ಸೋಶಿಯಲ್ ಮೀಡಿಯಾ ಬಂದ ಮೇಲೆ ಯಕ್ಷಗಾನದ ಖದರ್ರೇ ಬೇರೆಯಾಗಿದೆ. ಕೆಲವೊಮ್ಮೆ ಅತಿ ಎನಿಸುವಷ್ಟು ವಾಟ್ಸಾಪ್ ಗುಂಪುಗಳು ನಮ್ಮನ್ನು ಸೇರಿಸಿದರೂ ಅಂತಿಮವಾಗಿ ಆಯ್ಕೆ ನಮ್ಮದೇ.
ಯಕ್ಷಗಾನಕ್ಕೆಂದೇ ಮೀಸಲಿರಿಸಲಾದ ಗುಂಪುಗಳು ಹಲವು. ಅವುಗಳಲ್ಲಿ ಕೆಲವು ಕಲಾವಿದರ ಅಭಿಮಾನಿಗಳ ಗುಂಪೂ ಇವೆ. ಅದೆಷ್ಟೋ ಮಂದಿ ರಂಗಸ್ಥಳದ ಎದುರು ಕಣ್ಣಾರೆ ನೋಡಲಾಗದ್ದನ್ನು ವಾಟ್ಸಾಪ್ ಗ್ರೂಪುಗಳನ್ನು ಕ್ಲಿಕ್ಕಿಸಿ ನೋಡಿ ಅನುಭವಿಸುತ್ತಾರೆ. ಕೊರೊನಾ ನಂತರದಲ್ಲಂತೂ ಯೂಟ್ಯೂಬ್ ಸಹಿತ ಸೋಶಿಯಲ್ ಮೀಡಿಯಾ ನಮ್ಮ ಬದುಕಿನ ಭಾಗವೇ ಆಗಿ ಹೋಗಿದೆ.
ಈ ಮಧ್ಯೆ ಸಂಪೂರ್ಣವಾಗಿ ಯಕ್ಷಗಾನಕ್ಕೆ ಸಮರ್ಪಿಸಲಾದ ಗುಂಪೊಂದು ಸಕ್ರಿಯವಾಗಿರುವುದಲ್ಲದೆ, 2016ರಿಂದ ಯಕ್ಷಗಾನ ಪ್ರದರ್ಶನವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸುತ್ತಾ ಬಂದಿದೆ.. ವಿನಯಕೃಷ್ಣ ಕುರ್ನಾಡು ಮತ್ತು ಸತೀಶ ಮಂಜೇಶ್ವರ ಅಡ್ಮಿನ್ ಗಳಾಗಿರುವ ಯಕ್ಷಗಾನ ಗುಂಪು ಭ್ರಾಮರಿ ಯಕ್ಷಮಿತ್ರರು ಮಂಗಳೂರು ಟ್ರಸ್ಟ್ ಬಳಗದ ಯಶೋಗಾಥೆಯಿದು.
ಏನಿದು ಬಳಗ ?
ಗುಡ್ ಮಾರ್ನಿಂಗ್,ಗುಡ್ ನೈಟ್, ಹಾಯ್ ಹಲೋ , ಇಲ್ಲದೆ ಕೇವಲ ಯಕ್ಷಗಾನ ಕೇಂದ್ರಿತವಾಗಿರುವ ಭ್ರಾಮರೀ ಯಕ್ಷಮಿತ್ರರು ಸಮಾನ ಮನಸ್ಕರ ವಾಟ್ಸಾಪ್ ಗುಂಪು. ವೃತ್ತಿಪರ,ಹವ್ಯಾಸಿ ಯಕ್ಷಗಾನ ಕಲಾವಿದರು, ಪತ್ರಕರ್ತರು, ಮಾಧ್ಯಮದ ಸಿಬಂದಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು,ಉದ್ಯಮಿಗಳು, ಕೃಷಿಕರು. ಸರಕಾರಿ, ಖಾಸಗಿ ಉದ್ಯೋಗಸ್ಥರು , ವೈದ್ಯರು, ಅನಿವಾಸಿ ಭಾರತೀಯರು, ಹೊರರಾಜ್ಯದಲ್ಲಿರುವವರು. ಹೀಗೆ ಹಲವು ಉದ್ಯೋಗಗಳಲ್ಲಿರುವ, ಸರ್ವಧರ್ಮದ ಬಂಧುಗಳು ಇಲ್ಲಿದ್ದಾರೆ.
2015 ರ ಪೆಬ್ರವರಿ ತಿಂಗಳ 16 ರಂದು ಸ್ಥಾಪಿಸಲ್ಪಟ್ಟ ಬಳಗ ಯಕ್ಷಮಿತ್ರರು..ಮುಂದೆ ಬಳಗ ಹಲವಾರು ಸದಸ್ಯರ ಸೇರ್ಪಡೆಯೊಂದಿಗೆ ವಿಸ್ತಾರವಾಗಿ ಬೆಳೆಯಿತು. ಸಮಾನ ಆಸಕ್ತಿಯ ಗೆಳೆಯರೆಲ್ಲ ಒಂದೆಡೆ ಸೇರುವಂತೆ ಮಾಡಿತು. ಬಳಗ ಬೆಳೆದಂತೆ ಯಕ್ಷಮಿತ್ರರು ಅನ್ನುವ ಹಲವಾರು ಬಳಗ ಇರುವ ಕಾರಣಕ್ಕೆ ಮೂಲ ಹೆಸರನ್ನು ಉಳಿಸಿಕೊಂಡು ಬಳಗಕ್ಕೊಂದು ಹೊಸ ಹೆಸರು ಇಡ ಬೇಕೆಂಬ ಹಂಬಲದೊಂದಿಗೆ ಬಳಗದ ಸರ್ವ ಸದಸ್ಯರ ಒಪ್ಪಿಗೆಯಂತೆ ಸದಸ್ಯ ಅಶ್ವಿತ್ ಶೆಟ್ಟಿ ತುಳುನಾಡ್ ಅವರು ಸೂಚಿಸಿದ ಭ್ರಾಮರೀ ಯಕ್ಷಮಿತ್ರರು ಹೆಸರನ್ನು ಬಳಗಕ್ಕೆ ಇಡುವುದರ ಮೂಲಕ ಯಕ್ಷಮಿತ್ರರು ಬಳಗ ಭ್ರಾಮರೀ ಯಕ್ಷಮಿತ್ರರು ಆಯಿತು. ಇದೀಗ ಟ್ರಸ್ಟ್ ಆಗಿ ರೂಪುಗೊಂಡಿದೆ.
ಬಳಗದ ಸದಸ್ಯರಲ್ಲಿ ಒಬ್ಬರಾದ ಮಹೇಶ್ ಪುತ್ತೂರು ಅವರು ಒಂದು ದಿವಸ ನಾವು ಯಾಕೆ ಯಕ್ಷಗಾನ ಸಂಘಟಿಸಬಾರದು ಎಂದು ಬಳಗದಲ್ಲಿ ಎತ್ತಿದ ಪ್ರಶ್ನೆ ಯಕ್ಷ ವೈಭವನ್ನು ಸಂಘಟಿಸುವುದಕ್ಕೆ ನಾಂದಿಯಾಯಿತು. ಬಳಗದ ಸರ್ವ ಸದಸ್ಯರ ಪ್ರೋತ್ಸಾಹ ಹಿತೈಷಿ ಕಲಾಪೋಷಕರ ಕೃಪೆ,ಕಲಾವಿದರ ಸಹಕಾರದೊಂದಿಗೆ 2016 ರ ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ಯಶಸ್ವಿ ಯಕ್ಷಗಾನ ಸಂಘಟಿಸುವಂತೆ ಮಾಡಿತು. ಈ ಸಂದರ್ಭ ಹಿರಿಯ ಕಲಾವಿದ ಸಂಪಾಜೆ ಶೀನಪ್ಪ ರೈ ಅವರನ್ನು ಭ್ರಾಮರೀ ಯಕ್ಷಮಣಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಈ ವರ್ಷದ ‘ಭ್ರಾಮರಿ ಯಕ್ಷವೈಭವ‘ ಕಾರ್ಯಕ್ರಮ ಆ.1ರಂದು ಮಂಗಳೂರಿನ ಪುರಭವನದಲ್ಲಿ ಸಂಜೆ 7ರಿಂದ ಮರುದಿನ ಮುಂಜಾನೆಯವರೆಗೆ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರು ಹಾಗೂ ಕಲಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ. ಹಿರಿಯ ಕಲಾವಿದ ಕೆ.ಎಚ್ .ದಾಸಪ್ಪ ರೈ ಅವರಿಗೆ ‘ಭ್ರಾಮರೀ ಯಕ್ಷಮಣಿ‘ ಪ್ರಶಸ್ತಿ, ನೇಪಥ್ಯಕಲಾವಿದ ಮೋನಪ್ಪ ಗೌಡ ಹಾಗೂ ಮುಡಿಪು ಕುರ್ನಾಡಿನ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿಗೆ ‘ಭ್ರಾಮರೀ ಯಕ್ಷಸೇವಾ ಪುರಸ್ಕಾರ‘ ನೀಡಿ ಗೌರವಿಸಲಾಗುವುದು. ಸಭಾಕಾರ್ಯಕ್ರಮದ ಬಳಿಕ ತೆಂಕುತ್ತಿಟ್ಟಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಅಂಭಾಶಪಥ‘,‘ ಲಕ್ಷ್ಮೀ ಸ್ವಯಂವರ‘,‘ತಾಮ್ರದ್ವಜ ಕಾಳಗ‘ ಎಂಬ ಪೌರಾಣಿಕ ಪ್ರಸಂಗ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು ಟ್ರಸ್ಟ್ನ ಪತ್ರಿಕಾ ಪ್ರಕಟಣೆ ತಿಳಿಸಿದೆ.