
ಬಂಟ್ವಾಳದ ಜಕ್ರಿಬೆಟ್ಟುನಲ್ಲಿ ಜೀವನದಿ ನೇತ್ರಾವತಿ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು ೧೩೫ ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಸೇತುವೆ ಸಹಿತ ಕಿಂಡಿ ಅಣೆಕಟ್ಟು(ಬ್ರಿಡ್ಜ್ ಕಂ ಬ್ಯಾರೇಜ್)ಗೆ ಗೇಟ್ ಹಾಕಿ ನೀರು ಸಂಗ್ರಹ ಆರಂಭಗೊಂಡಿದೆ. ಇದರೊಂದಿಗೆ ಅಣೆಕಟ್ಟಿನಲ್ಲಿ ಜಲಸಮೃದ್ಧಿಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಆಗಲಿಕ್ಕಿಲ್ಲ ಎಂದು ಭಾವಿಸಲಾಗಿದೆ. ತೊಂದರೆ ಏನಾದರೂ ಇದ್ದರೆ ಅದು ಪೈಪ್ ಲೈನ್ ಮೂಲಕ ವಿತರಣಾ ವ್ಯವಸ್ಥೆಯಲ್ಲಾಗುವ ಲೋಪವಷ್ಟೇ.

ಡ್ಯಾಂ ಹೇಗಿದೆ:
ಜಕ್ರಿಬೆಟ್ಟು ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಉದ್ದ ೩೫೧.೨೫ ಮೀ. ಹಾಗೂ ೫.೫೦ ಮೀ. ಎತ್ತರವಿದ್ದು, ಪೂರ್ತಿ ಗೇಟ್ ಅಳವಡಿಸಿದರೆ ೧೬೬ ಎಂಸಿಎಫ್ಟಿ ನೀರು ಶೇಖರಣೆಗೊಂಡು ಸುಮಾರು ೫ ಕಿ.ಮೀ.ವರೆಗೆ ಹಿನ್ನೀರು ವ್ಯಾಪಿಸಲಿದೆ. ಸೇತುವೆಯ ಅಗಲ ೭.೫೦ ಮೀ. ಇದ್ದು, ಒಟ್ಟು ೨೧ ಕಿಂಡಿಗಳಿವೆ. ೧೨ ಮೀ. ಅಗಲದ ವರ್ಟಿಕಲ್ ಲಿಫ್ಟ್ ಗೇಟ್ಗಳಿದ್ದು, ಮಧ್ಯದಲ್ಲಿ ಎರಡು ಸ್ಕವರ್ಸ್ ಸ್ಲೂಯಿಸ್ ಗೇಟ್ಗಳಿರುತ್ತವೆ. ತುರ್ತು ಪ್ರವಾಹದ ಸಂದರ್ಭ ನೀರಿನ್ನು ಕೆಳಕ್ಕೆ ಕಳುಹಿಸುವ ಉದ್ದೇಶದಿಂದ ಸ್ಕವರ್ಸ್ ಸ್ಲೂಯಿಸ್ ಗೇಟ್ಗಳನ್ನು ಅಳವಡಿಸಲಾಗಿದ್ದು, ಇದು ಲಿಫ್ಟ್ ಗೇಟ್ಗಳಿಗಿಂತ ತೀರಾ ಕೆಳಸ್ತರದಲ್ಲಿರುತ್ತದೆ. ಹೀಗಾಗಿ ತಳ ಭಾಗದಲ್ಲಿ ಮರಳು ಸಂಗ್ರಹಗೊಂಡರೆ ಅದನ್ನು ಹೊರಕ್ಕೆ ಕಳುಹಿಸಲು ಅನುಕೂಲವಾಗುವ ದೃಷ್ಟಿಯಿಂದ ಈ ಗೇಟ್ಗಳನ್ನು ವಿನ್ಯಾಸಗೊಳಿಸಲಾಗಿದೆ.
ತೋಟಗಳಿಗೆ ನುಗ್ಗದಂತೆ ಕ್ರಮವಾಗಲಿ:
ಕಳೆದ ವರ್ಷ ಅಣೆಕಟ್ಟಿನ ಗೇಟ್ ಪೂರ್ತಿ ಬಂದ್ ಮಾಡಿದ ಸಂದರ್ಭದಲ್ಲಿ ೪.೫೦ ಮೀ. ಎತ್ತರಕ್ಕೆ ನೀರು ಸಂಗ್ರಹಗೊಳ್ಳುತ್ತಿದ್ದಂತೆ ಜಕ್ರಿಬೆಟ್ಟು, ಮಣಿಹಳ್ಳ ಭಾಗದ ತೋಟಗಳಿಗೆ ನೀರು ನುಗ್ಗಿ ಗೇಟ್ ತೆರವು ಮಾಡುವಂತೆ ಆಗ್ರಹಗಳು ಕೇಳಿಬಂದಿತ್ತು. ಬಳಿಕ ನೀರಿನ ಮಟ್ಟವನ್ನು ಇಳಿಸಲಾಗಿತ್ತು. ಈ ವರ್ಷ ಎರಡು ತೋಡುಗಳಿಗೆ ಮಣ್ಣಿನ ಕಟ್ಟ ಹಾಕಿ ಹಿನ್ನೀರು ತೋಡಿಗೆ ಹರಿಯದಂತೆ ಕ್ರಮಕೈಗೊಂಡ ಬಳಿಕ ಗೇಟ್ ಹಾಕುವ ಸಾಧ್ಯತೆ ಇದೆ.
ನದಿ ಮಾಲಿನ್ಯ ನಿಯಂತ್ರಣ ಸವಾಲು
ಜಕ್ರಿಬೆಟ್ಟು ಡ್ಯಾಂ ಹೆದ್ದಾರಿ ಪಕ್ಕವೇ ಇದ್ದು, ಇಲ್ಲಿ ಯಾರ್ಯಾರೋ ಕಸ ತಂದು ಸೇತುವೆ ಬಳಿ ಎಸೆಯುತ್ತಾರೆ ಎಂಬ ದೂರಿದೆ. ಹಾಗೆಯೇ ತುಂಬೆ ಡ್ಯಾಂ ವರೆಗೆ ಕುಡಿಯುವ ನೀರು ಎಂದು ಪರಿಗಣಿಸಲಾಗುವ ನೇತ್ರಾವತಿ ಒಡಲಿಗೆ ತ್ಯಾಜ್ಯ ಸೇರುವುದು ಇನ್ನೂ ನಿಂತಿಲ್ಲ. ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್ಟಿಪಿ)ಗಳ ನಿರ್ಮಾಣಕ್ಕೆ ಜಾಗದ ಸಮಸ್ಯೆ ಅಂತಿಮಗೊಳ್ಳದೇ ಇರುವುದರಿಂದ ಒಳಚರಂಡಿ ವ್ಯವಸ್ಥೆ ಅನುಷ್ಠಾನ ಸಾಧ್ಯವಾಗಿಲ್ಲ. ಇನ್ನೂ ನಿಂತಿಲ್ಲ. ತುಂಬೆ ವೆಂಟೆಡ್ ಡ್ಯಾಮ್ ನ ಸಮೀಪ ಹಾಗೂ ಜಕ್ರಿಬೆಟ್ಟು ಡ್ಯಾಂ ಪಕ್ಕದಲ್ಲೇ ಕೊಳಚೆ ನೀರು ನದಿಗೆ ಸೇರುತ್ತಿದೆ ಎಂಬ ದೂರುಗಳಿಗೆ ಸ್ಪಂದನೆ ಇನ್ನೂ ಸರಿಯಾಗಿ ದೊರಕಿಲ್ಲ.


Be the first to comment on "ಜಕ್ರಿಬೆಟ್ಟು ಡ್ಯಾಮ್ ನಲ್ಲಿ ಜಲಸಮೃದ್ಧಿ | ನದಿ ಮಾಲಿನ್ಯ ನಿಯಂತ್ರಣ ಸವಾಲು"