| ಬಂಟ್ವಾಳ ತಾಲೂಕಿನ ಡಾಲಿ ಜಾನ್ ಅವರಿಗೆ ಕೃಷಿ ಪಂಡಿತ ಪ್ರಶಸ್ತಿ, ಲೀಲಾ ಗೌಡ ಅವರಿಗೆ ಕೃಷಿ ಪ್ರಶಸ್ತಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026 ಹಾಗೂ ಉತ್ಪಾದನೋತ್ತರ ಕೃಷಿ, ರೈತರ ಸಬಲೀಕರಣ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂಟ್ವಾಳ ತಾಲೂಕಿನ ಇಬ್ಬರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಕೃಷಿ ಸಚಿವ ಚಲುವರಾಯಸ್ವಾಮಿ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹಿತ ಪ್ರಮುಖರು ಹಾಜರಿದ್ದರು. ಬಂಟ್ವಾಳದಿಂದ ಪ್ರಶಸ್ತಿ ಪುರಸ್ಕೃತ ರೈತರೊಂದಿಗೆ ತಾಲುಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಮತ್ತು ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಉಪಸ್ಥಿತರಿದ್ದರು.
ಈ ಬಾರಿಯ ರಾಜ್ಯಮಟ್ಟದ ಕೃಷಿ ಪಂಡಿತ ಪ್ರಶಸ್ತಿಯ ರೈತ ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದೆ. ಬಂಟ್ವಾಳ ತಾಲೂಕಿನ ಕಾವಳಮೂಡೂರಿನ ಡಾಲಿ ವಿ. ಜಾನ್ ಅವರು 1.25 ಲಕ್ಷ ರೂ ಮೊತ್ತದ ಬಹುಮಾನದೊಂದಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ರಾಜ್ಯ ಮಟ್ಟದ 2024-25 ಹಾಗೂ 2022-23ನೇ ಸಾಲಿನ ಕೃಷಿ ಪ್ರಶಸ್ತಿಯಲ್ಲಿ ಮುಂಗಾರು ಮಳೆ ಆಶ್ರಿತ ಭತ್ತ ಕೃಷಿ ವಿಭಾಗದಲ್ಲಿ ಆರು ಮಂದಿಗೆ ಪ್ರಶಸ್ತಿ ಲಭಿಸಿದೆ. 2024-25ನೇ ವರ್ಷದ ವಿಭಾಗದಲ್ಲಿ ಬಂಟ್ವಾಳ ತಾಲೂಕು ಕಾವಳಪಡೂರಿನ ಲೀಲಾ ಅಣ್ಣುಗೌಡ ಮತ್ತು ಬೆಳ್ತಂಗಡಿ ತಾಲೂಕಿನ ನಾರಾಯಣ ನಾಯ್ಕ ಪ್ರಥಮ, ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಡಾಲಿ ವಿ.ಜಾನ್ ಮತ್ತು ಮಂಗಳೂರು ತಾಲೂಕು ತಲಪಾಡಿಯ ಕೆ.ಶ್ಯಾಮ ಶೆಟ್ಟಿ ದ್ವಿತೀಯ, 2022-23ನೇ ವರ್ಷದ ವಿಭಾಗದಲ್ಲಿ ಮೂಡುಬಿದಿರೆಯ ಪ್ರೇಮ ಹೆಗ್ಡೆ ಪ್ರಥಮ, ಮೂಲ್ಕಿಯ ಸೆಲಿಕಾ ಹಮೀದ್ ದ್ವಿತೀಯ ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ಪಡೆದುಕೊಂಡರು.




Be the first to comment on "ರಾಜ್ಯಮಟ್ಟದ ಕೃಷಿ ಪ್ರಶಸ್ತಿ, ಬಂಟ್ವಾಳದ ಇಬ್ಬರು ಸೇರಿ ದ.ಕ.ಜಿಲ್ಲೆಯ ಆರು ಮಂದಿಗೆ ಗೌರವ – Details"