಂದ್ರ. (.ರಾಮಚಂದ್ರ). ಲೇಖನಮಾಲೆಯ 20ನೇ ಕಂತು ಇಲ್ಲಿದೆ. ಅಂಕಣಮಾಲೆಯಾಗಿ ಪ್ರಕಟಗೊಂಡು, ಪುಸ್ತಕರೂಪವಾಗಿ ಹೊರಬಂದ ವಿಶೇಷ ಸೃಷ್ಟಿಗಳ ಲೋಕದಲ್ಲಿ ಪುಸ್ತಕದ ಮರುಪ್ರಕಟಣೆ. ಇಲ್ಲಿ ವ್ಯಕ್ತವಾದ ವಿಚಾರಗಳೆಲ್ಲವೂ ಲೇಖಕರಿಗೆ ಸಂಬಂಧಿಸಿದ್ದಾಗಿದೆ. ಬಂಟ್ವಾಳನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ.

ಜಾಹೀರಾತು

ವಿಶೇಷ ಸೃಷ್ಟಿಗಳ ಲೋಕದಲ್ಲಿ –ಅಂಕಣ 22: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಣೆ

ಇತರ ದಿನಪತ್ರಿಕೆಗಳಿಂದ ಭಿನ್ನವಾದ ಡಬಲ್ ‘ಫುಲ್ ಸ್ಕೇಪ್’ ಗಾತ್ರದ ನಾಲ್ಕು ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಕನ್ನಡವಾಣಿಯ ‘ಪ್ರಮುಖ’ ಆಕರ್ಷಣೆಯ ಬಗ್ಗೆ ಪತ್ರಿಕೆ ಆರಂಭಿಸಿದ ಗುಂಪಿನೆ ಸದಸ್ಯರಲ್ಲಿ ಸಹಮತವಿರಲಿಲ್ಲ. ನಿಷ್ಪಕ್ಷಪಾತದ ಸ್ಥಳೀಯ ವರದಿಗಳೇ ಜಿಲ್ಲಾಮಟ್ಟದ ಪತ್ರಿಕೆಗೆ ಮುಖ್ಯ ಆಧಾರ. ಅಂಥ ವರದಿಗಳನ್ನು ಸಾಧ್ಯವಿದ್ದಷ್ಟೂ ಹೆಚ್ಚಾಗಿ ಪ್ರಕಟಿಸಿದರೆ ಓದುಗರು ಮೆಚ್ಚಿಕೊಳ್ಳುತ್ತಾರೆ ಎಂದುಕೊಂಡವರಂತೆ, ವಿ.ಸಿ. ನಂಬರ್ ಗಾಗಿ ಪತ್ರಿಕೆ ಕೊಂಡುಕೊಳ್ಳುವವರ ಸಂಖ್ಯೆಯೂ ಸಾಕಷ್ಟಿದೆ ಎಂಬವರೂ, ಪತ್ರಿಕೆಯ ಪ್ರಸಾರ ಹೆಚ್ಚಾಗಬೇಕಾದರೆ (ಜೊತೆಗೆ ಜಾಹೀರಾತು ಕೂಡಾ ಬರಬೇಕಾದರೆ) ರಾಷ್ಟೀಯ-ಅಂತಾರಾಷ್ಟೀಯ ಮಟ್ಟದ ಬಿಸಿಬಿಸಿ ಸುದ್ದಿಗಳು ಅಗತ್ಯ ಎಂದು ವಾದಿಸುವವರೂ, ತಂಡದಲ್ಲಿದ್ದರು.

 ವಿಭಿನ್ನ ದೃಷ್ಟಿಕೋನಗಳು, ತಂಡವನ್ನು ಮೂರು ಗುಂಪುಗಳಾಗಿ ತುಂಡರಿಸುವ ಸೂಚನೆ ಬಹುಬೇಗನೆ ಕಂಡುಬಂದಿತು.ಹೊಗೆಯಾಡುತ್ತಿದ್ದ ಅತೃಪ್ತಿಯನ್ನು ಬಹಿರಂಗವಾಗಿ ತೋರಿಸಿಕೊಳ್ಳಲು ( ಆಗ  ಬಣರಹಿತನಾಗಿ ಉಳಿದಿದ್ದ) ನನ್ನ ಸಂಪಾದಕೀಯ ಬರಹವೇ ಒಂದು ಸಾಧನವಾಯಿತು.

ಜಾಹೀರಾತು

 ಪ್ರಕರಣದ ‘ವಿಚಾರಣೆ’ ನಡೆದ ರಾತ್ರಿ, ನಾನು ತಂಡದ ಸಭೆಯಿಂದ ದೂರವಾಗಿ ಉಳಿದೆ.“ನನ್ನ ಸೇವೆ ಬೇಕಾಗಿಲ್ಲವೆಂದು ತಂಡದವರು ತೀರ್ಮಾನಿಸುವರಾದರೆ, ಇದನ್ನು ಒಪ್ಪಿಕೊಳ್ಳಲು ಸಿದ್ಧ’ನೆಂದು, ಪತ್ರಿಕೆಯ ಆರ್ಥಿಕ ಹೊಣೆಯನ್ನು ಹೊತ್ತಿದ್ದ ಸಲ್ದಾನರಲ್ಲಿ ತಿಳಿಸಿದ್ದೆ. ಸುದೀರ್ಘ ಚರ್ಚೆ- ವಾಗ್ವಾದಗಳ ಅನಂತರ, “ನಮ್ಮಲ್ಲೀಗ ಬಹುಮತವಿಲ್ಲ- ಆದ್ದರಿಂದ ಪತ್ರಿಕೆಯ ಸಂಬಂಧವನ್ನು ನಾವು ತೊರೆಯುತ್ತಿದ್ದೇವೆ”. ಎಂಬ ಎಚ್ಚರಿಕೆ ಇತ್ತು ಮುಖ್ಯ ಸಂಘಟಕರು ಹೊರಟುಹೋದರು. ಅವರ ನಿರ್ಗಮನದ ಬೆನ್ನಿಗೇ “ನೀವು ಬಂದು ನಿಮ್ಮ ಕೆಲಸ ಮಾಡಿ” ಎಂದು ಸಲ್ದಾನ ನನಗೆ ತಿಳಿಸಿದರು.

 ಅಂದು ಆರಂಭವಾದ ಶೀತಲ ಸಮರ, ತನ್ನ ವೈಯಕ್ತಿಕ ಅಸಮಾಧಾನಗಳ ನೆಲೆಯಲ್ಲಿ ನರಸಿಂಹರಾಯರು ಸಂಪಾದಕ-ಪ್ರಕಾಶಕ ಸ್ಥಾನಗಳನ್ನು ತೊರೆಯುವುದರೊಂದಿಗೆ ಮುಗಿಯಿತು. ಪತ್ರಿಕೆಯಿಂದಾಗಿ ಅವರು ಕಳೆದುಕೊಂಡಿದ್ದ ಹಣವನ್ನು ತುಂಬಿಸುವ ಹೊಣೆಯನ್ನು, ಸಾಕ್ಷಿಗಳ ಸಮ್ಮುಖದಲ್ಲಿ ಸಲ್ದಾನ ಹೊತ್ತುಕೊಂಡರು.

 ಅದರಿಂದ, ಅಂಶಕಾಲಿಕ ‘ಉಚಿತ’ಸೇವೆ ಸಲ್ಲಿಸುತ್ತಿದ್ದವರ ಸಂಖ್ಯೆ ತನ್ನಿಂದ ತಾನೇ ಇಳಿಯಿತು. ಬಿಂದುಸಾರ ಶೆಟ್ಟರಿಗೆ ಸ್ವತಂತ್ರ ಅಸ್ತಿತ್ವ ದೊರೆಯಿತು. ಕೃಷ್ಣ ಕುಡ್ವರಿಗೂ ನನಗೂ ‘ಸಹಸಂಪಾದಕ’ರ ಪಟ್ಟಿ ಹಚ್ಚಲಾಯಿತು.

ಜಾಹೀರಾತು

 ಅದುವರೆಗೂ ಬೇರೆ ವ್ಯವಸ್ಥೆ ಮಾಡಿಕೊಳ್ಳುವ ಶಕ್ತಿ ಇಲ್ಲದೆ, ಕಾರ್ಯಾಲಯದಲ್ಲಿ ವಾಸಿಸುತ್ತಿದ್ದ ನಾನು, ಆ ಮೇಲಿಂದ ‘ಅನಿವಾರ್ಯವಾಗಿ’ ಕಚೇರಿಯೇ ನನ್ನ ಮನೆ ಎನ್ನುವಂತಾಯಿತು. ಪತ್ನಿ-ಪುತ್ರರನ್ನು ಊರಿನಿಂದ ಮಂಗಳೂರಿಗೆ ಕರೆತರುವ ಮಾತು ದೂರವಾಗಿಯೇ ಉಳಿಯಿತು.

 (ಹೇಗೂ, ನನ್ನ ಪಾಲನ್ನು ಸುಲಭವಾಗಿ ಪಡೆಯುವ ದಾರಿ ಇರಲಿಲ್ಲ. ಆ ಬಗ್ಗೆ ಕುಟುಂಬದ ಸದಸ್ಯರು ಆಸಕ್ತರಾಗಿದ್ದಂತೆಯೂ ಕಂಡುಬರಲಿಲ್ಲ. ಹೆಂಡತಿ-ಮಕ್ಕಳನ್ನು ಅನಿವಾರ್ಯವಾಗಿಯೇ ಊರಿನಲ್ಲಿ ಬಿಟ್ಟುಬಂದ್ದಿದೆನಾದರೂ, “ನಮ್ಮಲ್ಲಿ ಬಿಟ್ಟುಹೋದ ಹೆಂಡತಿಯ ನೆನಪಾದಾಗ ಒಮ್ಮೆ ಬಂದು ಹೋಗುತ್ತಾನೆ” ಎಂಬ ಟೀಕೆಯನ್ನು ‘ಆಸಕ್ತ’ರು ಆಗೀಗ ನನಗೆ ತಲುಪಿಸುತ್ತಿದ್ದರು. ಆ ವಿಚಾರವನ್ನು ಅಷ್ಟಾಗಿ ಮನಸ್ಸಿಗೆ ಹಚ್ಚಿಕೊಳ್ಳದೆ ಸುಮ್ಮನಿರುತ್ತಿದ್ದೆ.) ತಲೆಗೂ ದೇಹಕ್ಕೂ ತುಂಬುಗೆಲಸವಿತ್ತು.

 ಪತ್ರಿಕೆಯ ಪುಟತುಂಬಿಸುವ ಕೆಲಸ ನಿಯಮಬದ್ಧವಾಗಿ ನಡೆಯಬೇಕು. ಚೈತನ್ಯಕ್ಕೆ ಅವಶ್ಯವಾದ ಜಾಹಿರಾತಿನೆ ಚಿಲುಮೆ ಬತ್ತದಂತೆ ನೋಡಿಕೊಳ್ಳಬೇಕು. ಪ್ರಸಾರವೂ ತಾನಾಗಿ ಹೆಚ್ಚಾಗುವ ದಾರಿ ಹುಡುಕಬೇಕು.- ಎಂಬೆಲ್ಲ ‘ಬೇಕು’ಗಳನ್ನು ಪೂರೈಸುವ ಕಾರ್ಯಕ್ರಮವಿತ್ತು. ಅದರ ಅನುಷ್ಟಾನದಲ್ಲಿ ಉಡುಗಿಹೋಗುವ ಮಾನಸಿಕ ಮತ್ತು ದೈಹಿಕ ಚೈತನ್ಯದ ಪರಿಮಾಣಕಲ್ಪನೆ ಮಾತ್ರ ಇರಲಿಲ್ಲ.

ಜಾಹೀರಾತು

 ನಾನಾಗಿಯೇ ಹೊತ್ತುಕೊಂಡ ಹೊಣೆ. ನಿಭಾಯಿಸಲು, ಅನುಸರಿಸಿದ್ದ ದಿನಚರಿಯ ವಿವರ ಇಲ್ಲಿ ಅಪ್ರಸ್ತುತ. ಮುಂಜಾನೆ ಎಂಟರಿಂದ ರಾತ್ರೆ ಎರಡವರೆಗೂ ನಡೆದಿದ್ದ ಎಡೆಬಿಡದ ದುಡಿತ, ನಿರೀಕ್ಷಿತ ಫಲ ಕೊಟ್ಟಾಗ ಸಂತೋಷವಾಗುತ್ತಿತ್ತು. ಆಯಾಸ ಮರೆಯುತ್ತಿತ್ತು.

 ಮೂರು ಕಾಸೂ ಇಲ್ಲದೆ ಸ್ಟಾರ್ಟ್ ಮಾಡಿದ ಪೇಪರ್. ಎಷ್ಟು ದಿನ ನಡೆದೀತು ?’ ಎಂದು ಹಂಗಿಸಿದ್ದವರೊಂದಿಗೆ ‘ಸ್ಪರ್ಧಿಸಿಯೇ ತೀರಬೇಕೆಂದು ’ಮೂಡಿದ ನಿರ್ಧಾರ –

 ಯಾವ ವಿಭಾಗವನ್ನೂ ಬಾಕಿಯಾಗಿ ಉಳಿಸಲಿಲ್ಲ. (ಗೋವಾ ಕಾರ್ಯಾಚರಣೆಯಂಥ) ಅವಕಾಶಗಳಲ್ಲಿ ವಿಶೇಷ ಪುರವಣಿಗಳನ್ನು ರಾತ್ರೆಯ ಮೊದಲು ಹೊರಡಿಸುವುದು, ಹೆಚ್ಚಿನ ಜಾಹೀರಾತುಗಳಿಗಾಗಿಯೇ ‘ವಿಶೇಷ ಸಂಚಿಕೆ’ಗಳನ್ನು ಹೊರತರುವುದು, ದಿನಕ್ಕೊಬ್ಬರಂತೆ ಹೊಸ ಏಜೆಂಟರ ಹೆಸರುಗಳನ್ನು ಪ್ರಕಟಿಸುವುದು – ಇವೆಲ್ಲ ‘ದಿನವಹಿ’ಯ ಕೆಲಸಗಳಂತಾದವು. ‘ಫಲ’ವನ್ನಂತೂ ಪತ್ರಿಕೆ ಹುಲುಸಾಗಿ ಪಡೆಯುತ್ತಿತ್ತು.

ಜಾಹೀರಾತು

 ಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಣೆಯ ಒಂದು ಸಂದರ್ಭದಲ್ಲಂತೂ ಸ್ಪರ್ಧೆ ಪರಾಕಾಷ್ಠೆ ಮುಟ್ಟಿತು. ಅದು ನಡೆಡದ್ದು ಹೀಗೆ:

 ಆ ವರ್ಷದವರೆಗೆ ಫಲಿತಾಂಶವನ್ನು ‘ಮಾನ್ಯತೆ’ ಪಡೆದ ಎಲ್ಲ ಪತ್ರಿಕೆಗಳಿಗೂ ಮುಂದಾಗಿ ಕಳುಹಿಸುತ್ತಿದ್ದ ಅಧಿಕಾರಿಗಳು ( ಬೆಂಗಳೂರಿನ ಒಂದು ಪತ್ರಿಕೆಯು ನಿರ್ಧಾರಿತ ದಿನದ ಮೊದಲೇ ಅದನ್ನು ಪ್ರಕಟಿಸಿ ಗೈದ)   ‘ವಿಶ್ವಾಸದ್ರೋಹ’ದ ಕಾರಣ, ಫಲಿತಾಂಶವನ್ನು ಪ್ರಕಟಣೆಯ ದಿನದಂದು ಮೈಸೂರಿಗೆ ಬಂದೇ ಪಡೆಯಬೇಕೆಂಬ ನಯಮವನ್ನು ಜಾರಿಗೆ ತಂದಿದ್ದರು. “ಅವರಿಗೆ ಬೇಕಾದರೆ ಕಳುಹಿಸಿಕೊಡಲಿ… ನಾವು ಅಲ್ಲಿಗೆ ಹೋಗಿ ತರುವ ಅಗತ್ಯ ಇಲ್ಲ”ವೆಂದ ಕುಡ್ವರ ‘ಘನತೆ’ಯ ನಿಲುಮೆಯಿಂದಾಗಿ, ‘ನವಭಾರತ’ವು ಆ ಬಾರಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ನಮಗೆ ಗೊತ್ತಾಯಿತು.

ಜಾಹೀರಾತು

 ಸಿಕ್ಕಿದ್ದೊಂದು ಛಾನ್ಸ್- ಇದನ್ನು ಬಿಡಬಾರದು ಎಂದು ಸಲ್ದಾನರಲ್ಲಿ ಹೇಳಿದಾಗ, ಮೈಸೂರಿಗೆ ಹೋಗಿ ಬರುವ ಟ್ಯಾಕ್ಸಿ ಛಾರ್ಜ್ ಒದಗಿಸುವುದು ಕಷ್ಟವೆಂಬ ಉತ್ತರ ಬಂತು. ಅನುಮತಿ ಮಾತ್ರ ಕೊಡಿ, ಇಲ್ಲಿ ಮಾಡಬೇಕಾದ ವ್ಯವಸ್ಥೆ ಮಾಡಿ, ಸಂಜೆ ನಾಲ್ಕು ಗಂಟೆಯ ಮೊದಲು ರಿಸಲ್ಟ್ ಶೀಟ್ಸ್ ತಂದೇತರುತ್ತೇನೆ ಎಂದೆ. ಒಪ್ಪಿಗೆ ಸಿಕ್ಕಿತು.

 ಆ ಕೂಡಲೆ, ‘ಸಂಪೂರ್ಣ ಫಲಿತಾಂಶವನ್ನು ನಾಳೆಯ ಕನ್ನಡವಾಣಿಯಲ್ಲಿ ನೋಡಿ. ಪತ್ರಿಕೆ ಸಿಗದಿದ್ದವರು ರಾತ್ರೆ 9ರ ಅನಂತರ 1081ಗೆ ಫೋನ್ ಮಾಡಿ’ ಎಂಬ ಪ್ರಕಟಣೆ ಬರೆದುಕೊಟ್ಟು, ವೆಚ್ಚ ಸರಿದೂಗಿಸುವ ಎರಡು ವಿಶೇಷ ಜಾಹೀರಾತುಗಳನ್ನು ಪರಿಚಿತ ಚಿತ್ರಮಂದಿರಗಳಿಂದ ಸಂಪಾದಿಸಿ, ಬೆಳಗಿನ ಜಾವ ಹೊರಟು ಮೈಸೂರಿನಿಂದ ಸಂಜೆಯ ಹೊತ್ತಿಗೆ ಫಲಿತಾಂಶದ ಹಾಳೆಗಳನ್ನು ಹಿಡಿದುಕೊಂಡು ಬಂದೆ.

 ಫಲಿತಾಂಶಗಳು ಮರುದಿನ ಪ್ರಕಟವಾದವು. ಅವುಗಳಿಗಾಗಿ ಕಾಯುತ್ತಿದ್ದ ಸಾವಿರಾರು ‘ಹೊಸ’ ಓದುಗರನ್ನೂ ದೊರಕಿಸಿಕೊಟ್ಟವು. ನವಭಾರತವು ‘ಅಧಿಕೃತರ ಅಸಹಕಾರದ ಕಾರಣ ಈ ಬಾರಿ ಫಲಿತಾಂಶ ಪ್ರಕಟಿಸಲಿಲ್ಲ’ ಎಂಬ ಘೋಷಣೆ ಹೊರಡಿಸಿತು. ಅದಕ್ಕೆ ಕನ್ನಡವಾಣಿ ‘ಕೈಲಾಗದವನು ಮೈಯೆಲ್ಲ ಪರಚಿಕೊಂಡಂತೆ’ ಎಂಬ ಸಂಪಾದಕೀಯ ಪ್ರತಿಕ್ರಿಯೆ ತೋರಿತು.

ಜಾಹೀರಾತು

 ( ಮುಂದಿನ ಬಾರಿಯ ಫಲಿತಾಂಶದ ಹೊತ್ತಿಗೆ, ಘನತೆಯನ್ನು ಒತ್ತಟ್ಟಿಗಿಟ್ಟು, ಮೈಸೂರಿಗೆ ಹೋಗಿ ಬರಲೇಬೇಕಾದ ಅವಶ್ಯಕತೆ, ನವಭಾರತಕ್ಕೆ ಅನಿವಾರ್ಯವೆನಿಸಿತು.)

 ಕನ್ನಡವಾಣಿಯ ಚಟುವಟಿಕೆಗಳು ಹೆಚ್ಚುತ್ತಾ ಹೋದವು. ಆರ್ಥಿಕ ಸಂಪನ್ಮೂಲದ ಅವಶ್ಯಕತೆಯೂ ಹೆಚ್ಚಿತು. ಲಿಮಿಟೆಡ್ ಕಂಪನಿ ಸ್ಥಾಪಿಸಿ, ಬಂಡವಾಳ ಸಂಗ್ರಹಿಸುವ ಯೋಜನೆ ಮಂಡಿಸಿದಾಗ, ಬಹಳಷ್ಟು ಆಶಾಭಾವನೆಯಿಂದ ಸಲ್ದಾನ ಅಸ್ತು ಎಂದರು. ಮೂಲಭೂತ ವ್ಯವಸ್ಥೆ -ಬೆಂಗಳೂರು ಯಾತ್ರೆಗಳ ಅನಂತರ ‘ಕನ್ನಡವಾಣಿ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೂ ಹುಟ್ಟಿಕೊಂಡಿತು.

 ಜೊತೆಜೊತೆಗೇ, ಆಡಳಿತ ಸಹಾಯಕರಾಗಿ ಇಬ್ಬರು ಯುವ ಉತ್ಸಾಹಿಗಳ ನೇಮಕ, ಮಿತ್ರ ಗೋವಿಂದರಾವ್ ಅವರಿಗೆ ಪ್ರಸರಣಾ ವ್ಯವಸ್ಥೆಯ ಹಸ್ತಾಂತರ, ಹಿಂದ್ ಆರ್ಟ್ ಪ್ರೆಸ್ ನ ಒಡೆತನದ ಮುಂತಾದ ಮಹತ್ತರ ಬದಲಾವಣೆಗಳೂ ಆದವು. ಬೇರೊಂದು ಅಚ್ಚುಕೂಟವನ್ನು ‘ಬಾಡಿಗೆಗೆ’ ಪಡೆಯುವ ಮಾತುಕತೆಗಳು ಅಂತಿಮ ಹಂತಕ್ಕೆ ಮುಟ್ಟುತ್ತಿದ್ದಂತೆ, ನಾನು ಕಾಯಿಲೆ ಬಿದ್ದೆ. ಮಿತಿಮೀರಿದ ಓಡಾಟ, ಕ್ರಮ ತಪ್ಪಿದ ನಿದ್ರೆ – ಆಹಾರಗಳ ಪರಿಣಾಮವಾಗಿ ಟೈಫಾಯ್ಡ್(ವಿಷಮಜ್ವರ) ತಗಲಿಕೊಂಡಿತು.  

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ವಿಶೇಷ ಸೃಷ್ಟಿಗಳ ಲೋಕದಲ್ಲಿ -ಅಂಕಣ 22: ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಪ್ರಕಟಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*