ಯಾವುದಾದರೂ ಖಾಲಿ ಜಾಗ ಕಂಡರೆ ಸಾಕು, ಪ್ಲಾಸ್ಟಿಕ್ ನಲ್ಲಿ ಸುತ್ತಿದ ಕಸಗಳನ್ನು ರಪ್ಪನೆ ಎಸೆಯುವ ಪ್ರವೃತ್ತಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಕೆಲವು ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಎಸೆಯುವ ಕಾಯಂ ಜಾಗಗಳಲ್ಲಿ ನಿಯಂತ್ರಣಕ್ಕೆಂದು ಸಿಸಿ ಕ್ಯಾಮರಾ ಹಾಕಿ ಎಚ್ಚರಿಕೆ, ಸೂಚನಾ ಫಲಕಗಳನ್ನು ಹಾಕಿದರೆ, ಹೊಸ ಜಾಗ ಹುಡುಕಿ, ಕಸ ಎಸೆಯುವಷ್ಟು ಚಾಣಾಕ್ಷ, ಬುದ್ಧಿವಂತ ಅನಾಗರೀಕರು ಇದ್ದಾರೆ. ಸಜೀಪಮುನ್ನೂರು ಗ್ರಾ.ಪಂ.ನ ಮಾರ್ನಬೈಲು ಬಳಿ ಸಿಸಿ ಟಿವಿ ಅಳವಡಿಸಿದ ಬಳಿಕ ಅಲ್ಲಿ ಕಸ ಬೀಳುವುದು ನಿಂತಿದೆ. ಆದರೆ ಮನೆಯಿಂದ ತಂದ ಕಸವನ್ನು ಜನರು ಮತ್ತೆ ಎಂದಿಗೂ ಮನೆಗೆ ವಾಪಸ್ಸು ಕೊಂಡುಹೋಗದೆ ಸಿಸಿ ಟಿವಿ ಇಲ್ಲದೆ ಇರುವ ಜಾಗಗಳಲ್ಲಿ ಎಸೆದು ಹೋಗುತ್ತಿದ್ದಾರೆ. ಈವರೆಗೆ ಮಾರ್ನಬೈಲಿನಲ್ಲಿ ಬೀಳುತ್ತಿದ್ದ ಕಸ ಈಗ ಮೆಲ್ಕಾರ್ ನಲ್ಲಿ ಬೀಳುತ್ತಿದೆ.
ಪುರಸಭೆ, ಗ್ರಾಮ ಪಂಚಾಯಿತಿಗಳಲ್ಲಿ ಪ್ರಸ್ತುತ ದಿನಗಳಲ್ಲಿ ವಾರಕ್ಕೆ ಮೂರು ಬಾರಿಯಾದರೂ ಕಸ ಕೊಂಡೊಯ್ಯುವ ವಾಹನಗಳು ಬಂದು ತೆಗೆದುಕೊಂಡು ಹೋಗುತ್ತವೆ. ಹಾಗೆ ಮಾಡದಿದ್ದರೆ, ದೂರು ಸಲ್ಲಿಸುವ ವ್ಯವಸ್ಥೆಗಳು ಇವೆ. ಆದರೆ ಅಷ್ಟೊಂದು ತಾಳ್ಮೆ ಇಲ್ಲದ ಸೋ ಕಾಲ್ಡ್ ನಾಗರಿಕರು, ನೇರವಾಗಿ ಖಾಲಿ ಜಾಗ ಎಲ್ಲಿದೆ ಎಂಬುದನ್ನು ಪತ್ತೆಹಚ್ಚಿ, ಅಲ್ಲಿ ಹೊಸ ಡಂಪಿಂಗ್ ಯಾರ್ಡ್ ಮಾಡಿಬಿಡುತ್ತಾರೆ.
ಎಲ್ಲೆಲ್ಲಿದೆ ಸಮಸ್ಯೆ:
ಬಿ.ಸಿ.ರೋಡ್ ನ ಕೈಕುಂಜೆ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ ಫಾರ್ಮ್ ಗೆ ಹೋಗುವ ಮೊದಲು ಈ ಹಿಂದೆ ಕಸ ಹಾಕುತ್ತಿದ್ದ ಜಾಗದಲ್ಲಿ ಮತ್ತೆ ಕಸ ಎಸೆಯುವ ಪ್ರವೃತ್ತಿ ಆರಂಭಗೊಂಡಿದೆ. ಬಿ.ಸಿ.ರೋಡ್ ಪೊಲೀಸ್ ಸ್ಟೇಶನ್ ಗೆ ಹೋಗುವ ದಾರಿಯ ಬಲಬದಿಯಲ್ಲಿರುವ ಹಳೆಯ ಕಟ್ಟಡದ ಸುತ್ತಮುತ್ತ, ಬಡ್ಡಕಟ್ಟೆ ಸ್ಮಶಾನದ ಬಳಿ, ಮೊಡಂಕಾಪು ಕಡೆಯಂದ ಕಾಮಾಜೆಗೆ ಬರುವ ದಾರಿ, ಕಂಚಿಕಾರಪೇಟೆ, ಹೆದ್ದಾರಿಯ ಇಕ್ಕೆಲಗಳಲ್ಲಿ ಮೆಲ್ಕಾರ್ ನಿಂದ ಪಾಣೆಮಂಗಳೂರುವರೆಗಿನ ಸರ್ವಿಸ್ ರಸ್ತೆಯ ಬದಿ, ಮಾರ್ನಬೈಲ್ ನಿಂದ ನಂದಾವರಕ್ಕೆ ಹೋಗುವ ದಾರಿಯಲ್ಲಿ ಕಸದ ರಾಶಿ ಇದೆ. ಇತ್ತೀಚೆಗೆ ಸಜೀಪಮುನ್ನೂರು ಗ್ರಾಮದ ಮಾರ್ನಬೈಲು, ದಾಸರಗುಡ್ಡೆಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಬಳಿ ಝೇಕಾಂರ ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರು ರಸ್ತೆಯ ಬದಿ ಸ್ವಚ್ಚತಾ ಕಾರ್ಯ ನಡೆಸಿದ್ದಾರೆ.ಅಸಹ್ಯಕರವಾದ ದುರ್ವಾಸನೆಯಲ್ಲಿ ಕಸ ಹೆಕ್ಕುವ ಪರಿಸ್ಥಿತಿಯನ್ನು ನಿರ್ಮಿಸಿರುವ ಅನಾಗರಿಕರ ವಿರುದ್ಧ ಅಕೋಶವನ್ನು ಹೊರಹಾಕಿದ್ದರು.
ಕಸ ಹೆಕ್ಕುವವರು ಇದ್ದಾರೆ ಎಂದು ಎಸೆಯಬೇಡಿ
ಸಾಕಷ್ಟು ಸ್ವಯಂಸೇವಾ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ತ್ಯಾಜ್ಯ ಎಸೆಯುವ ಕುರಿತು ದುಷ್ಪರಿಣಾಮಗಳ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಕೆಲವೊಮ್ಮೆ ಕಸ ಹೆಕ್ಕುವ ಮೂಲಕ ಶ್ರಮದಾನವನ್ನು ಮಾಡುತ್ತವೆ. ಆದರೆ ಹೇಗೂ ಇವರು ಕಸ ಹೆಕ್ಕುತ್ತಾರಲ್ವಾ ಎಂದು ಕಸ ಎಸೆಯುವ ವಿಕೃತ ಮನಸ್ಸಿನ ಮನುಷ್ಯರೂ ಇದ್ದಾರೆ. ಕೆಲ ಸ್ವಯಂಸೇವಾ ಸಂಸ್ಥೆಗಳು ಶ್ರಮದಾನ ಮಾಡಿ, ಸ್ವಚ್ಛತಾ ಕಾರ್ಯ ಮಾಡಿದ ಜಾಗದಲ್ಲೇ ಮುಂದಿನ ವಾರ ಕಸ ಬಿದ್ದದ್ದು ಇದಕ್ಕೆ ಉದಾಹರಣೆ
ಮೆಲ್ಕಾರ್ ಸರ್ವಿಸ್ ರಸ್ತೆ ಬದಿ ಇರುವ ತ್ಯಾಜ್ಯದ ಕೊಂಪೆ ದುರ್ವಾಸನೆ ಬೀರುತ್ತಿದೆ. ಮಳೆಗೆ ತ್ಯಾಜ್ಯವೆಲ್ಲ ರಾಡಿಯಾಗಿ ಕೊಚ್ಚೆಯಂತಾಗಿದೆ. ರಸ್ತೆಯಲ್ಲಿ ವಾಹನಗಳಲ್ಲಿ ಸಂಚರಿಸುವವರು ಕೆಟ್ಟ ವಾಸನೆಗೆ ವಾಕರಿಕೆ ಮಾಡಿಕೊಳ್ಳುವಂತಿದೆ. ರಸ್ತೆ ಬದಿಯಿದ್ದ ತ್ಯಾಜ್ಯ ದಿನದಿಂದ ದಿನಕ್ಕೆ ರಸ್ತೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಪಾದಚಾರಿಗಳಿಗೆ ಇಲ್ಲಿ ನಡೆದಾಡಲು ಸ್ಥಳವಕಾಶವೇ ಇಲ್ಲದಂತಾಗಿದೆ. ಜಾನುವಾರುಗಳು ಈ ಕೊಚ್ಚೆಯಲ್ಲಿ ಆಹಾರ ಹುಡುಕಾಡುವ ಭರದಲ್ಲಿ ಪ್ಲಾಸ್ಟಿಕ್ ಗಳನ್ನೇ ಹೊಟ್ಟೆಗೆ ಇಳಿಸಿಕೊಳ್ಳುತ್ತಿದೆ.