ಬಂಟ್ವಾಳ: ಬಿ.ಸಿ.ರೊಡಿನ ಕೈಕಂಬದಲ್ಲಿರುವ ಖಾಸಗಿ ಖಾಲಿ ಜಾಗವೊಂದರಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಸಮೀಪದ ಸಂಚಯಗಿರಿಯವರೆಗೂ ವ್ಯಾಪಿಸಿತು.

ಹುಲ್ಲಿನಿಂದ ತುಂಬಿದ್ದ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೇಗೆ ಆಯಿತು ಎಂಬ ಕುರಿತು ಇನ್ನಷ್ಟೇ ತಿಳಿದುಬರಬೇಕಿದೆ. ಮಾಹಿತಿ ದೊರೆತ ಕೂಡಲೇ ಸ್ಥಳೀಯರು ಬಂಟ್ವಾಳದ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದು, ಈ ವೇಳೆ ಬಂಟ್ವಾಳದಲ್ಲಿದ್ದ ಏಕೈಕ ಅಗ್ನಿನಂದಕ ವಾಹನ ಮಂಚಿಯಲ್ಲಿ ಕರೆಯೊಂದರ ಮೇಲೆ ತೆರಳಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಿಂದ ವಾಹನ ಆಗಮಿಸಿದ್ದು, ಅಷ್ಟರಲ್ಲಾಗಲೇ ಸ್ಥಳೀಯರು ನಂದಿಸುವ ಕಾರ್ಯ ಆರಂಭಿಸಿದರು. ಈ ಜಾಗದ ಹಿಂಭಾಗ ಸಂಚಯಗಿರಿ ಬಡಾವಣೆ ಇದ್ದು, ಇಲ್ಲಿಯೂ ಕೆಲ ಭಾಗಕ್ಕೆ ಬೆಂಕಿ ವ್ಯಾಪಿಸಿತು. ಗ್ರಾಮ ಆಡಳಿತಾಧಿಕಾರಿ ಯಶ್ವಿತಾ, ಸಿಬ್ಬಂದಿ ಸದಾಶಿವ ಕೈಕಂಬ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಸ್ಥಳೀಯರಾದ ಸಮದ್ ಕೈಕಂಬ ಮತ್ತಿತರರು, ಸಂಚಯಗಿರಿ ನಾಗರಿಕ ಕ್ರಿಯಾ ಸಮಿತಿಸಿ ಅಧ್ಯಕ್ಷ ಸುರೇಶ್ ಕುಲಾಲ್ ಮತ್ತಿತರು ಆಗಮಿಸಿ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಜಾಗ ಖರೀದಿಸಿ ಖಾಲಿ ಬಿಟ್ಟುಬಿಡುವವರು ಜಾಗದಲ್ಲಿ ಹುಲ್ಲು ಬೆಳೆದು ಸಮೀಪದವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು, ಅಗ್ನಿ ಆಕಸ್ಮಿಕದಂಥ ಸಂದರ್ಭ ಸ್ಥಳೀಯರು ಹರಸಾಹಸಪಡಬೇಕಾಗುತ್ತದೆ. ಈ ಕುರಿತು ಆಡಳಿತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಈ ಸಂದರ್ಭ ಒತ್ತಾಯಿಸಿದರು.



Be the first to comment on "ಬಿ.ಸಿ.ರೋಡಿನ ಕೈಕಂಬ ಸಮೀಪ ಬೆಂಕಿ ಆಕಸ್ಮಿಕ"