ಬುದ್ಧಿಜೀವಿ ಎನಿಸಿಕೊಂಡ ಮಾನವ ವಿವೇಚನಾಶೂನ್ಯನಾಗಿರುವುದರಿಂದ ಇಂದು ಪರಿಸರದ ವಿನಾಶವಾಗುತ್ತಿದೆ. ಸ್ವಚ್ಛ ಗಾಳಿ ಸಮೃದ್ಧ ಪರಿಸರಕ್ಕಾಗಿ ಗಿಡ ಮರಗಳನ್ನು ನೆಟ್ಟು ಬೆಳೆಸುದಲ್ಲದೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣ ಅನಿವಾರ್ಯ ಎಂದು ಪರಿಸರ ಪ್ರೇಮಿ, ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ಹೇಳಿದರು.
ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿನ ಚಿಗುರು ಪರಿಸರ ಸಂಘವು ಜೋಡುಮಾರ್ಗ ನೇತ್ರಾವತಿ ಜ್ಯೂನಿಯರ್ ಜೇಸಿ ಹಾಗು ಇಂಟಾರ್ಯಾಕ್ಟ್ ಕ್ಲಬ್ ಬಂಟ್ವಾಳ ಟೌನ್ ಆಶ್ರಯದಲ್ಲಿ ನಡೆಸಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ದಲ್ಲಿ ಹಣ್ಣು ಮತ್ತು ಔಷಧೀಯ ಸಸ್ಯ ನೆಟ್ಟು ವಾಯುಪ್ರದೂಷಣೆ ಮತ್ತು ಕಸ ನಿರ್ವಹಣೆ ಬಗ್ಗೆ ಮಾಹಿತಿ ನೀಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಶಿಕ್ಷಕರಾದ ಸದಾಶಿವ ನಾಯಕ್ ವಹಿಸಿದ್ದರು.
ಜೇಸಿ ಉಪಾಧ್ಯಕ್ಷ ಹರಿಪ್ರಸಾದ್ ಕುಲಾಲ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಿನ್ನಪ್ಪ ಜಾಲ್ಸೂರು, ಶಿಕ್ಷಕರಾದ ವರಮಹಾಲಕ್ಷ್ಮೀ, ಪ್ರಕಾಶ್ ಸಜಿಪ, ಹರೀಶ ದೇವಂದಬೆಟ್ಟು, ಜೇಜೆಸಿ ಅಧ್ಯಕ್ಷ ರೋನಿತ್ ಬಿ.ಜಿ, ಇಂಟಾರಾಕ್ಟ್ ಅಧ್ಯಕ್ಷೆ ಶ್ರೀವಿದ್ಯಾ, ಪರಿಸರ ಸಂಘದ ಅಧ್ಯಕ್ಷ ನಮನ್ ಕುಮಾರ್ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕರಾದ ಭಾರತಿ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ವಿಶ್ಮಿತಾ ವೇಗಸ್ ಸ್ವಾಗತಿಸಿ, ಪ್ರತೀಕ್ಷಾ ವಂದಿಸಿದರು. ಸುರಕ್ಷಾ ನಿರೂಪಿಸಿದರು.