ದಾವಣಗೆರೆ ಕ್ಷೇತ್ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮರ್ಥ್ ಶಾಮನೂರು ಮುನ್ನಡೆಯಲಿದ್ದಾರೆ. ಒಟ್ಟು 21 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಇದರಲ್ಲಿ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಬಳಿಕ ಕಾಂಗ್ರೆಸ್ ನ ಸಮರ್ಥ್ 30530, ಬಿಜೆಪಿಯ ಶ್ರೀನಿವಾಸ ಟಿ. ದಾಸಕರಿಯಪ್ಪ 26544, ಎಸ್.ಡಿ.ಪಿ.ಐ.ನ ಅಫ್ಸರ್ ಕೊಡ್ಲಿಪೇಟೆ 10568 ಮತ ಗಳಿಸಿದ್ದಾರೆ. ಸಮರ್ಥ್ 3986 ಮತಗಳ ಅಂತರದಲ್ಲಿ ಮುಂದಿದ್ದಾರೆ. ಇತ್ತೀಚಿನ ವರದಿ ಬಂದಾಗ ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಉಮೇಶ್ ಮೇಟಿ 78482 ಮತ ಗಳಿಸಿ ಸಮೀಪದ ಪ್ರತಿಸ್ಪರ್ಧಿಗಿಂತ 14 ಸಾವಿರ ಮತಗಳಿಗೂ ಹೆಚ್ಚು ಅಂತರದಲ್ಲಿ ಮುಂದೆ ಇದ್ದರು. ಬಿಜೆಪಿಯ ಹಿರಿಯ ರಾಜಕಾರಣಿ ವೀರಣ್ಣ ಚರಂತಿಮಠ 63607 ಮತ ಗಳಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.