
ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳು ಮಾರ್ಚ್ 30ರಿಂದ ಏಪ್ರಿಲ್ 6ರವರೆಗೆ ನಡೆಯಲಿದ್ದು, ಪೂರ್ವಭಾವಿಯಾಗಿ ಶ್ರೀದೇವರ ಪ್ರೀತ್ಯರ್ಥ ಮಾರ್ಚ್ 15ರಂದು ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ರುದ್ರ ಪಠಣದೊಂದಿಗೆ ಶ್ರೀರುದ್ರ ನಮನಂ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ

ಇದೇ ಸಂದರ್ಭ ಬೆಳಗ್ಗೆ 11 ಗಂಟೆಯಿಂದ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ಶ್ರೀ ಕ್ಷೇತ್ರದ ವೆಬ್ ಸೈಟ್ ಅನಾವರಣ ಕಾರ್ಯಕ್ರಮ ಮತ್ತು ಬ್ರಹ್ಮಕಲಶ ಗೀತೆ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ ಪ್ರಸಾದ ಭೋಜನ ಮತ್ತು ಸಂಜೆ ಸಮಿತಿಗಳ ಸಮಾಲೋಚನಾ ಸಭೆ ನಡೆಯಲಿದೆ. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ಟಿ.ಶ್ಯಾಮ ಭಟ್ ವಹಿಸುವರು. ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಬ್ರಹ್ಮಕಲಶೋತ್ಸವದ ಸಿದ್ಧತೆ ಮತ್ತು ವ್ಯವಸ್ಥೆಗಳ ಕುರಿತು ವಿಶೇಷ ದಿಕ್ಸೂಚಿ ಮಾರ್ಗದರ್ಶನ ನೀಡುವರು. ಮುಖ್ಯ ಅತಿಥಿಗಳಾಗಿ ಸ್ವಾಗತ ಸಮಿತಿ ಸಂಚಾಲಕರುಗಳಾದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೆನಕಾ ಗೋಲ್ಡ್ ಬೆಂಗಳೂರು ಎಂ.ಡಿ. ಭರತ್ ಕುಮಾರ್ ಎಸ್, ಕಾಕುಂಜೆ ಸಾಫ್ಟ್ ವೇರ್ ಎಂ.ಡಿ. ಕಾಕುಂಜೆ ಗೋಪಾಲಕೃಷ್ಣ ಭಟ್ ಮತ್ತು ಪತ್ರಕರ್ತ ಜಿತೇಂದ್ರ ಕುಂದೇಶ್ವರ ಭಾಗವಹಿಸುವರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣಶ್ಯಾಮ ಉಪಸ್ಥಿತರಿರುವರು ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.



Be the first to comment on "Padyana Brahmakalashotsava: ಪದ್ಯಾಣ ಬ್ರಹ್ಮಕಲಶಾಭಿಷೇಕ: 15ರಂದು ಶ್ರೀ ರುದ್ರನಮನಂ"