
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂದು ಆಗ್ರಹಿಸಿ ಬಂಟ್ವಾಳದಲ್ಲಿ ಬಂಟ್ವಾಳ ವಕೀಲರ ಸಂಘ ಮತ್ತು ಸಾರ್ವಜನಿಕರ ಸಹಯೋಗದಲ್ಲಿ ಪೋಸ್ಟ್ ಕಾರ್ಡ್ ಚಳವಳಿ ನಡೆಯಿತು.
ಬಂಟ್ವಾಳದ ಹಿರಿಯ ವಕೀಲರು ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ. ಜಯರಾಮ್ ರೈ ಅವರು ಪೋಸ್ಟ್ ಕಾರ್ಡ್ ಚಳಿವಳಿಗೆ ಚಾಲನೆ ನೀಡಿ, ಹೈಕೋರ್ಟ್ ಪೀಠ ಸ್ಥಾಪನೆ ಶೀಘ್ರವಾಗಲಿ ಎಂದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಹಾಗೂ ವಕೀಲರ ಸಂಘ ಬಂಟ್ವಾಳದ ಅಧ್ಯಕ್ಷ ರಿಚರ್ಡ್ ಕೊಸ್ತಾ ಎಂ ಪೋಸ್ಟ್ ಕಾರ್ಡ್ ಚಳವಳಿ ಕುರಿತು ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ರಚನೆಯಾಗಬೇಕೆಂಬುದು ಎರಡು ದಶಕಗಳ ಹಿಂದೆ ಮಂಗಳೂರಿನ ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚಂಗಪ್ಪ ನೇತೃತ್ವದಲ್ಲಿ ಹೋರಾಟ ಪ್ರಾರಂಭವಾಗಿದ್ದು, ಪ್ರಸ್ತುತ ಒಂದುವರೆ ವರ್ಷಗಳಿಂದ ಮಂಗಳೂರಿನ ಈಗಿನ ಅಧ್ಯಕ್ಷರಾದ ಎಚ್.ವಿ. ರಾಘವೇಂದ್ರ ಅವರ ನೇತೃತ್ವದಲ್ಲಿ ಇದಕ್ಕೆ ಮತ್ತೆ ವೇಗ ಸಿಕ್ಕಿದ್ದು, ಅದರ ಮುಂದುವರಿದ ಹೋರಾಟದ ಅಂಗವಾಗಿ ಪೋಸ್ಟ್ ಕಾರ್ಡ್ ಅಭಿಯಾನ ಉಡುಪಿ ಮತ್ತು ಮಂಗಳೂರು ಜಿಲ್ಲೆಯ ಎಲ್ಲಾ ವಕೀಲರ ಸಂಘಗಳ ಸಹಯೋಗದಲ್ಲಿ ಏಕಕಾಲದಲ್ಲಿ ನಡೆಯುತ್ತಿದೆ ಎಂದರು.


ಹೈಕೋರ್ಟ್ ಪೀಠ ರಚನೆಗೆ ಮಂಗಳೂರಿನಲ್ಲಿ ಜಾಗ ಗುರುತಿಸಿದ್ದು, ಸರಕಾರ ಮತ್ತು ರಾಜ್ಯಪಾಲರಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಅಭಿಯಾನ ಮತ್ತು ಹೋರಾಟಗಳು ಪ್ರಾರಂಭವಾಗಿದ್ದು, ಈ ಹೋರಾಟಕ್ಕೆ ಎಲ್ಲಾ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಹಿರಿಯ ಕಿರಿಯ ವಕೀಲ ಮಿತ್ರರು, ಸಾರ್ವಜನಿಕರು, ಪೋಸ್ಟ್ ಕಾರ್ಡ್ ಅಭಿಯಾನ ದಲ್ಲಿ ಭಾಗವಹಿಸಿದರು. ನರೇಂದ್ರನಾಥ ಭಂಡಾರಿ ಸ್ವಾಗತಿಸಿದರು.


Be the first to comment on "ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯ: ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ"