
ಮಂಗಳೂರು: ಹಾಸನ ನಗರ ಮೂಲದ ೩೮ ವಯಸ್ಸಿನ ಸಾವು ಬದುಕಿನ ಹೋರಾಟದಲ್ಲಿದ್ದ ಶ್ವಾಸಕೋಶ ಸಂಬಂಧಿ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ತಂಡವು ವಿನೂತನ ಶೈಲಿಯ ಕ್ಲಿಷ್ಟಕರ ಮತ್ತು ಅಪಾಯಕಾರಿ ಶ್ವಾಸಕೋಶದ ಶಸ್ತ್ರ ಚಿಕಿತ್ಸೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ, ಯಶಸ್ವಿಯಾಗಿ ನಿರ್ವಹಿಸಿ, ರೋಗಿಗೆ ಜೀವದಾನ ನೀಡಿ ಆರೋಗ್ಯ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.
ರೋಗಿಯು ದೀರ್ಘ ಕಾಲದ ತೀವ್ರ ಉಸಿರಾಟದ ಸಮಸ್ಯೆ, ಗಂಭೀರ ರಕ್ತ ಹೀನತೆ, ತೀಕ್ಷ್ಣ ಎದೆ ನೋವು, ನಿಶಕ್ತಿ, ಸಮಸ್ಯೆಗಳಿಂದ ಬಳಲುತಿದ್ದು, ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞರಾದ ಡಾ. ಹೆಚ್. ಪ್ರಭಾಕರ್ರವರನ್ನು ಭೇಟಿ ಮಾಡಿ ತಮ್ಮ ತೀವ್ರ ಮತ್ತು ವಿವಿಧ ಮಾರಣಾಂತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಸೂಕ್ಷ್ಮವಾಗಿ ರೋಗಿಯನ್ನು ಸಮಗ್ರ ಆರೋಗ್ಯ ತಪಾಸಣೆ ಒಳಪಡಿಸಿದಾಗ ರೋಗಿಯು ತೀವ್ರ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತಿದ್ದು, ರಕ್ತ ಚಲನವಲನದ ಸಮಸ್ಯೆ, ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ಪರಿಗಣಿಸಿ, ಈ ಗಂಭೀರ ಕಾಯಿಲೆ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಅರಿತು ತಕ್ಷಣ ವೈದ್ಯರು ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ, ಈ ರೋಗಿಯನ್ನು ಹೃದ್ರೋಗ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಆನಂದ್ ಕೆ.ಟಿ.ಯವರನ್ನು ಶಸ್ತ್ರ ಚಿಕಿತ್ಸೆಗಾಗಿ ಭೇಟಿ ಮಾಡಲು ಸಲಹೆ ನೀಡಿದರು. ವೈದ್ಯರು ಗಂಭೀರ ಶ್ವಾಸಕೋಶ ಹೃದ್ರೋಗ ಜೀವಕ್ಕೆ ಅಪಾಯವಾಗುವ ಸವಾಲನ್ನು ಸ್ವೀಕರಿಸಿದರು. ತುರ್ತು ೬ ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರ ಶ್ವಾಸಕೋಶ ಶಸ್ತ್ರ ಚಿಕಿತ್ಸೆಯನ್ನು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ, ನಿರ್ವಹಿಸಿ, ಯಶಸ್ವಿಯಾಗಿ ನೆರವೇರಿಸಿ, ರಕ್ತದ ಹೆಪ್ಪುಗಟ್ಟುವಿಕೆಯನ್ನು ತೆಗೆದು ರಕ್ತ ಚಲನವಲನಕ್ಕೆ ಅನುವು ಮಾಡಿದರು. ಈ ಅಪರೂಪದ ಚಿಕಿತ್ಸೆಯಲ್ಲಿ ಹೃದ್ರೋಗ ಶಾಸ್ತ್ರ ಅರಿವಳಿಕೆ ತಜ್ಞರಾದ ಡಾ. ಎಮ್.ಎಮ್. ಚೇತನಾ ಆನಂದ್ ಸಹಕರಿಸಿಸಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತಿದ್ದಾರೆ.
ಡಾ. ಆನಂದ್ರವರು ಯಶಸ್ವಿ ಶಸ್ತ್ರ ಚಿಕಿತ್ಸೆ ಬಳಿಕ ಈ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯಲ್ಲಿ ಉತ್ತಮ ದರ್ಜೆಯ ಚಿಕಿತ್ಸೆ ನೀಡಿದ್ದು, ಮತ್ತು ಮಾರಣಾಂತಿಕ ಸಮಸ್ಯೆಯನ್ನು ಹೊಂದಿರುವ ರೋಗಿಗೆ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸಾ ವಿಧಾನಗಳಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫೋಸಿನ್ ಲೂಕಸ್ ಲೋಬೋರವರು ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಅಭಿನಂದಿಸಿದಾರೆ. ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ನೂತನ ಪ್ರವೃತ್ತಿ ಮತ್ತು ಆಧುನಿಕ ತಂತ್ರಜ್ಞಾನಗಳಿಗೆ ಹೆಜ್ಜೆ ಹಾಕುತ್ತಿದೆ ಎಂದು ಮಾಹಿತಿ ನೀಡಿದರು.
-ಎಂ. ವಿ. ಮಲ್ಯ


Be the first to comment on "ವಿನೂತನ ಶೈಲಿಯ ಶ್ವಾಸಕೋಶದ ಯಶಸ್ವಿ ಶಸ್ತ್ರ ಚಿಕಿತ್ಸೆಯಿಂದ ರೋಗಿಗೆ ಜೀವದಾನ"