ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿ. ಇದರ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಸೋಮವಾರ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ ಅಧ್ಯಕ್ಷತೆಯಲ್ಲಿ ನಡೆಯಿತು.
ಹಿರಿಯ ಸಹಕಾರಿಗಳಾದ ಜಯರಾಮ ಶೆಟ್ಟಿ ಹಾಗೂ ಬಿ.ಟಿ. ನಾರಾಯಣ ಭಟ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ ಅವರು ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು.
2025–26ನೇ ಸಾಲಿನ ಆಡಳಿತ ವರದಿ, ವಾರ್ಷಿಕ ಲೆಕ್ಕಪತ್ರ ಹಾಗೂ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಅಂಗೀಕರಿಸಲಾಯಿತು.
ಶೇ.15 ಲಾಭಾಂಶ ಘೋಷಣೆ:
ಸಂಘದ ಆರ್ಥಿಕ ಸಾಧನೆ ಕುರಿತು ಮಾಹಿತಿ ನೀಡಿದ ಅಧ್ಯಕ್ಷ ಕೆ. ರವೀಂದ್ರ ಕಂಬಳಿ, ಸಂಘವು ಪ್ರಸಕ್ತ ಸಾಲಿನಲ್ಲಿ 24 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.15ರಷ್ಟು ಲಾಭಾಂಶ (ಡಿವಿಡೆಂಡ್) ಘೋಷಿಸಲಾಗಿದೆ ಎಂದು ತಿಳಿಸಿದರು. ಸಂಘದಲ್ಲಿ 29 ಎ ತರಗತಿ ಹಾಗೂ 155 ಬಿ ತರಗತಿ ಸದಸ್ಯರಿದ್ದು, ರೂ.1191 ಲಕ್ಷ ಷೇರು ಬಂಡವಾಳ, 1128 ದುಡಿಯುವ ಬಂಡವಾಳ, 332 ಲಕ್ಷ ರೂ. ಸಂಘದ ವ್ಯವಹಾರ ಹಾಗೂ ರೂ.1696 ಲಕ್ಷ ಸಂಘದಲ್ಲಿ ಠೇವಣಿ ನಿಧಿಯನ್ನು ಹೊಂದಿದ್ದು, 643 ಲಕ್ಷ ರೂ.ಹೊರಬಾಕಿ ಸಾಲ ಇದೆ ಎಂದು ಅವರು ವಿವರಿಸಿದರು.ಸಹಕಾರ ಇಲಾಖೆಯ ಲೆಕ್ಕಪರಿಶೋಧನೆಯಲ್ಲಿ ಸಂಘವು ‘ಎ’ ವರ್ಗೀಕರಣ ಪಡೆದಿರುವುದು ಸಂಘದ ಸುಸಂಘಟಿತ ಆಡಳಿತ, ಆರ್ಥಿಕ ಶಿಸ್ತು ಹಾಗೂ ಸದಸ್ಯರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ರವೀಂದ್ರ ಕಂಬಳಿ ಮಾತನಾಡಿ ಕಷ್ಟದ ಪರಿಸ್ಥಿತಿಯಲ್ಲಿಯೂ ಸಂಘವು ನಿರಂತರ ಪ್ರಗತಿ ಸಾಧಿಸಿ ರೈತರು ಹಾಗೂ ಬಡವರ ನೆರವಿಗೆ ಧಾವಿಸಿದೆ. ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ಸದಸ್ಯರು, ನಿರ್ದೇಶಕರು ಹಾಗೂ ಸಿಬ್ಬಂದಿಯ ಸಹಕಾರ ಅವಿಸ್ಮರಣೀಯ ಎಂದರು. ಜಿಲ್ಲಾ ಮಟ್ಟದಲ್ಲಿ ಸಂಘವು ಉತ್ತಮ ಸಾಧನೆ ದಾಖಲಿಸಿರುವುದು ಎಲ್ಲರ ಒಗ್ಗಟ್ಟಿನ ಫಲವಾಗಿದೆ. ಸಹಕಾರ ಚಟುವಟಿಕೆಗಳ ಜತೆಗೆ ವಿವಿಧ ಸಾಮಾಜಿಕ ಕಾರ್ಯಕ್ರಮಗಳು, ಸಾಧಕರಿಗೆ ಸಮ್ಮಾನ, ವಿದ್ಯಾರ್ಥಿ ವೇತನ ವಿತರಣೆ ಸೇರಿದಂತೆ ಹಲವಾರು ಜನಪರ ಕಾರ್ಯಗಳನ್ನು ಸಂಘವು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಮೋಹನ ಆಚಾರ್ಯ, ನಿರ್ದೇಶಕರುಗಳಾದ ಜ್ಞಾನೇಶ್ವರ ಪ್ರಭು, ವೆಂಕಟೇಶ್ ನಾವುಡ, ಜಯರಾಮ ಕೆ., ಡಿ. ತನಿಯಪ್ಪ ಗೌಡ, ದಿನೇಶ್ ಪೂಜಾರಿ, ನಾರಾಯಣ ಪೂಜಾರಿ, ಉದಯಕುಮಾರ್ ಎ., ಸಂತೋಷ್ ಕುಮಾರ್ ಶೆಟ್ಟಿ, ಶೀಲಾ, ಸವಿತಾ ಎಫ್. ಡಿ.ಸೋಜ, ಕೃಷ್ಣಮೂರ್ತಿ ಬಿ. ಕೆ., ರಾಮ ನಾಯ್ಕ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಯು.ಧರ್ಮಪಾಲ ಭಂಡಾರಿ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕ ಪ್ರಮೋದ್ ಕುಮಾರ್ ರೈ ವಂದಿಸಿದರು.