ಜನವಸತಿ ಪ್ರದೇಶದಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳರು

  • ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ಗುರುವಾರ ಸಂಜೆ ನಡೆದ ಘಟನೆ
  • ಬೈಕಿನಲ್ಲಿ ಬಂದ ಇಬ್ಬರಿಂದ ದುಷ್ಕೃತ್ಯ, ಚಿನ್ನ ಸೆಳೆದು ಪರಾರಿಯಾದ ಆರೋಪಿಗಳು    
  • ಬಡಾವಣೆಯಲ್ಲಿ ನಡೆದ ಕೃತ್ಯಕ್ಕೆ ಬೆಚ್ಚಿಬಿದ್ದ ಸಾರ್ವಜನಿಕರು,

 

bantwalnews.com ವರದಿ

ಬಿ.ಸಿ.ರೋಡಿನ ಜನವಸತಿ ಬಡಾವಣೆಯಾಗಿರುವ ಹಾಗೂ ಜನಸಂಚಾರ ಇರುವ ಕೈಕುಂಜೆ ಪೂರ್ವ ಬಡಾವಣೆಯಲ್ಲಿ ಹಾಡುಹಗಲೇ ಕಳ್ಳತನ ನಡೆದಿದೆ. ಸಂಜೆ 6 ಗಂಟೆ ವೇಳೆಗೆ ಕೃತ್ಯ ನಡೆದಿದೆ ಎಂದು bantwalnews.com ಗೆ ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು

ಸಂಜೆ ವೇಳೆಗೆ ಕಚೇರಿ ಕರ್ತವ್ಯ ಮುಗಿಸಿ ಕೈಕುಂಜೆಯಲ್ಲಿರುವ ತನ್ನ ಮನೆಗೆ ನಡೆದುಕೊಂಡು ಬರುತ್ತಿದ್ದ ಬಿ.ಎಸ್.ಎನ್.ಎಲ್. ಉದ್ಯೋಗಿ ಕಮಲಾಕ್ಷಿ ಮಯ್ಯ ಅವರು ಬಿ.ಸಿ.ರೋಡಿನ ಕೈಕುಂಜೆ ಪೂರ್ವ ಬಡಾವಣೆಯ ಚಿತ್ರಾ ಎಂಬ ಮನೆಯ ಎದುರು ಬಂದ ಸಂದರ್ಭ, ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ದಿಢೀರನೆ ಬಂದು ಕುತ್ತಿಗೆಯಲ್ಲಿದ್ದ 7 ಪವನ್ ಬಂಗಾರದ ಮಂಗಳಸೂತ್ರವನ್ನು ಸೆಳೆದೊಯ್ದಿದ್ದಾರೆ. ಕೂಡಲೇ ಕಮಲಾಕ್ಷಿ ಅವರು ಅವರನ್ನು ಸ್ವಲ್ಪ ದೂರ ಹಿಂಬಾಲಿಸಲು ಯತ್ನಿಸಿದರಾದರೂ ಅಪರಿಚಿತರು ಪರಾರಿಯಾಗಿದ್ದಾರೆ. ಪರಾರಿಯಾಗುವ ವೇಳೆ ಕೈಕುಂಜ ಜಂಕ್ಷನ್ ನಲ್ಲಿ ಮತ್ತೋರ್ವ ಬೈಕಿನಲ್ಲಿ ಕುಳಿತುಕೊಂಡಿದ್ದಾನೆ. ಆರೋಪಿಗಳಲ್ಲಿ ಓರ್ವ ಹೆಲ್ಮೆಟ್ ಧರಿಸಿದ್ದ ಎಂದು bantwalnews.com ಗೆ ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣದ ಮೌಲ್ಯ ಸುಮಾರು 1 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದ್ದು, ಜನವಸತಿ ಇರುವ ಬಡಾವಣೆಯಲ್ಲಿ ಹಾಡುಹಗಲೇ ಈ ಕೃತ್ಯ ನಡೆದಿರುವುದು ನಾಗರಿಕರನ್ನು ಬೆಚ್ಚಿ ಬೀಳಿಸಿದೆ. ದುಷ್ಕರ್ಮಿಗಳು ಬೈಕಿನಲ್ಲಿ ಬೆಳಗ್ಗಿನಿಂದಲೇ ಸುತ್ತಾಡುತ್ತಿದ್ದರು ಎಂದು ಹೇಳಲಾಗಿದ್ದು, ಈ ಪರಿಸರದಲ್ಲಿ ಅಪರಿಚಿತರ ಸಂಚಾರ ನಿತ್ಯವೂ ಇರುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ. ಆರೋಪಿಗಳು ಕೈಕುಂಜ ಜಂಕ್ಷನ್ ನಿಂದ ಬಿ.ಇ.ಓ ಕಚೇರಿ ಸಮೀಪದ ಮಾರ್ಗದಲ್ಲಿ ರಕ್ತೇಶ್ವರಿ ಕಡೆಗೆ ಹೋಗುವ ದಾರಿಯಲ್ಲಿ ಪರಾರಿಯಾಗಿದ್ದಾರೆ. ಕೂಡಲೇ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರತಿ ದಿನವೂ ಕಮಲಾಕ್ಷಿ ಅವರು ನಡೆದುಕೊಂಡೇ ಬರುತ್ತಿದ್ದು, ಮೂವರು ಆರೋಪಿಗಳಲ್ಲಿ ಓರ್ವ ಕೈಕುಂಜೆ ಜಂಕ್ಷನ್ ನಿಂದ ಇಬ್ಬರು ಆರೋಪಿಗಳಿಗೆ ಬರುತ್ತಿರುವ ಬಗ್ಗೆ ಸಂದೇಶ ನೀಡಿರುವ ಸಾಧ್ಯತೆ ಇದೆ ಎಂದು bantwalnews.com ಗೆ ಸ್ಥಳೀಯರು ತಿಳಿಸಿದ್ದಾರೆ.

ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ .. ನಂದಕುಮಾರ್, ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ತನಿಖೆ ನಡೆಸಿದರು

ಜಾಹೀರಾತು

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ಜನವಸತಿ ಪ್ರದೇಶದಲ್ಲೇ ಚಿನ್ನಾಭರಣ ಎಗರಿಸಿದ ಕಳ್ಳರು"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*