ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿ ಪುರಸಭೆ ಕಾದಿರಿಸಿದ ಡಂಪಿಂಗ್ ಯಾರ್ಡ್ ಪ್ರದೇಶದಲ್ಲಿ ಒಣಕಸ ಸಾಗಾಟ ವಾಹನಕ್ಕೆ ಬುಧವಾರ ಸ್ಥಳೀಯರು ತಡೆಯೊಡ್ಡಿದ ಬಳಿಕ ಪೊಲೀಸ್ ರಕ್ಷಣೆಯಲ್ಲಿ ಕಸ ಸಾಗಾಟ ನಡೆದ ಹಿನ್ನೆಲೆಯಲ್ಲಿ ಸಜೀಪನಡು ಗುರುವಾರ ಸಂಪೂರ್ಣ ಬಂದ್ ಆಯಿತು.
ಎಲ್ಲ ವಾಣಿಜ್ಯ, ವ್ಯಾಪಾರ ಮಳಿಗೆಗಳು ಬಂದ್ ಆದರೆ, ಸ್ಥಳೀಯ ಆಟೊ ಓಡಾಟವೂ ಇರಲಿಲ್ಲ. ಈ ಕುರಿತು ಹೇಳಿಕೆ ನೀಡಿರುವ ಗ್ರಾಪಂ ಅಧ್ಯಕ್ಷ ಮಹಮ್ಮದ್ ನಾಸೀರ್, ನಾವು ಡಂಪಿಂಗ್ ಯಾರ್ಡ್ ವಿರೋಧಿಗಳಲ್ಲ. ಸೂಚಿತ ಷರತ್ತುಗಳನ್ನು ಪಾಲಿಸಿದ ಬಳಿಕವಷ್ಟೇ ತ್ಯಾಜ್ಯ ಸಾಗಾಟ ಮಾಡಬೇಕು ಎಂದು ಹೇಳಿದರು.