ಬಂಟ್ವಾಳ: ಬೆಳಗ್ಗಿನ ಜಾವ 8 ಮೀಟರ್ ನಲ್ಲಿ ನೇತ್ರಾವತಿ ನದಿ ಬಂಟ್ವಾಳದಲ್ಲಿ ಹರಿಯುತ್ತಿದ್ದರೆ ಸಂಜೆ 7.2 ಮೀಟರ್ ಎತ್ತರಕ್ಕೆ ಇಳಿಯಿತು.
ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮತ್ತು ಘಟ್ಟ ಪ್ರದೇಶದಲ್ಲಿ ನೀರಿನ ಹರಿವಿನ ಹೆಚ್ಚಳದ ಕಾರಣ ಬಂಟ್ವಾಳ ತಾಲೂಕಿನಲ್ಲಿ ಹರಿಯುವ ನೇತ್ರಾವತಿ ನದಿ ನೀರಿನ ಮಟ್ಟದ ಗುರುವಾರದ ಏರಿಳಿತ ಇದು. ಅಪಾಯದ ಮಟ್ಟ 8.5 ಮೀಟರ್ ಆಗಿದೆ. ಆದರೂ ತಗ್ಗು ಪ್ರದೇಶದ ಜನರಿಗೆ ನೆರೆಭೀತಿ ಉಂಟಾಗಿದ್ದು, ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಡಾ. ಸ್ಮಿತಾ ರಾಮು ತಿಳಿಸಿದ್ದಾರೆ. ಎಡೆಬಿಡದೆ ಸುರಿದ ಮಳೆಯಿಂದ ತಾಲೂಕಿನ ಅಲ್ಲಲ್ಲಿ ಮಣ್ಣುಕುಸಿತ ಮುಂದುವರಿದಿದ್ದು, ಕೆಲವೆಡೆ ರಸ್ತೆ ಸಂಚಾರಕ್ಕೂ ಅಡಚಣೆ ಉಂಟಾಗಿದೆ. ತಾಲೂಕಿನ ಹಲವೆಡೆ ಗುಡ್ಡ ಜರಿದ ಪ್ರಕರಣಗಳು ವರದಿಯಾಗಿವೆ. ಕೊಯ್ಲ ಗ್ರಾಮದ ಕೈತ್ರೋಡಿ, ವಿಟ್ಲ ಕಸಬಾ, ಸಜಿಪಮೂಡ, ಕೇಪು, ಬಿಳಿಯೂರು, ಬಿ.ಕಸ್ಬಾ ಗ್ರಾಮದಲ್ಲಿ ಮನೆಗಳು ಹಾನಿಯಾಗಿವೆ. ಗುರುವಾರ ಒಟ್ಟು 6 ಮನೆಗಳು ಹಾನಿಯಾದ ಕುರಿತು ವರದಿಯಾಗಿವೆ.