ನಾರಾವಿ ಸಮೀಪದ ನೂರಾಳ್ ಬೆಟ್ಟಿನ ಯಕ್ಷತೀರ್ಥ ಕಲಾಸೇವೆ ಸಂಘವು 6 ವರ್ಷಗಳಿಂದ ಪ್ರತೀ ವರ್ಷವೂ ಯಕ್ಷಗಾನ ಸಂಘಟಕರನ್ನು ಗುರುತಿಸಿ , ಯಕ್ಷತೀರ್ಥ ಸಂಘಟನಾ ಪ್ರಶಸ್ತಿ , ಚಿನ್ನದ ನಾಣ್ಯದೊಂದಿಗೆ ಅದ್ದೂರಿ ಸಂಮಾನ ಮಾಡುತ್ತಿದ್ದು, ಈ ವರ್ಷದ , 2026 ನೇ ಸಾಲಿನ 7 ನೇ ಯಕ್ಷತೀರ್ಥ ಸಂಘಟನಾ ಪ್ರಶಸ್ತಿ , ಪೊಳಲಿಯ ಯಕ್ಷಗಾನ ಸಂಘಟಕ ಜನಾರ್ದನ ಅಮ್ಮುಂಜೆಯವರಿಗೆ ಘೋಷಣೆಯಾಗಿದೆ. ಇಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
31.12.1968 ರಲ್ಲಿ ಪೊಳಲಿ ಸಮೀಪದ ಅಮ್ಮುಂಜೆ ಎಂಬಲ್ಲಿ ವೆಂಕಪ್ಪ ಬೆಳ್ಚಡ – ಸುಶೀಲಾ ದಂಪತಿಗಳ ಸುಪತ್ರರಾಗಿ ಜನಿಸಿದ ಜನಾರ್ದನರು ಬಾಲ್ಯದಲ್ಲೇ ಯಕ್ಷಗಾನದ ಒಲವು ಹೊಂದಿದ್ದರು . ತಮ್ಮ ಪಿ.ಯು.ಸಿ. ವಿದ್ಯಾಭ್ಯಾಸ ಮುಗಿಸಿ ಬೆಂಜನಪದವಿನ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೂಪರ್ ವೈಸರ್ ಆಗಿ ಉದ್ಯೋಗಕ್ಕೆ ಸೇರಿ ಪ್ರಸ್ತುತ 34 ವರ್ಷಗಳಿಂದಲೂ ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ . ಆದರೂ , ಯಕ್ಷಗಾನದ ಸಂಘಟನೆ , ಸಂಯೋಜನೆಯಲ್ಲಿ ತೊಡಗಿಸಿಕೊಂಡು ಯಕ್ಷಗಾನದ ಸೇವೆಯನ್ನು ಮಾಡುತ್ತಿದ್ದಾರೆ . ಇಂದಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿರುವ ತನ್ನ ಕಿರಿಯ ಸಹೋದರರಾದ ಅಮ್ಮುಂಜೆ ಮೋಹನರನ್ನು ಯಕ್ಷಗಾನ ಕಲಾವಿದರನ್ನಾಗಿ ರೂಪಿಸುವಲ್ಲಿ ಜನಾರ್ದನರ ಪಾತ್ರ ದೊಡ್ಡದು . ಅಮ್ಮುಂಜೆ ಮೋಹನರು ಇಂದು ಕಟೀಲು ಮೇಳದಲ್ಲಿ ಪ್ರಧಾನ ಕಲಾವಿದರಾಗಿದ್ದಾರೆ . ಜನಾರ್ದನರು ಉತ್ತಮ ನಾಟಕ ಕಲಾವಿದರು , ಭಜನಾಕಾರರು , ಭಾಷಣಕಾರರೂ , ನಿರೂಪಕರೂ ಹೌದು . ಪೊಳಲಿ ಯಕ್ಷೋತ್ಸವ , ಪೊಳಲಿ ಯಕ್ಷ ಕಲಾ ಸಮಿತಿಗಳ ಮುಖ್ಯ ರೂವಾರಿಯಾಗಿದ್ದಾರೆ .
ಇಡೀ ರಾತ್ರಿ ತಾಳಮದ್ದಳೆ ಕೂಟವನ್ನು 25 ವರ್ಷಗಳ ಕಾಲ ನಡೆಸಿದ ಪ್ರತಿಷ್ಠಿತ ” ಯಕ್ಷ ಮಿತ್ರರು ” ಕೈಕಂಬದ ಸಂಯೋಜಕರಾಗಿ ಹಲವಾರು ಕಲಾವಿದರನ್ನು ಯಕ್ಷರಂಗಕ್ಕೆ ಪರಿಚಯ ಮಾಡಿಸಿದ್ದಾರೆ .
(more…)