ಸಜಿಪಮೂಡ ಗ್ರಾಮಸಭೆಯಲ್ಲಿ ತಾಪಂ ಸದಸ್ಯರಾಡಿದ ಮಾತಿಗೆ ಕ್ಷಮೆ ಕೋರಲು ಒತ್ತಾಯಿಸಿ, ಬಿಜೆಪಿ ನೇತೃತ್ವದಲ್ಲಿ ಗ್ರಾಮಸ್ಥರು ಗ್ರಾಪಂ ಕಚೇರಿಯೊಳಗೆ ಪ್ರತಿಭಟನೆ ನಡೆಸಿದರು.
ಮಂಗಳವಾರ ಗ್ರಾಮಸಭೆ ಗಣಪತಿ ಭಟ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ವಿಷಯವೊಂದಕ್ಕೆ ಸಂಬಂಧಿಸಿ ಚರ್ಚೆ ನಡೆದಾಗ ತಾಪಂ ಸದಸ್ಯ ಸಂಜೀವ ಪೂಜಾರಿ ತನ್ನ ಕುರಿತು ಆಡಿತ ಮಾತಿಗೆ ಕ್ಷಮೆ ಕೋರಬೇಕು ಎಂದು ಅಯ್ಯಪ್ಪ ವ್ರತಧಾರಿಯೂ ಆಗಿರುವ ಗ್ರಾಮಸ್ಥ ಸತೀಶ್ ಪೂಜಾರಿ ಒತ್ತಾಯಿಸಿದರು. ಅವರನ್ನು ಬೆಂಬಲಿಸಿ, ಗ್ರಾಮಸ್ಥರಿಂದ ಸ್ಥಳದಲ್ಲೇ ಧರಣಿ ನಡೆಯಿತು. ಅವರ ಬೆಂಬಲಕ್ಕೆ ಆಗಮಿಸಿದ ಮಾಜಿ ತಾ.ಪಂ. ಅಧ್ಯಕ್ಷ ಯಶವಂತ ಡಿ, ಯುವಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಬಿಜೆಪಿ ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ ಪ್ರತಿಭಟನೆಗೆ ಸಾಥ್ ನೀಡಿದರು. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಈ ಕುರಿತು ಸತೀಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.