ಮಕ್ಕಳು ಹೆತ್ತವರ ಪ್ರತಿಬಿಂಬ. ಹಿರಿಯರ ಪ್ರತಿಯೊಂದು ಕೆಲಸವನ್ನೂ ಮಕ್ಕಳು ಅನುಕರಣೆ ಮಾಡುತ್ತಾರೆ. ಆದ್ದರಿಂದ ಹೆತ್ತವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ನೀಡಿದರೆ ಭವಿಷ್ಯದಲ್ಲಿ ಸ್ವಾಸ್ಥ್ಯಕರ ಸಮಾಜದ ನಿರ್ಮಾತೃಗಳಾಗುತ್ತಾರೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಮಧುಕರ ಮಲ್ಯ ಹೇಳಿದರು.
ಬಂಟ್ವಾಳದ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲಾ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಹೆತ್ತವರಿಗೆ ಮಕ್ಕಳೇ ಆಸ್ತಿ. ಹಣಗಳಿಸುವ ದುಡಿಮೆಯೊಂದಿಗೆ ಭವಿಷ್ಯತ್ತಿನ ಆಸ್ತಿಯಾಗಿರುವ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ವೃದ್ಧಿಸುವುದರ ಕಡೆಗೆ ಗಮನ ಕೊಡಬೇಕಾಗಿದೆ ಎಂದು ಅವರು ಹೇಳಿದರು. ಶಾಲಾ ಸಂಚಾಲಕರಾದ ಭಾಮೀ ವಿಠ್ಠಲ್ದಾಸ್ ಶೆಣೈ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ, ಎಸ್.ವಿ.ಎಸ್ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ರವಿದಾಸ್ ಪೈ, ಶಾಲಾ ಆಡಳಿತಾಕಾರಿ ಐತಪ್ಪ ಪೂಜಾರಿ, ಪ್ರಿನ್ಸಿಪಾಲ್ ರಮಾಶಂಕರ್ ಸಿ ಉಪಸ್ಥಿತರಿದ್ದರು.
ಶಾಲಾ ನಾಯಕ ಯಾತ್ವಿಕ್ ಎ ಶೆಟ್ಟಿ, ಉಪನಾಯಕಿ ಭಾರ್ಗವಿ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಕಳೆದ ಶೈಕ್ಷಣಿಕ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.