ಮನುಷ್ಯರಾಗಿ ಹುಟ್ಟಿದ ಮೇಲೆ ಭಗವಂತನ ಅನುಗ್ರಹ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕಗೊಳ್ಳುತ್ತದೆ. ವೇದಾಧ್ಯಯನದ ಮೂಲಕ ವಟುಗಳು ಉತ್ತಮ ಜೀವನ ನಡೆಸುವಂತಾಗಾಬೇಕು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ವೇ.ಮೂ.ಕೆ.ವಿ.ಶ್ರೀಧರ ಅಡಿಗ ಹೇಳಿದರು.
ಅವರು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ಗೋಕರ್ಣ ಅಶೋಕೆ ವಿಷ್ಣುಗುಪ್ತ ವಿಶ್ವವಿದ್ಯಾಪೀಠ, ಭಾರತೀ ಎಜುಕೇಶನ್ ಟ್ರಸ್ಟ್, ಶಂಕರಶ್ರೀ ವಸಂತ ವೇದಪಾಠಶಾಲೆ ಸಮಿತಿ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜರಗಿದ ಒಂದು ತಿಂಗಳ ವಸಂತ ವೇದಪಾಠಶಾಲೆ ಶಿಬಿರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶ್ರೀರಾಮನ ಆದರ್ಶ, ನಡೆ, ನುಡಿ ಅಳವಡಿಸಿಕೊಳ್ಳಬೇಕು. ಮಾನವನಾಗಿ ಸಂಸ್ಕಾರಯುತ ಜೀವನ ನಡೆಸಬೇಕು. ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಅವರು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಶ್ರೀಕೃಷ್ಣ ನೀರಮೂಲೆ ಅಧ್ಯಕ್ಷತೆ ವಹಿಸಿದ್ದರು.
ವಿದ್ವಾಂಸರಾದ ಡಾ.ವಿನಾಯಕ ಭಟ್ ಗಾಳಿಮನೆ ಮಾತನಾಡಿ, ಒಂದು ತಿಂಗಳಲ್ಲಿ ಕಲಿತ ವೇದಪಾಠವನ್ನು ಮನೆಯಲ್ಲಿ ನಿರಂತರವಾಗಿ ಪಠಿಸಬೇಕು. ಹೆತ್ತವರು ಈ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಮಂಗಳೂರು ಏನಪೋಯ ವೈದ್ಯಕೀಯ ವಿದ್ಯಾಲಯದ ಪ್ರಸೂತಿ ಮತ್ತು ಸ್ತ್ರೀ ರೋಗ ಚಿಕಿತ್ಸೆ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹನ ಭಟ್ ಪೆಲತ್ತಡ್ಕ, ಆಶಾಗೌರಿ ಕೆ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯಗುರು ವೇದಮೂರ್ತಿ ಅಮೈ ಶಿವಪ್ರಸಾದ ಭಟ್, ಗೋವಿಂದ ಜೋಯಿಸ ಚವರ್ಕಾಡು, ಅನಂತಸುಬ್ರಹ್ಮಣ್ಯ ಶರ್ಮ ಮತ್ತು ಭಾಸ್ಕರ ಹೊಸಮನೆ ಅವರನ್ನು ಗೌರವಿಸಲಾಯಿತು. ಹೆತ್ತವರ ಪರವಾಗಿ ಹರೀಶ್ ಕೇವಳ ಅನಿಸಿಕೆ ವ್ಯಕ್ತಪಡಿಸಿದರು. ವೇದಪಾಠಶಾಲೆಗೆ ಮಂಗಳೂರು ಹವ್ಯಕ ಮಂಡಲ, ಮಂಗಳೂರು ಹವ್ಯಕ ಸಭಾ, ದ.ಕ.ಮತ್ತು ಕಾಸರಗೋಡು ಹವ್ಯಕ ಮಹಾಜನಸಭಾ, ರುದ್ರ ಸಮಿತಿ, ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ, ಶ್ರೀ ಭಾರತೀ ಸೌಹಾರ್ದ ಸಹಕಾರಿ ನಿ.ಗಳು ಸಹಕಾರ ನೀಡಿದ್ದವು.
ವೇದಮೂರ್ತಿ ಅಮೈ ಶಿವಪ್ರಸಾದ ಭಟ್ ವೇದಪಾಠಶಾಲೆ ಬಗ್ಗೆ ಮತ್ತು ಅನಂತ ಸುಬ್ರಹ್ಮಣ್ಯ ಶರ್ಮ ಪರಂಪರಾ ಶಿಬಿರದ ಬಗ್ಗೆ ಪ್ರಸ್ತಾಪಿಸಿದರು. ವೇದಪಾಠಶಾಲೆ ಸಮಿತಿ ಸಂಚಾಲಕ ಬಾಲಸುಬ್ರಹ್ಮಣ್ಯ ಕಬೆಕ್ಕೋಡು ಸ್ವಾಗತಿಸಿದರು.
ಭಾಸ್ಕರ ಹೊಸಮನೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಕೋಶಾಧಿಕಾರಿ ಉದಯಶಂಕರ್ ನೀರ್ಪಾಜೆ ವಂದಿಸಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು