ಬಂಟ್ವಾಳ: ಬಂಟ್ವಾಳದಿಂದ ಕೊಟ್ರಮಣಗಂಡಿಗೆ ತೆರಳುವ ಪೇಟೆಯಲ್ಲಿ ಸಾಗುವ ರಸ್ತೆಯಲ್ಲಿ ಕಳೆದ ಕೆಲ ದಿನಗಳಿಂದ ದೊಡ್ಡದಾದ ಹೊಂಡ ಕಂಡುಬಂದಿದೆ. ಈ ರಸ್ತೆಯಲ್ಲಿ ಈ ಭಾಗದಲ್ಲಿ ಕಳೆದ ವರ್ಷವೂ ಹೊಂಡ ಕಂಡುಬಂದಿತ್ತು. ಬಳಿಕ ಇದನ್ನು ಮುಚ್ಚಲಾಗಿತ್ತು. ಈಗ ಮತ್ತೆ ಈ ಪರಿಸ್ಥಿತಿ ತಲೆದೋರಿದೆ.
ಬಂಟ್ವಾಳ ಪೇಟೆಯ ಹೃದಯಭಾಗದಿಂದ ಕೊಟ್ರಮಣಗಂಡಿ ರಸ್ತೆ ಹಾಗೆಯೇ ಮುಂದೆ ಸಾಗಿ ಹೆದ್ದಾರಿಯನ್ನು ಸಂಧಿಸುತ್ತದೆ. ಇದರಿಂದ ಪಾದಚಾರಿಗಳಿಗೆ ತೆರಳಲು ಸಂಕಷ್ಟವಾಗುತ್ತಿದ್ದು, ಕೆಲವರು ಅಲ್ಲಿ ಆಯತಪ್ಪಿ ಬಿದ್ದ ಘಟನೆಯೂ ನಡೆದಿದೆ ಎಂದು ಪತ್ರಿಕಾ ವಿತರಕರಾದ ಭಾಮಿ ಚಿದಾನಂದ ಶೆಣೈ ಮಾಹಿತಿ ನೀಡಿದ್ದಾರೆ. ಈ ಕುರಿತು ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ದ್ವಿಚಕ್ರ ವಾಹನ ಸವಾರರಿಗೂ ಇಲ್ಲಿ ಕಷ್ಟವಾಗುತ್ತಿದೆ. ವಾಹನ ಚಕ್ರಗಳು ಹೊಂಡದಲ್ಲಿ ಬಿದ್ದರೆ, ರಿಪೇರಿಗೇ ಹೋಗಬೇಕು ಎನ್ನುವಷ್ಟು ಸಮಸ್ಯೆಯಾಗುತ್ತಿದೆ. ರಭಸದಿಂದ ವಾಹನಗಳ ಚಕ್ರ ಬಿದ್ದರೆ, ಮಳೆ ನೀರು ನಿಂತಿದ್ದರೆ, ಸುತ್ತಮುತ್ತ ಜನರಿಗೆ ಕೆಸರುನೀರು ರಾಚುತ್ತದೆ. ಹೀಗಾಗಿ ಇದು ಎಲ್ಲರಿಗೂ ಸಮಸ್ಯೆ ಉಂಟುಮಾಡಿದೆ. ಇದಲ್ಲದೆ ಬಿ.ಸಿ.ರೋಡ್ ಸರ್ಕಲ್, ಬಳಿ, ಬಿ.ಸಿ.ರೊಡ್ ಪೇಟೆಯ ಫ್ಲೈಓವರ್ ನಿಂದ ನೀರು ಬೀಳುವ ಜಾಗ ಸಹಿತ ಹಲವೆಡೆ ಹೊಂಡಗಳು ಕಾಣಿಸಿಕೊಂಡಿವೆ.