ಬಂಟ್ವಾಳ

ಆರ್ಯಾಪು ಗ್ರಾ.ಪಂ.ನ “ಗೌರವ ಗ್ರಾಮಸಭಾ ಪುರಸ್ಕಾರ” ಕ್ಕೆ ಮೌನೇಶ್ ವಿಶ್ವಕರ್ಮ ಆಯ್ಕೆ

ಪತ್ರಿಕಾರಂಗ, ಮಕ್ಕಳ ರಂಗಭೂಮಿ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಹಿರಿಯ ಪತ್ರಕರ್ತ, ರಂಗಕರ್ಮಿ ರೊ. ಮೌನೇಶ್ ವಿಶ್ವಕರ್ಮ ಅವರನ್ನು ಆರ್ಯಾಪು ಗ್ರಾಮ ಪಂಚಾಯತ್ ವತಿಯಿಂದ ಪ್ರದಾನ ಮಾಡಲಾಗುವ “ಗೌರವ ಗ್ರಾಮ ಸಭಾ ಪುರಸ್ಕಾರ”ಕ್ಕೆ ಆಯ್ಕೆ ಮಾಡಲಾಗಿದೆ.

VNR GOLD

2026–27ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯ ಅಂಗವಾಗಿ ಜುಲೈ 20ರಂದು (ಸೋಮವಾರ) ಬೆಳಿಗ್ಗೆ 11 ಗಂಟೆಗೆ ಆರ್ಯಾಪು ಗ್ರಾಮದ ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿರುವ ಗ್ರಾಮಸಭೆಯಲ್ಲಿ ಪುರಸ್ಕಾರ ಪ್ರದಾನ ನಡೆಯಲಿದೆ.

ಕಳೆದ 24 ವರ್ಷಗಳಿಂದ ಪತ್ರಿಕಾರಂಗ ಹಾಗೂ ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಮೌನೇಶ್ ವಿಶ್ವಕರ್ಮ ಅವರು 2012ರಿಂದ 2018ರವರೆಗೆ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಯುವ ಕಲಾವಿದರ ಸ್ಕಾಲರ್‌ಶಿಪ್ ಹಾಗೂ 2011ರಲ್ಲಿ ಯುನಿಸೆಫ್ ಮತ್ತು ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಮಾಧ್ಯಮ ಫೆಲೋಶಿಪ್‌ಗೆ ಆಯ್ಕೆಯಾಗಿದ್ದರು.

ಜಾಹೀರಾತು

ಪ್ರಸ್ತುತ ಕನ್ನಡಪ್ರಭ, ಸುದ್ದಿಬಿಡುಗಡೆ ಹಾಗೂ ದೈಜಿವರ್ಲ್ಡ್‌ನ ವರದಿಗಾರರಾಗಿರುವ ಅವರು, ‘ಮಕ್ಕಳ ಮಾತು’ ಕೃತಿಗೆ ಕರ್ನಾಟಕ ಪುಸ್ತಕ ಪ್ರಾಧಿಕಾರದ ಪುರಸ್ಕಾರ ಪಡೆದಿದ್ದಾರೆ. 20ಕ್ಕೂ ಅಧಿಕ ಮಕ್ಕಳ ಹಾಗೂ ವಿಜ್ಞಾನ ನಾಟಕಗಳನ್ನು ರಚಿಸಿರುವ ಅವರು, ಸಂಸಾರ ಜೋಡು ಮಾರ್ಗ ತಂಡದ ನಿರ್ದೇಶಕರಾಗಿ, ಸಾವಿರಕ್ಕೂ ಹೆಚ್ಚು ಬೀದಿನಾಟಕಗಳ ಪ್ರದರ್ಶನ, 25ಕ್ಕೂ ಅಧಿಕ ಜಾಗೃತಿ ಜಾಥೆಗಳ ಆಯೋಜನೆ ಹಾಗೂ ರಂಗನಾಟಕ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)ನಲ್ಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಸ್ವಸಹಾಯ ಗುಂಪುಗಳ ಸಬಲೀಕರಣ, ಪಂಚಾಯತ್ ರಾಜ್, ಶಿಕ್ಷಣ, ಮಕ್ಕಳ ಹಕ್ಕು ಸೇರಿದಂತೆ ವಿವಿಧ ವಿಷಯಗಳಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡುತ್ತಿದ್ದಾರೆ. ಬೆಂಗಳೂರಿನ ಐಎಫ್‌ಎ ಸಂಸ್ಥೆಯ ಕಲಿಕಲಿಸು ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಂದ ಬಹುಮುಖಿ ಕಲಾಪತ್ರಿಕೆ ಪ್ರಕಟಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆಯ ಬಿ.ವಿ. ಕಾರಂತ ಪುರಸ್ಕಾರ, ಕರ್ನಾಟಕ ಪತ್ರಕರ್ತರ ಸಂಘದ ಸಾಂಘಿಕ ಪ್ರಶಸ್ತಿ, ಸ್ವಸ್ತಿ ಸಿರಿ ಪ್ರಶಸ್ತಿ, ಚೆಲ್ಲಯ್ಯ ನಾಡಾರ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿರುವ ಅವರು, ಪ್ರಸ್ತುತ ರೋಟರಿ ಪುತ್ತೂರು ಎಲೈಟ್‌ನ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.