ಬಂಟ್ವಾಳ: ಬಿ.ಸಿ.ರೋಡಿನ ಚತುಷ್ಪಥ ಮೇಲ್ಸೆತುವೆ ಮೇಲಿಂದ ಬೈಕ್ ಉರುಳಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಬಿ.ಸಿ.ರೋಡ್ ಫ್ಲೈಓವರ್ ನಲ್ಲಿ ಬೈಕ್ ನಲ್ಲಿ ಸಾಗುತ್ತಿದ್ದ ಪಾಣೆಮಂಗಳೂರು ಸಮೀಪ ಬೋಳಂಗಡಿ ನಿವಾಸಿ ವರದೇಶ್ (35) ನಿಯಂತ್ರಣ ತಪ್ಪಿ ಕೆಳಕ್ಕುರುಳಿ ತೀವ್ರ ಗಾಯಗೊಂಡಿದ್ದರು. ಕೂಡಲೇ ಅಲ್ಲಿದ್ದ ಜನರು ಒಟ್ಟಾಗಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದರು. ಆದರೆ ಬೆಳಗಿನ ಜಾವ ವರದೇಶ್ ಅಸು ನೀಗಿದರು ಎಂದು ಬಂಟ್ವಾಳ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ವರದೇಶ್ ವೃತ್ತಿಯಲ್ಲಿ ಇಲೆಕ್ಟ್ರೀಶಿಯನ್ ಆಗಿದ್ದು, ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ತಂದೆ ಮಾರಪ್ಪ ಪೂಜಾರಿ ನಿಧನದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಊರಿಗೆ ಬಂದಿದ್ದರು. ಮನೆಗೆ ಆಧಾರಸ್ತಂಭವಾಗಿದ್ದ ಇವರ ಸಾವಿನಿಂದ ಇಡೀ ಕುಟುಂಬವೇ ಶೋಕತಪ್ತವಾಗಿದೆ.
ಬಂಟ್ವಾಳ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಸಾಗಿದೆ.