ಷೇರ್ ಟ್ರೇಡಿಂಗ್ ಗೆ ಹಣ ಹೂಡಿಕೆ ಮಾಡಿ ಲಾಭ ಗಳಿಸುವಂತೆ ಅಪರಿಚಿತರು ವಾಟ್ಸಾಪ್ ಮೂಲಕ ಕಳಿಸಿದ ಸಂದೇಶವನ್ನು ನಂಬಿದ ಬಿ.ಮೂಡ ಗ್ರಾಮದ ಜೋಡುಮಾರ್ಗ ನಿವಾಸಿ ಸುಬ್ರಾಯ ರಾಮ ಮಡಿವಾಳ (74) ಎಂಬವರು 18.92 ಲಕ್ಷ ರೂ ಹಣವನ್ನು ಕಳೆದುಕೊಂಡಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ವಾಟ್ಸಾಪ್ ನಲ್ಲಿ ಸಂದೇಶವೊಂದು ಬಂದು ಷೇರ್ ಟ್ರೇಡಿಂಗ್ ಗೆ ಹಣ ಹೂಡುವಂತೆ ಕೋರಿದ್ದರು. ಈ ಅಪರಿಚಿತ ಆರೋಪಿಗಳು ನೀಡಿದ ಸೂಚನೆಗಳನ್ನು ನಂಬಿ ಅವುಗಳನ್ನು ಅನುಸರಿಸಿ, ಕಳೆದ ನವೆಂಬರ್ ತಿಂಗಳಿಂದ ಈ ಜನವರಿ 9ನೇ ತಾರೀಕಿನವರೆಗೆ ಹಂತ ಹಂತವಾಗಿ ಆರೋಪಿಗಳು ತಿಳಿಸಿದ ನಾನಾ ಬ್ಯಾಂಕ್ ಖಾತೆಗಳಿಗೆ ಅವರು 18,92,200 ರೂಗಳನ್ನು ಪಾವತಿಸಿದ್ದಾರೆ. ಇಷ್ಟಾದರೂ ಆರೋಪಿಗಳು ಯಾವುದೇ ಲಾಭಾಂಶ ನೀಡದೆ, ಪಾವತಿಸಿದ ಹಣವನ್ನೂ ನೀಡದೆ ವಂಚಿಸಿದ್ದಾರೆ ಎಂದು ನಗರ ಠಾಣೆಗೆ ದೂರು ನೀಡಿರುವ ಸುಬ್ರಾಯ ರಾಮ ಮಡಿವಾಳ ಅವರು, ಈ ಕುರಿತು ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಂಡುವಂತೆ ಮನವಿ ಮಾಡಿದ್ದಾರೆ. ಅದರಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.