ಕಲ್ಲಡ್ಕ

ಪೊಲೀಸ್ ಇಲಾಖೆ ಬಳಸಿ ಭೀತಿ ವಾತಾವರಣ ಸೃಷ್ಟಿ: ಕೊಟ್ಟಾರಿ ಆರೋಪ

ವಾರದ ಹಿಂದೆ ಭಿನ್ನ ಕೋಮುಗಳ ನಡುವೆ ನಡೆದ ವೈಯಕ್ತಿಕ ಜಗಳಕ್ಕೆ ಕೋಮು ಗಲಭೆಯ ಬಣ್ಣ ಹಚ್ಚಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಇದಕ್ಕೆ ಪೊಲೀಸ್ ಇಲಾಖೆಯನ್ನು ಬಳಸಲಾಗಿದ್ದು, ಉಸ್ತುವಾರಿ ಸಚಿವರೇ ನೇರ ಹೊಣೆ ಎಂದು ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಆರೋಪಿಸಿದ್ದಾರೆ.

ಜಾಹೀರಾತು

ಶುಕ್ರವಾರ ಬಿ.ಸಿ.ರೋಡ್ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಲ್ಲಡ್ಕದಲ್ಲಿ ಪೊಲೀಸರ ಮೂಲಕ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭಯದ ವಾತಾವರಣ ನಿರ್ಮಿಸುತ್ತಿರುವುದು ಖಂಡನೀಯ, ಒಂದು ವರ್ಗದ ಓಲೈಕೆಗೆ ಪೊಲೀಸ್ ಇಲಾಖೆ ಮೇಲೆ ಒತ್ತಡ ಹೇರಿ ಬಹುಸಂಖ್ಯಾತ ಹಿಂದೂಗಳ ಮೇಲೆ ಮಾತ್ರ ಕೇಸು ದಾಖಲಿಸುತ್ತಿದ್ದಾರೆ ಎಂದು ದೂರಿದರು.

ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ ದಾಂಧಲೆ ಸೃಷ್ಟಿಸಿರುವ ಮತ್ತು ಸುಳ್ಳು ದೂರು ಕೊಟ್ಟ ಕಿಡಿಗೇಡಿಗಳ ವಿರುದ್ದವೂ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬೇಕು, ಪ್ರಕರಣದಲ್ಲಿ ಸಿಲುಕಿಸಲಾದ ಮಿಥುನ್ ಸೇರಿದಂತೆ ಅಮಾಯಕರ ಮೇಲಿನ ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ವಿನಾ ಕಾರಣ ಕಲ್ಲಡ್ಕ ಪರಿಸರದ ಸುಮಾರು 60 ಮಂದಿಗೆ ಶಾಂತಿಭಂಗ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿರುವುದನ್ನೂ ಅವರು ಖಂಡಿಸಿದರು.

ಹಿಂದೆಲ್ಲ ಕಲ್ಲಡ್ಕದಲ್ಲಿ ಗಲಭೆ ನಡೆದ ವೇಳೆ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದರು. ಆದರೆ ಮೊನ್ನೆ ಘಟನೆ ಬಗ್ಗೆ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ಸಚಿವರು ಇದಕ್ಕೆ ಕಾರಣಕರ್ತರಾಗಿದ್ದಾರೆ. ಪ್ರಕರಣವನ್ನು ಜಿಲ್ಲೆಯಿಂದ ಹೊರತಾದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಜಾಹೀರಾತು

ಘಟನೆಯ ಮರುದಿನ ಗುಂಪೊಂದು  ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲೇ ಅಂಗಡಿ ಮುಗ್ಗಟ್ಟುಗಳನ್ನು ಬಲವಂತವಾಗಿ ಬಂದ್ ಗೊಳಿಸಿದಾಗ ಸ್ಥಳದಲ್ಲಿದ್ದ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು, ಈ ಎಲ್ಲಾ ಘಟನೆಯ ಬಳಿಕ ಸಚಿವ ರೈ ಯಾವುದೇ ಪ್ರತಿಕ್ರಿಯೆ ಯನ್ನೂ ಕೂಡ ನೀಡದೇ ಮೌನವಾಗಿರುವುದ ಯಾಕೆ ಎಂದು ಪ್ರಶ್ನಿಸಿದರು.

ಕಲ್ಲಡ್ಕ ಪರಿಸರದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದ್ದು, ಜನಸಾಮಾನ್ಯರು ಎಂದಿನಂತೆ ಓಡಾಟ ನಡೆಸುತ್ತಿದ್ದರೂ ಸೆ.144 ನ್ನು ಮತ್ತೆ ಮುಂದುವರಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಕಲ್ಲಡ್ಕ ಪರಿಸರದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿ ಭಯದ ವಾತಾವರಣ ಉಂಟುಮಾಡಲಾಗುತ್ತಿದೆ ಎಂದರು.

ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಂದು ಪ್ರಕರಣದಲ್ಲೂ ಮಿಥುನ್ ನನ್ನು ಪೊಲೀಸರು ಟಾರ್ಗೇಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಗೋಷ್ಠಿಯಲ್ಲಿ ಹಾಜರಿದ್ದ ಜಿ.ಪಂ. ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್ ಆರೋಪಿಸಿದರು. ಹಿಂದೂ ಸಂಘಟನೆಯನ್ನು ಹತ್ತಿಕ್ಕಲು ಸಚಿವರು ಪೊಲೀಸರ ಮೂಲಕ ಇಂಥ ಪ್ರಯತ್ನ ನಡೆಸುತ್ತಿದ್ದಾರೆ, ಇದೇ ರೀತಿ ಮುಂದುವರಿದರೆ ಬಿಜೆಪಿ ಕೂಡ ಇದರ ವಿರುದ್ದ ಪ್ರತಿಭಟನೆ ನಡೆಸಿ ರಾಜಕೀಯವಾಗಿ ಎದುರಿಸಲಿದೆ ಎಂದು ತಾಲೂಕು ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ ತಿಳಿಸಿದರು.

ಜಾಹೀರಾತು

ಮೇ.26 ರ ಘಟನೆ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎನ್ನುವ ಪೊಲೀಸರು ಅದನ್ನು ಬಹಿರಂಗ ಪಡಿಸಿ, ಸತ್ಯಾಸತ್ಯತೆಯನ್ನು ಜನರಿಗೆ ತಿಳಿಸಲಿ, ಅಮಾಯಕ ಯುವಕರ ಮೇಲೆ ಯಾರದೋ ಒತ್ತಡಕ್ಕೆ ಕೇಸು ದಾಖಲಿಸಿ ಭವಿಷ್ಯವನ್ನು ಬಲಿತೆಗೆದುಕೊಳ್ಳುವುದು ಬೇಡ ಎಂದು ಬಿಜೆಪಿಯ ಎಸ್‌ಸಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಸದಸ್ಯ ಮಹಾಬಲ ಆಳ್ವ, ಬಂಟ್ವಾಳ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ರೈತ ಮೋರ್ಚಾ ಉಪಾಧ್ಯಕ್ಷ ಅಣ್ಣು ಪೂಜಾರಿ ಉಪಸ್ಥಿತರಿದ್ದರು.

Also Read:

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ