ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಆಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದನ್ವಯ ಬುಧವಾರ ಬಂಟ್ವಾಳದ ಪತ್ರಕರ್ತರಿಗೆ ಮಾಹಿತಿ ನೀಡುವ ಕಾರ್ಯ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಉಪಸ್ಥಿತರಿದ್ದ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್, ಹಲವು ಸವಾಲುಗಳನ್ನು ಎದುರಿಸಿ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದ್ದು, ಕೊರೊನಾ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆಯಾಗಿದೆ, ಹೊರಜಿಲ್ಲೆಯವರು ಇಲ್ಲಿ ಬಂದು ದಾಖಲಾಗುವ ಕಾರಣ, ಸಾವಿನ ಸಂಖ್ಯೆಯಲ್ಲಿ ಆ ಭಾಗದವರೂ ಸೇರ್ಪಡೆಯಾಗುತ್ತಾರೆ. ಕೊರೊನಾ ಎರಡನೇ ಅಲೆ ಸಂದರ್ಭ ಜಿಲ್ಲೆಯಲ್ಲಿ ಎಲ್ಲಿಯೂ ಆಸ್ಪತ್ರೆಯ ಕೊರತೆ, ಆಕ್ಸಿಜನ್ ಕೊರತೆಯಾಗಲೀ ಆಗಿಲ್ಲ, ಸಂಭಾವ್ಯ ಮೂರನೇ ಅಲೆ ಎದುರಿಸಲೂ ಇಲಾಖೆ ಸನ್ನದ್ಧವಾಗಿದ್ದು, ತನ್ನ ಇತರ ಕಾರ್ಯಗಳ ನಡುವೆ ಇಲಾಖೆ ಕೆಲಸ ಮಾಡುತ್ತಿದೆ ಎಂದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರು ಮಲೇರಿಯಾ ಮತ್ತು ಡೆಂಘೆ ರೋಗಗಳ ಕುರಿತು ವಿವರ ನೀಡಿ, ಇಲಾಖೆಗಳು ಎಷ್ಟು ಕಾಳಜಿ ವಹಿಸಿದರೂ ಅದಕ್ಕಿಂತ ಮುಖ್ಯವಾಗಿ ಜನರು ಜಾಗೃತಿ ವಹಿಸುವುದು ಅಗತ್ಯ. ಸೊಳ್ಳೆ ಉತ್ಪತ್ತಿಯಾಗುವುದನ್ನು ನಿಯಂತ್ರಣಗೊಳಿಸಿದರೆ, ಮಲೇರಿಯಾ ಡೆಂಘೆಯನ್ನು ಕಡಿಮೆ ಮಾಡಬಹುದು.ಫಾಗಿಂಗ್ ಅಥವಾ ಇತರ ತಾತ್ಕಾಲಿಕ ಪರಿಹಾರಗಳ ಬದಲು ರೋಗವಾಹಕಗಳ ನಾಶ ಮಾಡಬೇಕು, ಮಹಡಿ ಮೇಲೆ ನಿಂತ ನೀರು, ಎಸೆದ ತ್ಯಾಜ್ಯ, ಮಳೆ ನೀರು ನಿಂತ ಜಾಗಗಳು ಸೊಳ್ಳೆಯುತ್ಪಾದನೆಗೆ ಪೂರಕವಾಗಿದ್ದು, ಇವುಗಳನ್ನು ಗಮನಿಸಿದರೆ ಹಾಗೂ ಸೊಳ್ಳೆಯ ಕುರಿತು ಗಂಭೀರವಾಗಿ ಜನರು ಜಾಗೃತಗೊಂಡರೆ ಮಲೇರಿಯಾ ನಿಯಂತ್ರಣ ಸಾಧ್ಯ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಾ ಪ್ರಭು ಸ್ವಾಗತಿಸಿ, ವಂದಿಸಿದರು.