
ಧರ್ಮದ ಆಧಾರದ ಮೇಲೆ ನಿಂತಿರುವ ಸನಾತನ ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದ ಅವರು, ಪ್ರಪಂಚದಲ್ಲಿ ದೇವರಿಗೆ ಹೆಚ್ಚು ಮಹತ್ವ ನೀಢಬೇಕು. ನಮ್ಮ ಧರ್ಮ, ಸಂಸ್ಕೃತಿಯನ್ನು ಕಳೆದುಕೊಂಡು ಬದುಕಬಾರದು. ನಮ್ಮದೇ ಆದಂಥ ಆಚರಣೆಗಳನ್ನು ಉಳಿಸಿಕೊಳ್ಳಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾ.೩೦ರಂದು ಸಂಜೆ ಹೊರೆಕಾಣಿಕೆ ಮೆರವಣಿಗೆ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ನಾವೆಲ್ಲರೂ ಜವಾಬ್ದಾರಿಯುತವಾಗಿ ಧರ್ಮ, ಸಂಸ್ಕೃತಿಯ ಕುರಿತು ಜಾಗೃತರಾಗಬೇಕಾಗಿದೆ. ಜೀರ್ಣೋದ್ಧಾರ, ಮತ್ತು ಬ್ರಹ್ಮಕಲಶೋತ್ಸವದಿಂದ ಇದು ಸಾಕಾರವಾಗಲಿ ಎಂದು ಸ್ವಾಮೀಜಿ ಹೇಳಿದರು.
ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಪದ್ಯಾಣದವರ ಕೊಡುಗೆ ಅಪಾರವಾಗಿದೆ. ಭಕ್ತಿಯನ್ನು ಶಕ್ತಿಯಾಗಿ ಸ್ಥಾಪಿಸಲು ಧರ್ಮ ಅಗತ್ಯ ಎಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಟರಾಜನ ಮೂರ್ತಿಯನ್ನು ಅನಾವರಣಗೊಳಿಸಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.
ಹೊರೆಕಾಣಿಕೆ ಮೆರವಣಿಗೆಗೆ ಒಡಿಯೂರು ಶ್ರೀಗಳಿಂದ ಚಾಲನೆ:
ಮಿತ್ತನಡ್ಕದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಶಿವನು ಒಳಗಿರುವಾಗ ಜಾಗೃತಿಯಾಗಬೇಕು. ಭಾವಶುದ್ಧಿಯಾಗಬೇಕು ಎಂದು ಹೇಳಿದ ಶ್ರೀಗಳು, ನೇಪಾಳದ ಪಶುಪತಿನಾಥನ ಅರ್ಚನೆಯ ಭಾಗ್ಯ ಪದ್ಯಾಣದವರಿಗೆ ದೊರಕಿದೆ. ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಇಡೀ ಊರು ಒಂದಾಗಿದೆ ಎಂದರು.
ಈ ಸಂದರ್ಭ, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮಾತನಾಡಿ ಲೋಕ ಸಂರಕ್ಷಣೆಗೆ ಮಹಾಲಿಂಗೇಶ್ವರನ ಆರಾಧನೆ ಸಾಧ್ಯ ಎಂದರು.
ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಮಾತನಾಡಿ, ಧರ್ಮದ ಕಾರ್ಯದಲ್ಲಿ ತೊಡಗಿದರೆ, ನ್ಯಾಯದ ಪರಿಪಾಲನೆ ಸಾಧ್ಯವಾಗುತ್ತದೆ. ದೇಶದಲ್ಲಿ ನ್ಯಾಯಾಲಯಗಳು ವ್ಯಾಜ್ಯಗಳಿಂದ ತುಂಬಿ ತುಳುಕುತ್ತಿದೆ, ಧರ್ಮದ ಹಾದಿಯಲ್ಲಿ ನಡೆದರೆ ಕಡಿಮೆಯಾಗಬಹುದು. ದಕ್ಷಿಣ ಕನ್ನಡದ ಜನರು ಧರ್ಮದ ಕುರಿತು ಜಾಗೃತರಾಗಿರುವುದು ಪ್ರಗತಿಯ ಸಂಕೇತ ಎಂದರು.
ವೇ.ಮೂ.ಹಿರಣ್ಯ ವೆಂಕಟೇಶ್ವರ ಭಟ್ ಧಾರ್ಮಿಕ ಉಪನ್ಯಾಸ ನೀಡಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಸಿಇಒ (ಐಟಿ) ಪೂರಣ್ ವರ್ಮ ಮಾತನಾಡಿ, ಧರ್ಮಕಾರ್ಯದಲ್ಲಿ ಇರಬೇಕಾದರೆ ಹಾಗೂ ಧಾರ್ಮಿಕತೆಯಲ್ಲಿ ಇರಬೇಕಾದರೆ ಬ್ರಹ್ಮಕಲಶೋತ್ಸವ ಅಗತ್ಯ ಎಂದು ಹೇಳಿದರು.
ವಿಟ್ಲ ನವಿಲುಬಸದಿಯ ಅಧ್ಯಕ್ಷ ಜಿತೇಶ್, ಉದ್ಯಮಿ ದರ್ಶನ್, ಕರೋಪಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಅನೆಯಾಲಕೋಡಿ ವಿಘ್ನೇಶ್ವರ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಉಜಿರೆಮಾರು, ರವಿ ಇಳಂತಿಲ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪದ್ಯಾಣ ತಿಮ್ಮಣ್ಣ ಭಟ್ಟ, ಪದ್ಯಾಣ ರಘುರಾಮ ಕಾರಂತ, ಅಧ್ಯಕ್ಷ ಅರವಿಂದ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಶಾಮ ಭಟ್, ಅಧ್ಯಕ್ಷ ಡಾ. ಅರುಣ ಶಾಮ, ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಕಾರ್ಯಾಧ್ಯಕ್ಷ ಶಾಮಸುದರ್ಶನ ಹೊಸಮೂಲೆ, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಹೊರೆಕಾಣಿಕೆ ಸಮಿತಿ ಸಂಚಾಲಕ ಪಟ್ಲಗುತ್ತು ವಿನೋದ್ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಹೊರೆಕಾಣಿಕೆಯ ಯಶಸ್ಸಿನಲ್ಲಿ ಪಾಲ್ಗೊಂಡರು. ಮಲಾರಬೀಡು ರವೀಂದ್ರನಾಥ ಆಳ್ವ ಮತ್ತು ದೈವನರ್ತಕ ಗಣೇಶ್ ಪಂಬದ ಚಿಪ್ಪಾರು ಅವರನ್ನು ಬಿಲ್ವಪತ್ರ ಮತ್ತು ರುದ್ರಾಕ್ಷಿ ಗಿಡದ ವಿಶೇಷ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಮುಗುಳಿ ತಿರುಮಲೇಶ್ವರ ಭಟ್ ವಹಿಸಿದ್ದರು. ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಕಾರ್ಯದರ್ಶಿ ಈಶಾನ್ಯ ಪದ್ಯಾಣ ವಂದಿಸಿದರು. ಹೇಮಾ ಜಯರಾಮ ರೈ ಮತ್ತು ರೇಣುಕಾ ಕಣಿಯೂರು ಕಾರ್ಯಕ್ರಮ ನಿರ್ವಹಿಸಿದರು. ಚೈತನ್ಯಕೃಷ್ಣ ಪದ್ಯಾಣ ಮದ್ದಳೆಯಲ್ಲಿ ಹಾಗೂ ರವಿಚಂದ್ರ ಪದ್ಯಾಣ ಭಾಗವತಿಕೆಯ ಮೂಲಕ ಪ್ರಾರ್ಥನೆ ನೆರವೇರಿಸಿದರು. ಮೆರವಣಿಗೆಯಲ್ಲಿ ಶಿವಲಿಂಗವನ್ನು ಹೊತ್ತುಕೊಂಡು ಬಂದು ಸಭಾಂಗಣದ ಎದುರು ನಿಲ್ಲಿಸಿದ್ದು ಗಮನ ಸೆಳೆಯಿತು.


Be the first to comment on "ಪದ್ಯಾಣಕ್ಕೆ ತಲುಪಿತು ಏಕಾದಶ ತೀರ್ಥ ಕಲಶ, ಧರ್ಮ, ಸಂಸ್ಕೃತಿ ಉಳಿವಿಗೆ ಸಂತರ ಕರೆ"