ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳನ್ನು ಬಂಧಿಸಲು ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಫ್ಲೈಓವರ್ ಅಡಿಯಲ್ಲಿ ಹಿಂದು ಹಿತರಕ್ಷಣಾ ಸಮಿತಿ ಮತ್ತಿತರ ಸಂಘಟನೆ ವತಿಯಿಂದ ಧರಣಿ, ಉಪವಾಸ ಸತ್ಯಾಗ್ರಹ ಮಂಗಳವಾರ ನಡೆಯಿತು.
ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡರು, ರಾಜ್ಯ ಸರಕಾರದ ತುಷ್ಟೀಕರಣ ನೀತಿ ಇದಕ್ಕೆ ಕಾರಣ ಎಂದು ಆಪಾದಿಸಿದರು. ಎರಡು ತಿಂಗಳ ಹಿಂದೆ ನಡೆದ ಕಲ್ಲಡ್ಕ ಘರ್ಷಣೆ ಬಳಿಕ ಮೆಲ್ಕಾರ್, ತುಂಬೆ ಮತ್ತು ಕಣ್ಣೂರು ಮತ್ತಿತರ ಪ್ರದೇಶದಲ್ಲಿ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಹತ್ಯಾಯತ್ನ ನಡೆಸಿರುವ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದು ಮೌನ ವಹಿಸಿದ್ದಾರೆ ಎಂದು ದೂರಿದರು.
ಶೀಘ್ರ ಈ ಎರಡು ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಸ್ವರೂಪದ ಹೋರಾಟದ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಿಜೆಪಿ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್, ಮುಖಂಡರಾದ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಹಿಂದು ಹಿತರಕ್ಷಣಾ ಸಮಿತಿ ಸಂಚಾಲಕ ರವಿರಾಜ್ ಬಿ.ಸಿ.ರೋಡ್, ಮುಖಂಡರಾದ ಜಿತೇಂದ್ರ ಕೊಟ್ಟಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಆರ್ಎಸ್ಎಸ್ ವಿಭಾಗ ಕಾರ್ಯಕಾರಿ ಸದಸ್ಯ ಪ್ರವೀಣ ಸರಳಾಯ, ಮೃತ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಸರಪಾಡಿ ಅಶೋಕ ಶೆಟ್ಟಿ, ಪ್ರವೀಣ ತುಂಬೆ, ಸುಂದರ ಭಂಡಾರಿ, ರಾಧಾಕೃಷ್ಣ ಅಡ್ಯಂತಾಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಪೂಜಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಲಕ್ಷ್ಮೀ ಗೋಪಾಲ ಆಚಾರ್ಯ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಪ್ರಮುಖರಾದ ಆನಂದ ಶಂಭೂರು, ರಮಾನಾಥ ರಾಯಿ, ಚರಣ್ ಜುಮಾದಿಗುಡ್ಡೆ, ವಜ್ರನಾಥ ಕಲ್ಲಡ್ಕ, ಸಂತೋಷ್ ಕುಮಾರ್ ಬೆಟ್ಟು, ಗಣೇಶ ರೈ, ಪ್ರಕಾಶ ಅಂಚನ್, ಪುರುಷೋತ್ತಮ ಸಾಲ್ಯಾನ್, ಕಿಶೋರ್ ಶೆಟ್ಟಿ, ಸೀತಾರಾಮ ಪೂಜಾರಿ ಮತ್ತಿತರರು ಇದ್ದರು.