For Video Click Here:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊರರಾಜ್ಯ, ದೇಶಗಳಿಂದ ಬರುವವರ ಸಂಖ್ಯೆ ಅಧಿಕಗೊಳ್ಳುವ ನಿರೀಕ್ಷೆ ಇರುವ ಕಾರಣ ತಂತ್ರಜ್ಞಾನದ ಮೂಲಕ ಆಪ್ ಸಿದ್ಧಪಡಿಸಿ ಕ್ವಾರಂಟೈನ್ ವಾಚ್ ಅನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ ಎಂದು ದ.ಕ.ಜಿಲ್ಲಾಧಿಕಾರಿ ಸಿಂಧು ರೂಪೇಶ್ ಹೇಳಿದ್ದಾರೆ.
ಶನಿವಾರ ಬಂಟ್ವಾಳ ತಾ.ಪಂ.ನ ಎಸ್ಜಿಎಸ್ವೈ ಸಭಾಂಗಣದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಕ್ವಾರಂಟೈನ್ನಲ್ಲಿರುವವರ ಮಾಹಿತಿ ಹಾಗೂ ಅದರ ಹೊಸ ತಾಂತ್ರಿಕ ವ್ಯವಸ್ಥೆಗಳ ಕುರಿತು ತಾಲೂಕಿನ ಗ್ರಾ.ಪಂ.ಗಳ ಪಿಡಿಒ, ಗ್ರಾಮಕರಣಿಕರು ಹಾಗೂ ಬಿಲ್ ಕಲೆಕ್ಟರ್ಗಳ ಸಭೆ ನಡೆಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಎಡಿಸಿ ಎಂ.ಜೆ.ರೂಪ, ಮಂಗಳೂರು ಸಹಾಯಕ ಕಮೀಷನರ್ ಮದನ್ಮೋಹನ್ ಸಿ, ಬಂಟ್ವಾಳ ತಾ.ಪಂ.ಇಒ ರಾಜಣ್ಣ, ತಹಶೀಲ್ದಾರ್ ರಶ್ಮಿ ಎಸ್.ಆರ್, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ನವೀನ್ ಬೆಂಜನಪದವು ಮೊದಲಾದವರು ಸಭೆಯಲ್ಲಿದ್ದರು.
ಜಿಲ್ಲಾಧಿಕಾರಿ ಹೇಳಿದ್ದೇನು:
- ಗ್ರಾಮ ಕರಣಿಕರು, ವಿಎ, ಬಿಲ್ ಕಲೆಕ್ಟರ್ಗಳಿಗೆ ಮಾಹಿತಿ ಸಂಗ್ರಹದ ದೃಷ್ಟಿಯಿಂದ ಅವರು ವ್ಯಾಪ್ತಿಗೆ ಅನುಗುಣವಾಗಿ ಕ್ವಾರಂಟೈನ್ ವಾಚ್ನ್ನು ವಿಭಾಗಿಸಲಾಗಿದ್ದು, ಅವರ ಮನೆ ಮುಂದೆ ಸೀಲರ್ ಅಂಟಿಸಲಾಗಿದ್ದು, ಕೈಗೆ ಸೀಲ್ ಹಾಕಿರುತ್ತೇವೆ.
- ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಟೊ ತೆಗೆದು ಖಚಿತಪಡಿಸಿಕೊಳ್ಳಲಾಗುತ್ತದೆ. ಅವರು ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಲಾಗುತ್ತದೆ.
- ಸಿಕ್ಯುಎಎಸ್ ಸಿಸ್ಟಂ ಮೂಲಕ ಕ್ವಾರಂಟೈನ್ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಬಂಟ್ವಾಳದಲ್ಲಿ ಹೊಸದಾಗಿ ಕೊರೋನಾ ಫಾಸಿಟಿವ್ ಪತ್ತೆಯಾಗಿರುವ ನಾವೂರು, ಅಮ್ಟೂರು ಹಾಗೂ ನೆಟ್ಲ ಮುಡ್ನೂರು ಗ್ರಾಮಗಳಲ್ಲಿ ಪಾಸಿಟಿವ್ ಬಂದಿರುವ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ
- ಡೆಂಘೆ, ಮಲೇರಿಯಾಗಳೂ ಬರುವ ಈ ಹೊತ್ತಿನಲ್ಲಿ ಜ್ವರ ಬರುವ ಸಂದರ್ಭ ಮಾಹಿತಿಗಳನ್ನು ನೀಡಬೇಕು, ತಾಲೂಕಿನಲ್ಲಿ ಮೂರು ಜ್ವರ ಕ್ಲಿನಿಕ್ ಗಳಿವೆ. ಇದನ್ನು ಅಗತ್ಯ ಬಿದ್ದರೆ ಹೆಚ್ಚಿಸಲಾಗುವುದು
- ಮನೆಯಲ್ಲಿರುವ ಪ್ರತಿಯೊಬ್ಬರ ಮಾಹಿತಿ ಆರೋಗ್ಯದ ಕುರಿತಾಗಿ ವಿವರ ದಾಖಲಿಸುವ ಹೆಲ್ತ್ ವಾಚ್ ಸರ್ವೇಕಾರ್ಯ ಜಿಲ್ಲೆಯಲ್ಲಿ ನಡೆದಿದ್ದು, ಬಂಟ್ವಾಳದಲ್ಲಿ ಶೇ 90 ರಷ್ಟು ಸರ್ವೇಕಾರ್ಯ ನಡೆದಿದೆ.
- ಎಸ್.ಎಸ್.ಎಲ್.ಸಿ. ಪರೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಗೆ 345 ವಿದ್ಯಾರ್ಥಿಗಳು ಪಿಯುಸಿ ಪರೀಕ್ಷೆಗೆ ಸಾವಿರಕ್ಕೂ ಅಧಿಕ ಮಂದಿ ಬರೆಯಲಿದ್ದು, ನೆರೆಯ ಕೇರಳದಿಂದ ಪರೀಕ್ಷೆಗೆ ಹಾಜರಾಗಬೇಕಿದ್ದವರನ್ನು, ಪರೀಕ್ಷಾ ಪ್ರವೇಶಪತ್ರ ತೋರಿಸಿದರೆ ಪರೀಕ್ಷಾ ಕೇಂದ್ರಗಳಿಗೆ ಕರೆತಂದು ಮರಳಿ ವಾಪಾಸು ಬಿಡುವ ವ್ಯವಸ್ಥೆ ಮಾಡಲಾಗಿದೆ
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ