ಬಂಟ್ವಾಳದ ಪಾಣೆಮಂಗಳೂರು, ಬಂಟ್ವಾಳದ ಕೆಲ ಭಾಗಗಳಲ್ಲಿ ಆಗಸ್ಟ್ 1ರಂದು ದಿಢೀರನೆ ಸಂಜೆ ವೇಳೆ ನೇತ್ರಾವತಿ ನೀರಿ ಅಪಾಯದ ಮಟ್ಟ ಮೀರಿ ಹರಿದು ರಸ್ತೆ, ಮನೆಗಳಿಗೆಲ್ಲಾ ನುಗ್ಗಿತ್ತು. ಭಾನುವಾರ (ಆಗಸ್ಟ್ 2) ಬೆಳಗಿನ ಜಾವ ಪ್ರವಾಹ ಇಳಿಮುಖವಾಗಿತ್ತು. ಬೆಳಗ್ಗೆ 7.4 ಮೀಟರ್ ಎತ್ತರದಲ್ಲಿ ನೇತ್ರಾವತಿ ಹರಿಯುತ್ತಿತ್ತು. ಆದರೆ ಮಧ್ಯಾಹ್ನ ನೀರಿನ ಮಟ್ಟ ಏರಿಕೆಯಾಗಿದೆ. 8.3 ಮೀಟರ್ ಎತ್ತರದಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು, ಮತ್ತೆ ಪ್ರವಾಹ ಭೀತಿ ಎದುರಾಗಿದೆ.
ಪಾಣೆಮಂಗಳೂರು ಆಲಡ್ಕದಲ್ಲಿ ಮುಂಜಾಗ್ರತಾ ಕ್ರಮವಾಗಿ 15 ಮನೆಗಳ ಸದಸ್ಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಲಾಗಿದೆ. ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದ್ದು, ನಿಗಾ ಇಡಲಾಗಿದೆ
ಶನಿವಾರ ರಾತ್ರಿ ನೇತ್ರಾವತಿ ನದಿ ಜಕ್ರಿಬೆಟ್ಟು ಸಹಿತ ಹಲವೆಡೆ ರಸ್ತೆಗೆ ಹರಿದುಬಂದಿತ್ತು. ಬಡ್ಡಕಟ್ಟೆ ಬಸ್ ನಿಲ್ದಾಣಕ್ಕೆ ಬಸ್ಸುಗಳು ಒಳಗೆ ಬಾರದಿದ್ದರೂ, ವರ್ಷಕ್ಕೆ ಒಮ್ಮೆಯಾದರೂ ನದಿ ನೀರು ನುಗ್ಗಿ ಹೊಳೆಯಂತಾಗುವ ಪರಿಸ್ಥಿತಿ ಇದೆ. ಶನಿವಾರವೂ ಹಾಗೆಯೇ ಆಗಿತ್ತು. ಬಂಟ್ವಾಳ ವೆಂಕಟರಮಣ ದೇವಸ್ಥಾನದ ಸನಿಹ ಮೆಟ್ಟಿಲಿನ ಬಳಿಯೂ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡಿತ್ತು.