ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘ ಮಂಗಳೂರು ಬಂಟ್ವಾಳ ವಲಯದ ಕುಟುಂಬ ಮಿಲನ ಕಾರ್ಯಕ್ರಮ ಬಂಟ್ವಾಳದ ಭಂಡಾರಿ ಭವನದಲ್ಲಿ ನಡೆಯಿತು.
ಜೆಸಿಐ ವಲಯ ತರಬೇತುದಾರರು, ವಕೀಲರಾದ ಆಶಾಮಣಿ ಡಿ. ರೈ ಕುಟುಂಬ ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೈಹಿಕವಾಗಿ ಕಷ್ಟ ಬಂದಾಗ ಮಾನಸಿಕವಾಗಿ ನೆಮ್ಮದಿಯಿಂದ ಇರಲು ಸಾಧ್ಯವಿದೆ. ಗ್ಯಾರೇಜು ಮಾಲಕರ ಸಂಘದ ಸದಸ್ಯರು ತಮ್ಮ ಸಂಘಟನೆಯನ್ನು ಬಲಪಡಿಸಿಕೊಂಡು ಇಂತಹ ಕಾರ್ಯಕ್ರಮದ ಮೂಲಕ ಎಲ್ಲರಿಗೂ ವೇದಿಕೆಯ ಅವಕಾಶ ಹಾಗೂ ತಮ್ಮ ಪ್ರತಿಭೆ ಅನಾವರಣ ಮಾಡಲು ಅವಕಾಶ ನೀಡುತ್ತಿರುವುದು ಅಭಿನಂದನೀಯ ಎಂದರು.
ಉದ್ಯಮಿ ಅಲ್ಸಾನ್ ಮಿನೇಜಸ್ ಮಾತನಾಡಿ ಕುಟುಂಬ ಮಿಲನ ಕಾರ್ಯಕ್ರಮದ ಮೂಲಕ ಸದಸ್ಯರು ಹಾಗೂ ಅವರ ಕುಟುಂಬದ ನಡುವೆ ಪ್ರೀತಿ, ವಿಶ್ವಾಸ ಹೆಚ್ಚಾಗಲು ಸಾಧ್ಯವಿದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ದಿನಕರ ಕುಲಾಲ್ ಮಾತನಾಡಿ ಕುಟುಂಬ ಸದಸ್ಯರ ಪ್ರತಿಭೆಗಳನ್ನು ಪ್ರದರ್ಶನ ಮಾಡಲು ಅವಕಾಶ ಕಲ್ಪಿಸುವ ಮಾದರಿ ಕಾರ್ಯವನ್ನು ಬಂಟ್ವಾಳ ವಲಯ ಮಾಡಿದೆ ಎಂದರು. ಸಂಘದ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಎನ್ ಸಿಸಿ ಅಂಡರ್ ಸೀನಿಯರ್ ಆಫೀಸರ್ ಆಗಿ ಆಯ್ಕೆಯಾದ ಸಿಂಚನ್ ಯು.ಶೆಟ್ಟಿ ಅವರನ್ನು ಗೌರವಿಸಲಾಯಿತು. ಗೋಡ್ವಿನ್ ಪಿಂಟೋ ಅವರ ಮಕ್ಕಳಿಗೆ ಸಂಘದ ವತಿಯಿಂದ ನಿರಖು ಠೇವಣಿ ಪತ್ರ ಹಸ್ತಾಂತರಿಸಲಾಯಿತು. ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜನಾರ್ದನ ಅತ್ತಾವರ, ಸಂಘದ ಮಾಜಿ ಚೆಯರ್ ಮನ್ ಪುಂಡಲಿಕ ಸುವರ್ಣ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ರಾಜ್ ಗೋಪಾಲ್ ಶುಭ ಹಾರೈಸಿದರು.ಉದ್ಯಮಿ ದಿನೇಶ್ ಕಾಯರ್ ಮಾರ್, ಕೋಶಾಧಿಕಾರಿ ರಮೇಶ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಸುಧೀರ್ ಪೂಜಾರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಉಮೇಶ್ ಶೆಟ್ಟಿ ವಂದಿಸಿದರು. ಗೌರವ ಸಲಹೆಗಾರ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ಹಂಝ ಬಸ್ತಿಕೋಡಿ, ಪ್ರಮುಖರಾದ ವಿಶ್ವನಾಥ ಬಿ., ರಾಜಾ ಚೆಂಡ್ತಿಮಾರ್, ರೋನಿ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಲಕ್ಕಿ ಕೂಪನ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುಟುಂಬ ಮಿಲನದ ಅಂಗವಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು, ವಿನಾಯಕ ಬಿ.ಸಿ.ರೋಡು ಮನೋರಂಜನಾ ಕಾರ್ಯಕ್ರಮ ನಿರೂಪಿಸಿದರು.