ಕುರ್ನಾಡು: ಬಂಟ್ವಾಳ ತಾಲೂಕು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕದ ಪ್ರಧಾನ ಕಾರ್ಯಕ್ರಮಗಳು ಏ.1ರಂದು ಸೋಮವಾರ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಮುಂಜಾನೆ 6.29ರಿಂದ 7.13ರ ತನಕ ಒದಗಿದ ಧನಿಷ್ಠ ನಕ್ಷತ್ರ ಮೀನರಾಶಿಯಲ್ಲಿ ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕಗಳು ವಿಜೃಂಭಣೆಯಿಂದ ನೆರವೇರಿದವು.
ಸಹಸ್ರಾರು ಮಂದಿ ಭಕ್ತರು, ದೇವಳದ ಆಡಳಿತ ಮಂಡಳಿ, ಜೀರ್ಣೋರ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಮುಖರು ಈ ಸಂಭ್ರಮಕ್ಕೆ ಸಾಕ್ಷಿಗಳಾಗಿದ್ದರು.
ಉತ್ಸವದ ಸಂದರ್ಭ ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ಅನ್ನಪ್ರಸಾದ ಸ್ವೀಕರಿಸಿ, ದೇವರ ದರ್ಶನ ಪಡೆದಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಯುಕ್ತ ಬೆಳಗ್ಗೆ 11ರಿಂದ ಕೊಳಲು ಸಂಗೀತ ವಿದ್ಯಾಲಯ ಇರಾ ಮುಡಿಪು ವಿದ್ಯಾರ್ಥಿಗಳಿಂದ ನಾದ ತರಂಗ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ 2ರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ ಪ್ರಸ್ತುತಗೊಂಡಿತು. ಸತೀಶ್ ಶೆಟ್ಟಿ ಪಟ್ಲ, ಗಿರೀಶ್ ರೈ ಕಕ್ಕೆಪದವು, ಡಾ.ಪ್ರಖ್ಯಾತ್ ಶೆಟ್ಟಿ ಅಳಿಕೆ ಭಾಗವತಿಕೆಯಲ್ಲಿ ಸಹಕರಿಸಿದರು. ರಾತ್ರಿ ಕುರ್ನಾಡು ಗುತ್ತು ಎಚ್.ರಾಮಯ್ಯ ನಾಯ್ಕ್ ವೇದಿಕೆಯಲ್ಿ ಕಾಪು ರಂಗತರಂಗ ಕಲಾವಿದರಿಂದ ಶರತ್ ಉಚ್ಚಿಲ ನಿರ್ದೇಶನದಲ್ಲಿ ಶ್ಯಾಮ್ ಕುಮಾರ್ ಚಿತ್ರಾಪು ವಿರಚಿತ ತುಳು ಸಾಂಸಾರಿಕ ಹಾಸ್ಯ ನಾಟಕ ಪೊಪ್ಪ ಪ್ರದರ್ಶನಗೊಂಡಿತು. ಸಂಜೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು.
(more…)