ವಾಮದಪದವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆತ್ಮಹತ್ಯೆ ತಡೆ ಘಟಕ, ಆಪ್ತ- ಸಮಾಲೋಚನಾ ಘಟಕ ಹಾಗೂ ಸಮಾಜಕಾರ್ಯ ವಿಭಾಗದ ವತಿಯಿಂದ ಐಕ್ಯೂಎಸಿ ಸಹಯೋಗದಲ್ಲಿ ಹೌ ಆರ್ ಯೂ ಎಂಬ ಧ್ಯೇಯವಾಕ್ಯದಡಿ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಯಿತು
ಮಂಗಳೂರಿನ ‘ಸಂವಾದ’ ಯುವಜನ ಸಂಪನ್ಮೂಲ ಕೇಂದ್ರದ ಸಹಭಾಗಿತ್ವದೊಂದಿಗೆ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಯಿತು. ಯುವಜನರಲ್ಲಿ ಮಾನಸಿಕ ಕ್ಷೇಮವನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತು. ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ ಬಿಎಸ್ಡಬ್ಲ್ಯೂ ವಿದ್ಯಾರ್ಥಿನಿ ನಿತೀಕ್ಷಾ ನಿರ್ವಹಿಸಿ, ತೃತೀಯ ಬಿಎಸ್ಡಬ್ಲ್ಯೂ ವಿದ್ಯಾರ್ಥಿನಿ ನಮಿತಾ ಸ್ವಾಗತಿಸಿದರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ ಗೌಡ ಎಂ. ಅವರು ಪ್ರಾಸ್ತಾವಿಕ ನುಡಿಗಳಲ್ಲಿ ಕಾಲೇಜಿನ ಆಪ್ತ ಸಮಾಲೋಚನಾ ಹಾಗೂ ಆತ್ಮಹತ್ಯೆ ತಡೆ ಘಟಕಗಳ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ಉದ್ಘಾಟನಾ ಭಾಷಣವನ್ನು ಮಂಜುಳಾ ಸುನಿಲ್ ನೆರವೇರಿಸಿದರು. ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ, ಬೆಂಗಳೂರು ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಆರತಿ ರಾಜೀವ್ ಅವರು ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವ ವಿಧಾನಗಳ ಕುರಿತು ಚಟುವಟಿಕೆಗಳ ಮೂಲಕ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಡಾ. ಮಹೇಶ್ ಕೆ.ಬಿ. ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡುವುದನ್ನು ಸಹಜವಾಗಿಸಿಕೊಳ್ಳಬೇಕು ಎಂದರು.
ಐಕ್ಯೂಎಸಿ ಸಂಯೋಜಕ ಡಾ. ವಿಶಾಲ್ ಪಿಂಟೋ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ಕೊಕಿಲಾ ಎಚ್.ಎಸ್. ಹಾಗೂ ಆತ್ಮಹತ್ಯೆ ತಡೆ ಘಟಕದ ಸಂಯೋಜಕ ಡಾ. ಮಧು ಎ.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಾನ್ಯತಾ ವಂದಿಸಿದರು.