ಡಿ.30ರಿಂದ ಕರಾವಳಿ ಕಲೋತ್ಸವ, ಉದ್ಯಮಿ, ಸಮಾಜಸೇವಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ

 

ಬಂಟ್ವಾಳ: ಡಿಸೆಂಬರ್ 30ರಿಂದ ಬಂಟ್ವಾಳದ ಗೋಲ್ಡನ್ ಪಾರ್ಕ್ ಅಸೋಸಿಯೇಟ್ಸ್ ಮೈದಾನದಲ್ಲಿ ಕರಾವಳಿ ಕಲೋತ್ಸವ 2023-24 ಎಂಬ 16 ದಿನಗಳ ಬೃಹತ್ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಕನ್ನಡ ಮತ್ತುಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಂಟ್ವಾಳ, ಚಿಣ್ಣರಲೋಕ ಸೇವಾಬಂಧು (ರಿ) ಬಂಟ್ವಾಳ ಆಶ್ರಯದಲ್ಲಿ ನಡೆಯಲಿದೆ ಎಂದು ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ತಿಳಿಸಿದ್ದು, ಈ ಸಂದರ್ಭ ಉದ್ಘಾಟನಾ ದಿನ ನಡೆಯುವ ಕಾರ್ಯಕ್ರಮದಲ್ಲಿ ಕರಾವಳಿ ಸೌರಭ ರಾಜ್ಯ ಪ್ರಶಸ್ತಿಯನ್ನು ಸಮಾಜಸೇವಕ ಮತ್ತು ಅಂತಾರಾಷ್ಟ್ರೀಯ ಕೈಗಾರಿಕೋದ್ಯಮಿ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಹೇಳಿದ್ದಾರೆ.

ಜಾಹೀರಾತು

ಇದೇ ವೇಳೆ ಉದಯ ಚೌಟ ಸಾಧನಾ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಕಬಡ್ಡಿ ಪಟು ಸುಕೇಶ್ ಹೆಗ್ಡೆ ಅವರಿಗೆ ಹಾಗೂ ಸಂಗೀತ ಕ್ಷೇತ್ರದ ಆಶ್ಮಿತ್ ಎ.ಜೆ. ಮಂಗಳೂರು ಅವರಿಗೆ ಚಿಣ್ಣರ ಸೌರಭ ರಾಜ್ಯಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದಿದ್ದಾರೆ.

30ರಂದು ಅನ್ನಪೂರ್ಣೇಶ್ವರಿ ದೇವಸ್ಥಾನದಿಂದ ಜಾನಪದ ದಿಬ್ಬಣ ಮೆರವಣಿಗೆ ಕಲೋತ್ಸವ ನಡೆಯುವ ಪ್ರದೇಶದವರೆಗೆ ನಡೆಯಲಿದ್ದು, ಕಲೋತ್ಸವವನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸುವರು. ವಿವಿಧ ವೇದಿಕೆ, ಮಳಿಗೆಗಳನ್ನು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ರಮಾನಾಥ ರೈ  ಉದ್ಘಾಟಿಸುವರು.

ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಕಲೋತ್ಸವದಲ್ಲಿ ಆಶೀರ್ವಚನ ನೀಡಲಿದ್ದು, ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು ಅ.ವಂ.ವಲೇರಿಯನ್ ಡಿಸೋಜ, ಮಿತ್ತ ಬೈಲ್ ಆಲ್ ಜಝರಿ ಇರ್ಷಾದ್ ಹುಸೈನ್ ದಾರಿಮಿ, ಎಸ್.ವೈ.ಎಸ್. ದ.ಕ. ಅಧ್ಯಕ್ಷ ಮೌಲಾನಾ ಅಬ್ದುಲ್ ಅಝೀಜ್ ದಾರಿಮಿ ಉಪಸ್ಥಿತರಿರುವರು. ಜನವರಿ 14ರವರೆಗೆ ಕಾರ್ಯಕ್ರಮಗಳು ನಡೆಯಲಿದೆ.

 

ಕನ್ಯಾನ ಸದಾಶಿವ ಶೆಟ್ಟಿ ಕೂಳೂರು

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನ ಫಕೀರ ಶೆಟ್ಟಿ ಲೀಲಾವತಿ ದಂಪತಿಯರಿಗೆ ಪುತ್ರನಾಗಿ ಜನಿಸಿ, ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಪದವಿ ವ್ಯಾಸಂಗವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕೈಗೊಂಡು. ಬಳಿಕ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದು, ತದನಂತರ ಉದ್ಯೋಗ ನಿಮಿತ್ತ ಮುಂಬಯಿ ಸೇರಿದ ಇವರು ನಿರ್ಲೋನ್ ಲಿಮಿಟೆಡ್, ಫಾರ್ಡ್ ಕೆಮಿಕಲ್ಸ್ ಇಂಡಸ್ಟ್ರೀಸ್, ಹೋಟೆಸ್ಟ್ ಫಾರ್ಮಾಸಿಟಿಕಲ್ಸ್ ಲಿಮಿಟೆಡ್ ಕಂ. ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪನಿಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದರು.

ಈ ಸುದೀರ್ಘ ವೃತ್ತಿ ಜೀವನದ ಅತುಲ ಅನುಭವವೇ ಮುಂದೆ ಆಧುನಿಕ ಕೃಷಿ ಉತ್ಪನ್ನ ಮಾರುಕಟ್ಟೆ ಬೇಡಿಕೆಯ ರಾಸಾಯನಿಕ ಗೊಬ್ಬರ ಹಾಗೂ ಔಷಧಗಳನ್ನು ಉತ್ಪಾದಿಸಿ, ಪೂರೈಕೆ ಮಾಡುವ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ತನ್ನದೇ ಆದ ಕಂಪನಿಯನ್ನು ಹುಟ್ಟುಹಾಕಿದರು. ಗ್ರಾಹಕರನ್ನು ಪ್ರಾರಂಭದ ಹಂತದಲ್ಲೇ ತೃಪ್ತಿಗೊಳಿಸಿ, ಗುಣಮಟ್ಟದ ಉತ್ಪಾದನೆ ನೀಡುವ ಪೂರೈಸುವ ಕಂಪನಿಯೆಂಬ ಖ್ಯಾತಿ ಪಡೆದು, ಮುಂದೆ ಕೆಲವೇ ವರ್ಷಗಳಲ್ಲಿ ಓರ್ವ ಯಶಸ್ವಿ ಧೀಮಂತ ಕೈಗಾರಿಕೋದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹೇರಂಬ ದೇಶದಾದ್ಯಂತ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡುವ ಕಂಪನಿಯಾಗಿದ್ದು ಮುಂದೆ ಉತ್ತಮ ಆದಾಯ ತರುವ ಉದ್ಯಮವಾದ ಪರಿಣಾಮ ತಾವು ನಡೆದು ಬಂದ ಸಂಘರ್ಷದ ದಾರಿಯನ್ನು ನೆನಪಿಸಿಕೊಳ್ಳುತ್ತಾ, ಬಡವರ ದೀನರ ಜೀವನದ ಯಾತನೆಗಳನ್ನು ನೆನಪಿಸುತ್ತಾ ಬೆಳೆದು ಬಂದ ಊರು, ಪರಿಸರದ ಜನಜೀವನ ಯಾಪನೆಗೆ ಪಡುವ ಪರಿಶ್ರಮ ಎಲ್ಲವನ್ನೂ ಮೆಲುಕು ಹಾಕುತ್ತಾ ತನ್ನ ಆದಾಯದ ಒಂದಂಶವನ್ನು ಅಶಕ್ತರ ಬಡವರ ದೀನದಲಿತರ ಉದ್ಧಾರಕ್ಕಾಗಿ, ದೈವ ದೇವರು, ನಾಗಬನಗಳು, ಆದಿ ಆಲಡೆಗಳ ಜೀರ್ಣೋದ್ಧಾರ ಕಾರ್ಯ, ಬಡ ಕುಟುಂಬದ ಹೆಣ್ಣುಮಕ್ಕಳ ವಿವಾಹ, ಮಕ್ಕಳ ಶಿಕ್ಷಣ ಹಾಗೂ ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ವಿಶ್ವ ಬಂಟರ ಸಂಘ ಒಕ್ಕೂಟಗಳ ಆರ್ಥಿಕ ಸಹಾಯ ಅಪೇಕ್ಷೆಗೆ ಬಂಟ ಬಾಂಧವ ಸಂಘಟನೆಗಳ ವಿಶ್ವ ಬಂಟರ ಒಕ್ಕೂಟಗಳ ಅವಿಭಾಜ್ಯ ಅಂಗವೆಂಬಂತೆ ಮಹಾದಾನಿಯಾಗಿ ತನ್ನನ್ನು ಜೋಡಿಸಿಕೊಂಡು ಜಾಗತಿಕ ಬಂಟರ ಸಂಘಗಳ ಒಕ್ಕೂಟಗಳ ಪ್ರತಿಯೊಂದು ಮಹತ್ವದ ಯೋಜನೆಗಳಲ್ಲಿ ತನ್ನ ಅನುದಾನ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ಪಟ್ಲ ಫೌಂಡೇಶನ್ ಗೌರವಾಧ್ಯಕ್ಷರಾಗಿ ಫೌಂಡೇಷನ್ ನ ಆಧಾರ ಸ್ತಂಭವಾಗಿರುವ ಅವರು,ಮೂಲ್ಕಿಯಲ್ಲಿ ತಲೆ ಎತ್ತಿದ ವಿಶ್ವ ಬಂಟ ಒಕ್ಕೂಟಗಳ  ಸಂಪರ್ಕ ಹಾಗೂ ಸಂಸ್ಥೆಯ ಆಡಳಿತ ಕಛೇರಿಯ ಬಹುಭಾಗದ ದೇಣಿಗೆ ನೀಡಿದವರು. ಉಡುಪಿ ಅಜ್ಜರಕಾಡಿನಲ್ಲಿ ನಡೆದ ಬಂಟರ ವಿಶ್ವ ಸಮ್ಮೇಳನದ ಯಶಸ್ಸು. ಹುಟ್ಟೂರಿನ ಹಾಗೂ ಆಸುಪಾಸಿನ ದೇವಾಲಯಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ತಮ್ಮ ಸಂಪತ್ತಿನ ಕೆಲವಂಶ ವಿನಿಯೋಗಿಸಲ್ಪಡುತ್ತಾ, ಅನೇಕ ಸಂಘ ಸಂಸ್ಥೆಗಳ ಮಹಾ ಪೋಷಕರೂ ಆಗಿದ್ದಾರೆ. ಸುಜಾತ ಶೆಟ್ಟಿಯವರೊಂದಿಗಿನ ಮಧುರ ದಾಂಪತ್ಯ ಹಾಗೂ ಮಕ್ಕಳಾದ ಶ್ರೀರಾಜ್ ಮತ್ತು ಶ್ರೇಯಾರೊಂದಿಗೆ ಸೊಸೆ,ಅಳಿಯ ಮೊಮ್ಮಕ್ಕಳೊಂದಿಗೆ ಸಾಂಸಾರಿಕ ಹಾಗೂ ಸಮಾಜ ಸೇವೆ ಕೈಗೊಂಡು ಮುನ್ನಡೆಯುತ್ತಿದ್ದಾರೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಡಿ.30ರಿಂದ ಕರಾವಳಿ ಕಲೋತ್ಸವ, ಉದ್ಯಮಿ, ಸಮಾಜಸೇವಕ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*