
ಇಂದು ನಾವೇ ಬದಲಾವಣೆ ಆರಂಭಿಸೋಣ,ಪ್ಲಾಸ್ಟಿಕ್ ತ್ಯಜಿಸೋಣ “ಜಾಗೃತಿ ಅಭಿಯಾನ….
“ಬದಲಾವಣೆ ಎಂದರೆ ದೊಡ್ಡ ಕೆಲಸವಲ್ಲ.ಅದು ನಮ್ಮ ಮನೆಯಿಂದ, ನಮ್ಮ ಕೈಗಳಿಂದ ಆರಂಭವಾಗಬೇಕು.ಇಂದು ನಾವು ತೀರ್ಮಾನ ಮಾಡಿದರೆ –ಪ್ಲಾಸ್ಟಿಕ್ ಚೀಲಕ್ಕೆ “ಇಲ್ಲ” ಎಂದು ಹೇಳಿದರೆ,ಪೇಪರ್ ಅಥವಾ ಬಟ್ಟೆ ಚೀಲ ಬಳಸಿದರೆ,ಅದೇ ದೊಡ್ಡ ಕ್ರಾಂತಿಯ ಮೊದಲ ಹೆಜ್ಜೆಯಾಗುತ್ತದೆ.ನಾವು ನಮ್ಮ ಮುಂದಿನ ಪೀಳಿಗೆಗೆಪ್ಲಾಸ್ಟಿಕ್ ತುಂಬಿದ ಭೂಮಿಯನ್ನಲ್ಲ,ಹಸಿರು, ಸ್ವಚ್ಛ ಮತ್ತು ಸುರಕ್ಷಿತ ಭೂಮಿಯನ್ನು ಕೊಡಬೇಕು.ನಾವು ದಿನನಿತ್ಯ ಬಳಸುವ ಪ್ಲಾಸ್ಟಿಕ್ ನಮ್ಮ ಬದುಕಿಗೆ ಸುಲಭವಾಗಿದ್ದರೂ,ಅದೇ ಪ್ಲಾಸ್ಟಿಕ್ ನಮ್ಮ ಭೂಮಿಗೆ ಅತಿದೊಡ್ಡ ಅಪಾಯವಾಗಿ ಪರಿಣಮಿಸಿದೆ.ಒಂದು ಪ್ಲಾಸ್ಟಿಕ್ ಚೀಲ ಕರಗಲು ನೂರಾರು ವರ್ಷಗಳು ಬೇಕಾಗುತ್ತದೆ.

ಆದರೆ ಅದನ್ನು ನಾವು ಬಳಸುವುದು ಕೇವಲ ಕೆಲವೇ ನಿಮಿಷಗಳು.ಪ್ಲಾಸ್ಟಿಕ್ ಮಣ್ಣು, ನೀರು ಮತ್ತು ಗಾಳಿಯನ್ನು ಮಾಲಿನ್ಯಗೊಳಿಸುತ್ತದೆ.ಅನೇಕ ಪ್ರಾಣಿಗಳು ಪ್ಲಾಸ್ಟಿಕ್ ತಿಂದು ತಮ್ಮ ಜೀವ ಕಳೆದುಕೊಳ್ಳುತ್ತಿವೆ.ಇದು ನಮ್ಮ ಆರೋಗ್ಯಕ್ಕೂ ಭಾರಿ ಅಪಾಯವನ್ನು ಉಂಟುಮಾಡುತ್ತಿದೆ.ಇಂತಹ ಸಂದರ್ಭದಲ್ಲಿ,ಪೇಪರ್ ಬ್ಯಾಗ್ಗಳು ಉತ್ತಮ ಪರ್ಯಾಯವಾಗಿವೆ.ಪೇಪರ್ ಬ್ಯಾಗ್ಗಳು ಪರಿಸರ ಸ್ನೇಹಿಯಾಗಿವೆ,ಜೈವಿಕವಾಗಿ ಕರಗುತ್ತವೆ,ಮರುಬಳಕೆ ಮಾಡಬಹುದು,ಮತ್ತು ನಮ್ಮ ಭೂಮಿಯನ್ನು ರಕ್ಷಿಸಲು ಸಹಾಯ ಮಾಡುತ್ತವೆ.”ಎಂದು ಸಾಮಾಜಿಕ ಕಾರ್ಯಕರ್ತ ಶ್ರೀ ರೊನಾಲ್ಡ್ ಡಿಸೋಜರವರು ಕಾರ್ಮೆಲ್ ಪ್ರೌಢಶಾಲೆ ಮೊಡಂಕಾಪು ಇಲ್ಲಿನ ಹಸಿರು ಭವಿಷ್ಯ ಪರಿಸರ ಸಂಘ ಆಯೋಜಿಸಿದ “ಇಂದು ನಾವೇ ಬದಲಾವಣೆ ಆರಂಭಿಸೋಣ,ಪ್ಲಾಸ್ಟಿಕ್ ತ್ಯಜಿಸೋಣ “ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು .ಕಾರ್ಯಕ್ರಮದಲ್ಲಿ ಪ್ರಾಂಶುಪಾಲರದ ಭಗಿನಿ ಫೆಲ್ಸಿಟ ,ಮುಖ್ಯ ಶಿಕ್ಷಕಿ ಭಗಿನಿ ವೀರ, ವಿಜ್ಞಾನ ಶಿಕ್ಷಕರಾದ ರೋಶನ್ ಪಿ೦ಟೊ ಉಪಸ್ಥಿತರಿದ್ದರು . ಅಧಿತಿ ರಾವ್ ಸ್ವಾಗತಿಸಿದರು, ಶಮಂತ್ ಧನ್ಯವಾದವಿತ್ತರು . ಕಾರ್ಯಕ್ರಮವನ್ನು ರೋಯ್ಸ್ಟನ್ ಲೋಬೊ ನಿರೂಪಿಸಿದರು .

ವಿದ್ಯಾರ್ಥಿಗಳಿಂದಲೇ ಕಾಗದ ಚೀಲ ತಯಾರಿ
ಹಸಿರು ಭವಿಷ್ಯ ಪರಿಸರ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಅತ್ಯಂತ ಸುಲಭವಾಗಿ ಯಾವುದೇ ಅಂಟು ಉಪಯೋಗಿಸದೆ ಕಾಗದ ಚೀಲಗಳನ್ನು ದಿನಪತ್ರಿಕೆ ಗಳನ್ನು ಉಪಯೋಗಿಸಿ ತಯಾರಿಸುವ ವಿಧಾನವನ್ನು ಮಾರ್ಗದರ್ಶಿ ಶಿಕ್ಷಕರಾದ ರೋಷನ್ ಪಿಂಟೊ ವಿದ್ಯಾರ್ಥಿಗಳಿಗೆ ತಿಳಿಸಿದರು .ವಿದ್ಯಾರ್ಥಿಗಳು ತಮ್ಮಮನೆ,ನೆರೆಹೊರೆಯವರಲ್ಲಿ ಉಪಯೋಗಿಸಿದ ದಿನಪತ್ರಿಕೆಗಳನ್ನು ಪಡೆದು ರಜಾ ಅವಧಿಗಳಲ್ಲಿ ಕಾಗದ ಚೀಲಗಳನ್ನು ತಯಾರಿಸಿರುತ್ತಾರೆ .ಪ್ರತಿ ಕಾಗದ ಚೀಲ 1 ಕೆ.ಜಿ ಸಾಮರ್ಥ್ಯವನ್ನು ಹೊಂದಿರುತ್ತದೆ .ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅತ್ಯಧಿಕ ಕಾಗದ ಚೀಲ ತಯಾರಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.

4894 ಪ್ಲಾಸ್ಟಿಕ್ ಚೀಲಗಳಿಗೆ ಮುಕ್ತಿ ನೀಡಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು ತಯಾರಿಸಿದ 4894 ಕಾಗದ ಚೀಲಗಳನ್ನು ಸ್ಥಳೀಯ ವ್ಯಾಪಾರಸ್ಥರಿಗೆ ಉಚಿತವಾಗಿ ನೀಡುವುದರ ಮೂಲಕ ಪ್ಲಾಸ್ಟಿಕ್ ನ ವಿರುದ್ಧ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಲಾಯಿತು .“ಪರಿಸರ ಸ್ನೇಹಿ ಜೀವನಶೈಲಿ ನಮ್ಮ ಕೈಯಲ್ಲೇ ಇದೆ” ಎಂಬ ಬಲವಾದ ಸಂದೇಶವನ್ನು ನೀಡಿದರು .

ಪಾಠ ಪುಸ್ತಕದಲ್ಲಿರುವ ಜ್ಞಾನವನ್ನು ನೈಜ ಜೀವನದಲ್ಲಿ ಬಳಸಬಹುದು ಎಂಬ ಅರಿವು.
ಪರಿಸರ ಜಾಗೃತಿ-ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಕಾಪಾಡಬೇಕು ಎಂಬ ಸಂದೇಶ. ಸ್ವಾವಲಂಬನೆ ಮತ್ತು ಆತ್ಮವಿಶ್ವಾಸ – ನಾವು ಸ್ವತಃ ಉಪಯುಕ್ತ ವಸ್ತುಗಳನ್ನು ತಯಾರಿಸಬಹುದು ಎಂಬ ನಂಬಿಕೆ. ಸಾಮಾಜಿಕ ಜವಾಬ್ದಾರಿ – ಸಮಾಜದ ಒಳ್ಳೆಯದಕ್ಕೆ ತಮ್ಮ ಕೊಡುಗೆ ನೀಡಬೇಕು ಎಂಬ ಚಿಂತನೆ. ಸ್ಥಿರ ಅಭಿವೃದ್ಧಿ – ಇಂದಿನ ಕೃತ್ಯಗಳು ಭವಿಷ್ಯಕ್ಕೆ ಪರಿಣಾಮ ಬೀರುತ್ತವೆ ಎಂಬ ಪಾಠ. ಹೀಗಾಗಿ, ಈ ಚಟುವಟಿಕೆ ಪಾಠದ ಜೊತೆಗೆ ವಿದ್ಯಾರ್ಥಿಗಳಿಗೆ “ಕಲಿಕೆ ಎಂದರೆ ಕೇವಲ ಓದು ಮಾತ್ರವಲ್ಲ, ಅದು ಬದುಕಿಗೆ ದಾರಿ ತೋರಿಸುವುದು” ಎಂಬ ಅರ್ಥಪೂರ್ಣ ಸಂದೇಶವನ್ನು ವಿದ್ಯಾರ್ಥಿಗಳು ಪಡೆದರು.


Be the first to comment on "ಇಂದು ನಾವೇ ಬದಲಾವಣೆ ಆರಂಭಿಸೋಣ,ಪ್ಲಾಸ್ಟಿಕ್ ತ್ಯಜಿಸೋಣ"