ಕಳೆದೆರಡು ದಿನಗಳಿಂದ ಗಾಳಿ ಮತ್ತು ಸುರಿಯುತ್ತಿರುವ ಧಾರಾಕಾರ ಮಳೆಗೆ ಕುಕ್ಕಿಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣ ಗೋಡೆ ಕುಸಿದು ಬಿದ್ದಿದ್ದು, ಮಳೆ ನೀರು ಅಂಗನವಾಡಿ ಕಟ್ಟಡದ ಒಳಗೆ ನುಗ್ಗಿ ಕಟ್ಟಡದಕ್ಕೂ ಹಾನಿಯಾಗಿದೆಲ್ಲದೆ ಹಂಚಿನ ಛಾವಣಿಯು ಕುಸಿಯುವ ಹಂತದಲ್ಲಿದೆ. ಶನಿವಾರ ಮುಂಜಾನೆ ಅಂಗನವಾಡಿ ಕೇಂದ್ರದ ಅವರಣಗೋಡೆ ಕುಸಿದುಬಿದ್ದಿದ್ದು,ಕೇಂದ್ರ ಸಂಪೂರ್ಣಜಲಾವೃತಗೊಂಡು ಕಟ್ಟಡಕ್ಕು ಹಾನಿಯಾಗಿದೆಯಲ್ಲದೆ ಬೀಸಿದ ಗಾಳಿಗೆ ಕೇಂದ್ರದ ಹಂಚಿನ ಛಾವಣಿ ಹಾರಿ,ವಿದ್ಯುತ್ ಕಂಬ ಕೂಡ ಕಟ್ಟಡದ ಮೇಲೆ ವಾಲಿ ನಿಂತಿದ್ದು ಅಪಾಯದಸ್ಥಿತಿಯಲ್ಲಿದೆ. ಈ ಬಗ್ಗೆ ಸುದ್ದಿ ತಿಳಿದ ಸ್ಥಳೀಯ ತಾಪಂ ಸದಸ್ಯ ಪ್ತಭಾಕರ ಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಹೊಸಕಟ್ಟಡ ನಿರ್ಮಾಣ : ಪುಟಾಣಿ ಮಕ್ಕಳ ಹಿತದೃಷ್ಟಿಯಿಂದ ಈ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಿಸಬೇಕಾಗಿದ್ದು, ಈಗಾಗಲೇ ಈ ಅಂಗನವಾಡಿ ದುರಸ್ಥಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಕಾದಿರಿಸಲಾದ 50 ಸಾ.ರೂ.ಅನುದಾನ,ತಾಪಂ ನಿಧಿಯಿಂದ ಸದಸ್ಯರಿಗೆ ಸಿಗುವ 2 ಲಕ್ಷ ರೂ.ವನ್ನು ಈ ಕೇಂದ್ರದ ಕಟ್ಟಡಕ್ಕೆ ವಿನಿಯೋಗಿಸಲಾಗುವುದು,ಈ ಬಗ್ಗೆ ತಾಪಂ ಇಒ ರಾಜಣ್ಣ ಅವರಿಗೆ ಪತ್ರ ನೀಡಲಾಗುವುದು ಎಂದು ತಾಪಂ ಸದಸ್ಯ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಕಟ್ಟಡದ ಉಳಿಕೆ ಅನುದಾನಕ್ಕೆ ಈಗಾಗಲೇ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಯವರೊಂದಿಗೆ ಚರ್ಚಿಸಿದ್ದು,ಉಳಿದ 5ಲಕ್ಷ ರೂ. ಅನುದಾನವನ್ನು ತಮ್ಮ ಶಾಸಕರ ನಿಧಿಯಿಂದ ಒದಗಿಸಿ ಕೊಡುವ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ಅವರು ನೀಡಿದ್ದಾರೆ ಎಂದು ಪ್ರಭು ತಿಳಿಸಿದ್ದಾರೆ.