
ಮಾನವೀಯ ಮೌಲ್ಯಗಳ ಸಂದೇಶವನ್ನು ಇಫ್ತಾರ್ ಕೂಟಗಳು ನೀಡುತ್ತವೆ ಎಂದು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.ಪಾಣೆಮಂಗಳೂರಿನ ಸಾಗರ್ ಆಡಿಟೋರಿಯಂನಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅವರು ಸಂದೇಶ ನೀಡಿದರು.
ಶಾಂತಿಯ ಸಂದೇಶದ ಜೊತೆಗೆ ಭಗವಂತನ ಮಕ್ಕಳಾಗಿ ಒಂದಾಗಬೇಕು ಎಂಬುದು ಸೌಹಾರ್ದ ಸಂದೇಶವಾಗಿದೆ. ನಿಸರ್ಗವನ್ನು ನೋಡಿದರೆ, ಭಗವಂತನ ಸೃಷ್ಟಿ ಎಲ್ಲರಿಗೂ ಸಮಾನ ಎಂಬ ಅರಿವಾಗುತ್ತದೆ. ಜೀವನದಲ್ಲಿ ದೊರಕುವ ಅವಕಾಶಗಳು ನಿಜವಾದ ಜ್ಷಾನಭಂಡಾರ. ನಾವು ಸವಾಲುಗಳ ಮಧ್ಯೆ ಜೀವಿಸಬೇಕು .ಮಾನವೀಯ ಮೌಲ್ಯಗಳ ಸಂದೇಶ ಸಾರಬೇಕು ಎಂಬ ಸಂದೇಶ ನೀಡಿದರು.
ಈ ಸಂದರ್ಭ ಮಾತನಾಡಿದ ರೈ, ಮಾನವೀಯ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸರ್ವಧರ್ಮೀಯರು ಒಟ್ಟಾಗಿ ಬಾಳಬೇಕು. ಇದಕ್ಕಾಗಿ ಪರಸ್ಪರ ಭ್ರಾತೃತ್ವವನ್ನು ಬೆಸೆಯಲು ಇಫ್ತಾರ್ ಕೂಟ ಪ್ರತಿ ವರ್ಷದಂತೆ ಈ ವರ್ಷವು ಆಯೋಜಿಸಲಾಗಿದೆ ಎಂದರು.
ಬಂಟ್ವಾಳ ವಲಯ ಪ್ರಧಾನ ಧರ್ಮಗುರು ರೆ.ಫಾ. ವಿಕ್ಟರ್ ಡಿಸೋಜಾ ಮಾತನಾಡಿ, ಧರ್ಮದ ತಿರುಳನ್ನು ಎಲ್ಲರೂ ಅರಿಯಬೇಕು ಎಂದರು.

ಮಂಗಳೂರು ಶಾಂತಿ ಪ್ರಕಾಶನದ ಅದ್ಯಕ್ಷ ಮುಹಮ್ಮದ್ ಕುಂಞಿ ಮಾತನಾಡಿ, ನಮ್ಮನ್ನು ನಿಯಂತ್ರಿಸುವುದರಲ್ಲಿ ನಾವು ಸೋತು ಹೋಗುತ್ತಿದ್ದೇವೆ. ಉಪವಾಸದಿಂದ ಅದು ಸಾಧ್ಯ. ಸಂಬಂಧಗಳನ್ನು ಬೆಳೆಸುವುದು ಇಪ್ತಾರ್ ಕೂಟದ ಉದ್ದೇಶ. ಮೌಲ್ಯಗಳನ್ನು ಯಾರು ಗಳಿಸುತ್ತಾರೋ, ಬದುಕಿನಲ್ಲಿ ಯಶಸ್ಸು ಸಾಧ್ಯ. ನಮ್ಮ ಮನುಷ್ಯತ್ವ ಎಂಬ ಮೂಲಸ್ವರೂಪವನ್ನು ಜಾರಿಗೊಳಿಸಲು ಕೂಟ ಸಹಕಾರಿ ಎಂದರು.
ನೆಹರು ನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ ಪ್ರಾರ್ಥನೆ ನೆರವೇರಿಸಿದರು. ಪ್ರಮುಖರಾದ ಪದ್ಮರಾಜ್ ಆರ್. ಪೂಜಾರಿ, ಡಾ. ಯು.ಟಿ.ಇಫ್ತಿಕಾರ್, ಪಿಯೂಸ್ ಎಲ್. ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಹರೀಶ್ ಇಂಜಾಡಿ, ಪದ್ಮಶೇಖರ ಜೈನ್, ಸಂಜೀವ ಪೂಜಾರಿ ಬಿರ್ವ, ಅಶ್ವನಿ ಕುಮಾರ್ ರೈ, ದೇವಪ್ಪ ಕುಲಾಲ್ ಪಂಜಿಕಲ್ಲು, ಪ್ರಶಾಂತ್ ಕಾಜವ, ಎಂ.ಚಂದ್ರಶೇಖರ ಪೂಜಾರಿ, ಜಯಂತಿ ಪೂಜಾರಿ, ಶೈಲಜಾ ರಾಜೇಶ್, ಬಾಲಕೃಷ್ಣ ಅಂಚನ್, ಚಂದ್ರಶೇಖರ ಭಂಡಾರಿ, ಸುದೀಪ್ ಕುಮಾರ್ ಶೆಟ್ಟಿ, ಡಾ. ರಾಜಾರಾಮ ಕೆ.ಬಿ, ಶಶಿಧರ ಹೆಗ್ಡೆ, ಇಬ್ರಾಹಿಂ ನವಾಜ್ ಬಡಕಬೈಲ್, ಪದ್ಮನಾಭ ರೈ, ಕಾವು ಹೇಮನಾಥ ಶೆಟ್ಟಿ, ವಾಸು ಪೂಜಾರಿ, ಬಿ.ಎಂ.ಅಬ್ಬಾಸ್ ಆಲಿ, ಮಹಮ್ಮದ್ ಶರೀಫ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.


Be the first to comment on "ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್ ಕೂಟ"