ಬಂಟ್ವಾಳ: ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಘಟ್ಟ ಪ್ರದೇಶದಲ್ಲಿ ನೀರಿನ ಹರಿವಿನ ಹೆಚ್ಚಳದ ಕಾರಣ ಬಂಟ್ವಾಳ ತಾಲೂಕಿನಲ್ಲಿ ಹರಿಯುವ ನೇತ್ರಾವತಿ ನದಿ ನೀರಿನ ಮಟ್ಟ ಗುರುವಾರ ಬೆಳಗ್ಗೆ 8 ಮೀಟರ್ ಎತ್ತರಕ್ಕೆ ಬಂದಿದೆ. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ತಗ್ಗು ಪ್ರದೇಶದ ಜನರಿಗೆ ನೆರೆಭೀತಿ ಉಂಟಾಗಿದೆ.
ಎಡೆಬಿಡದೆ ಸುರಿದ ಮಳೆಯಿಂದ ತಾಲೂಕಿನ ಅಲ್ಲಲ್ಲಿ ಮಣ್ಣುಕುಸಿತ ಮುಂದುವರಿದಿದ್ದು, ಕೆಲವೆಡೆ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ತಾಲೂಕಿನ ಹಲವೆಡೆ ಗುಡ್ಡ ಜರಿದ ಪ್ರಕರಣಗಳು ವರದಿಯಾಗಿದ್ದು, ಪಂಜಿಕಲ್ಲಿನ ಮುಕ್ಕುಡದಲ್ಲಿ ಗುಡ್ಡ ಜರಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.