ಬಂಟ್ವಾಳ ತಾಲೂಕು ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಫೆಬ್ರವರಿ 18ರಿಂದ 22ವರೆಗೆ ನಡೆಯಲಿದೆ.

ಈ ವಿಷಯವನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಕ್ಷೇತ್ರದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ದೇವಸ್ಥಾನದ ತಂತ್ರಿಗಳಾದ ವಿಷ್ಣುಮೂರ್ತಿ ತಂತ್ರಿ ಎಡಪದವು ನೇತೃತ್ವ ಹಾಗೂ ವಾಸ್ತುಶಿಲ್ಪಿ ಮಹೇಶ್ ಮುನಿಯಂಗಳ ಮತ್ತು ಪ್ರಶ್ನಾಚಿಂತನೆ ನಡೆಸಿದ ಮಿತ್ತೂರು ಕೇಶವ ಭಟ್ ಮಾರ್ಗದರ್ಶನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶಿಲಾಮಯ ದೇಗುಲದಲ್ಲಿ ದಿ.ಸದಾಶಿವ ಎಂ.ಕರ್ಕೇರ ಆರಾಧಿಸಿಕೊಂಡು ಬಂದಿರುವ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ಅಮ್ಮನವರ ಹಾಗೂ ಧರ್ಮದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು 18ರಿಂದ 22ರವರೆಗೆ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, 22ರಂದು ಬ್ರಹ್ಮಕಲಶಾಬಿಷೇಕ ನಡೆಯಲಿದೆ. ಪ್ರತಿದಿನ ಧಾರ್ಮಿಕ ಸಭಾ ಕಾರ್ಯಕ್ರಮಗಳು ಇರಲಿವೆ ಎಂದರು.

ಬೃಹತ್ ಹೊರೆಕಾಣಿಕೆ ಮೆರವಣಿಗೆ:
ಈ ಸಂದರ್ಭ ಮಾಹಿತಿ ನೀಡಿದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಲ್ಲಿಪ್ಪಾಡಿ, ಫೆ.15ರಂದು ಬಾನುವಾರ ಬೃಹತ್ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಿಂದ ವೈಭವದ ಹೊರೆಕಾಣಿಕೆ ಮೆರವಣಿಗೆಯು ಮಂಗಾಜೆ-ಧನುಪೂಜೆ ಮಾರ್ಗವಾಗಿ ಹೊರೆಕಾಣಿಕೆ ವಾಹನಗಳೊಂದಿಗೆ ಕಲ್ಪನೆಯಲ್ಲಿ ಸೇರುವುದು. ಅಲ್ಲಿಂದ 4 ಗಂಟೆಗೆ ಕಾಲ್ನಡಿಗೆ ಮೂಲಕ ಹೊರಟು ಕಾವೇಶ್ವರ ಮಾರ್ಗವಾಗಿ ಆದಿಶಕ್ತಿ ದೇವಸ್ಥಾನಕ್ಕೆ ಮೆರವಣಿಗೆ ಸಾಗಲಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪುಜಾರಿ ಬಾಳಿಕೆ ಸಮಿತಿ ಹಾಗೂ ದೇವಸ್ಥಾನ ನಡೆದುಬಂದ ದಾರಿ ಕುರಿತು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ) ಟ್ರಸ್ಟಿಗಳಾದ ವಸಂತ ಎಂ.ಬೆಳ್ಳೂರು, ಶಶಿಕಿರಣ್ ಪೂಜಾರಿ ಬೆಳ್ಳೂರು ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.


Be the first to comment on "ಬಡಗಬೆಳ್ಳೂರು ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ: ವಿವರಗಳು ಹೀಗಿವೆ"