ಬಂಟ್ವಾಳ ಪೊಲೀಸರು ಬಿ.ಸಿ.ರೋಡ್ ನಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಸಹಿತ ಅಡ್ಡಾಡುತ್ತಿದ್ದ ವಾಹನಗಳನ್ನೆಲ್ಲ ಸ್ಟೇಶನ್ ಗೆ ತೆಗೆದುಕೊಂಡು ಹೋಗುವ ಮೂಲಕ ಶನಿವಾರ ಬಿಗು ಬಂದೋಬಸ್ತ್ ನಡೆಸಿ, ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿಗಾಗಿ ಜನರು ಮನೆಯಿಂದ ಹೊರಬಾರದಂತೆ ನೋಡಿಕೊಂಡರು. ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಸಿ.ಡಿ.ನಾಗರಾಜ್, ಎಸ್ಸ್ಐ ಗಳಾದ ಅವಿನಾಶ್, ಪ್ರಸನ್ನ ಕಾರ್ಯಾಚರಣೆಯನ್ನು ಸಿಬ್ಬಂದಿ ಜೊತೆ ನಡೆಸಿದ್ದರು. ಬಿ.ಸಿ.ರೋಡಿನ ರೇಷನ್ ಅಂಗಡಿಯೊಂದು ಸುಮಾರು 1 ಗಂಟೆಯಷ್ಟು ತಡವಾಗಿ ತೆರೆದ ಕಾರಣ ಅಲ್ಲಿಗೆ ಟೋಕನ್ ಪಡೆದು ಆಗಮಿಸಿದ ಗ್ರಾಹಕರು ಅನಿವಾರ್ಯವಾಗಿ ಬಿಸಿಲಿಗೆ ನಿಲ್ಲಬೇಕಾದ ಪ್ರಸಂಗ ಶನಿವಾರ ನಡೆಯಿತು. ರೇಷನ್ ವಿತರಣೆಗೆ ಬೆಳಗ್ಗೆ 7ರಿಂದ 9 ಗಂಟೆವರೆಗೆ ಸಮಯ ನಿಗದಿಯಾಗಿದ್ದು, ಅದರಂತೆ ಟೋಕನ್ ಪಡೆದ ಗ್ರಾಹಕರು ಆಗಮಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರು. ಬಳಿಕ ಸುಮಾರು 8 ಗಂಟೆ ವೇಳೆ ಅಂಗಡಿ ಬಾಗಿಲು ತೆರೆದು ರೇಷನ್ ವಿತರಿಸಲಾಯಿತು.