
ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸೋಮವಾರ ಬಿ ಸಿ ರೋಡಿನ ಆಡಳಿತ ಸೌಧದಲ್ಲಿ ತಾಲೂಕು ಮಟ್ಟದ 77ನೇ ಗಣರಾಜ್ಯೋತ್ಸವ ಆಚರಣೆ ನಡೆಯಿತು.
ಧ್ವಜಾರೋಹಣ ನೆರವೇರಿಸಿದ ಬಂಟ್ವಾಳ ತಹಸೀಲ್ದಾರ್ ಮಂಜುನಾಥ್ ಮಾತನಾಡಿ, ಸರಕಾರ ಮತ್ತು ಜನರ ನಡುವಿನ ಸಂಪರ್ಕ ಸಾಧನವಾಗಿ ಕೆಲಸ ಮಾಡುವುದು ಸರಕಾರಿ ನೌಕರರ ಕರ್ತವ್ಯ ಹಾಗೂ ಜವಾಬ್ದಾರಿ. ದೇಶದ ಶಾಂತಿ-ಸೌಹಾರ್ದತೆ ಹಾಗೂ ಭ್ರಾತೃತ್ವ ಕಾಪಾಡಿಕೊಂಡು ಬಂದಾಗ ನಿಜವಾದ ಗಣರಾಜ್ಯವನ್ನು ಕಾಪಾಡಿಕೊಂಡಂತಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದರು. ಗಣರಾಜ್ಯೋತ್ಸವ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಕಾವಳಕಟ್ಟೆ ಶಾಲಾ ವಿದ್ಯಾರ್ಥಿನಿ ವಂದನಾ ಮಾತನಾಡಿ, ಸಂವಿಧಾನದ ಆಶಯಗಳ ಸಾಕಾರ ಪ್ರತಿಯೊಬ್ಬರ ಧ್ಯೇಯ ಆಗಬೇಕು. ಭ್ರಷ್ಟಾಚಾರ, ಭಯೋತ್ಪಾದನೆ ಮೂಲದಿಂದಲೇ ತೊಲಗಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಾಜಿ ಯೋಧ ಕ್ಯಾ ಧನಂಜಯ ಅವರು ಗಣರಾಜ್ಯಕ್ಕೆ ದೊಡ್ಡ ಸವಾಲಾಗಿರುವುದು ಸಮಾಜದಲ್ಲಿ ಆಳವಾಗಿ ಬೇರೂರಿರುವ ಡ್ರಗ್ಸ್ ಮಾಫಿಯಾ. ಈ ಬಗ್ಗೆ ವಿದ್ಯಾರ್ಥಿ ಸಮೂಹ ಜಾಗರೂಕರಾಗುವ ಜೊತೆಗೆ ಶಿಕ್ಷಕರು, ಪೋಷಕರು ಹಾಗೂ ಸಮಾಜ ಗಂಭೀರವಾಗಿ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಬುಡಾ ಅಧ್ಯಕ್ಷ ಬೇಬಿ ಕುಂದರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಮುಖ್ಯ ಅತಿಥಿಗಳಾಗಿದ್ದರು. ಮಾಜಿ ಸೈನಿಕರಾದ ಕ್ಯಾ ಧನಂಜಯ, ಹೆನ್ರಿ ರೋಡ್ರಿಗಸ್, ರಂಗನಾಥ ರೈ, ಮಾಧವ ಕುಲಾಲ್ ಮಾಣಿ, ಮೋಹನ್ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಬಡ್ಡಿ, ಕರಾಟೆ, ವೈಟ್ ಲಿಫ್ಟ್, ಡಿಸ್ಕ್ ತ್ರೋ, ಈಜು ಮೊದಲಾದ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಪ್ರೀತೇಶ್ ವಿಟ್ಲ, ಚೈತನ್ಯಾ ಸಾಲೆತ್ತೂರು, ಕೀರ್ತಿ ಕುಕ್ಕಿಲ, ಹೇಮಂತ್ ತೆಂಕಕಜೆಕಾರು, ಶಮೀರ್ ಅಬ್ದುಲ್ಲ, ಸಾನ್ವಿ ಕೆ, ಕೃತಿ ನೆಟ್ಲ, ಅನಘ್ರ್ಯ ಬರಿಮಾರು, ಅನನ್ಯ ಬರಿಮಾರು ಹಾಗೂ ಜಾವೆಲಿನ್ ಮತ್ತು ಡಿಸ್ಕ್ ತ್ರೋ ವಿಭಾಗದಲ್ಲಿ ಸಾಧನೆಗೈದ ಶಿಕ್ಷಕಿ ಭಾಗೀರಥಿ ರೈ ಅವರನ್ನು ಗೌರವಿಸಲಾಯಿತು. ಕಳೆದ ಬಾರಿ ಎಸ್ಸೆಸ್ಸೆಲ್ಸಿ ಪಿಯುಸಿ ಪರೀಕ್ಷೆಗಳಲ್ಲಿ ಟಾಪರ್ ಗಳಾದ ವಿದ್ಯಾರ್ಥಿಗಳಿಗೆ ನಗದು ಪ್ರೋತ್ಸಾಹಧನ ವಿತರಿಸಲಾಯಿತು. ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ಮಾಲತಿ ವಂದಿಸಿದರು. ಶಿಕ್ಷಕ ಗೋಪಾಕೃಷ್ಣ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ರೈತ ಗೀತೆ ಹಾಗೂ ನಾಡಗೀತೆ ಹಾಡಿದರು.
ಇದಕ್ಕೂ ಮೊದಲು ಪೊಲೀಸ್, ಗೃಹರಕ್ಷಕ ದಳ, ಮಾಜಿ ಸೈನಿಕರು, ವಿವಿಧ ಶಾಲೆಗಳ ಸ್ಕೌಟ್ಸ್, ಗೈಡ್ಸ್ ಮೊದಲಾದ ತಂಡಗಳಿಂದ ಪಥ ಸಂಚಲನ ಹಾಗೂ ಅತಿಥಿಗಳಿಂದ ಗೌರವ ವಂದನೆ ಸ್ವೀಕಾರ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು


Be the first to comment on "ಬಂಟ್ವಾಳ: ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣೆ"