ಪರಿಸರ ಸಮತೋಲನಕ್ಕೆ ಉರಗ ಸಂತತಿಯ ಉಳಿವೂ ಮುಖ್ಯ ಎಂದು ಪರಿಸರ ಪ್ರೇಮಿ ಕ್ಷೇವಿಯರ್ ಕಿರಣ್ ಪಿಂಟೊ ಹೇಳಿದರು.
ಬಂಟ್ವಾಳದ ಬಿ.ಆರ್.ಎಂ.ಪಿ. ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತಲಿನ ಉಪಯುಕ್ತ ಸ್ಥಳದಲ್ಲಿಯೇ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆ ಮೂಲಕ ಪರಿಸರವನ್ನು ಶುದ್ಧವಾಗಿಸುವ ಅಲ್ಪ ಸೇವೆಯನ್ನು ಮಾಡಿದಂತಾಗುತ್ತದೆ. ಪರಿಸರದಲ್ಲಿರುವ ಪ್ರತಿಯೊಂದು ಜೀವಿಯೂ ಒಂದನ್ನೊಂದು ಅವಲಂಬಿಸಿಯೇ ಬದುಕುವ ಕಾರಣ ಪ್ರತಿಯೊಂದಕ್ಕೂ ಪ್ರಾಮುಖ್ಯತೆಯಿದೆ. ಎಲ್ಲವನ್ನೂ ಗೌರವಿಸಿ ಎಂದು ಹೇಳಿದ ಅವರು, ಉರಗಗಳ ಬಗೆಗೆ ವಿಶೇಷ ಮಾಹಿತಿಯನ್ನು ನೀಡಿದರು. ಉರಗ ಪ್ರಭೇದಗಳು, ಅವುಗಳ ಸಂತತಿ, ಹಾವಿನ ಕಡಿತದ ಬಳಿಕ ನಡೆಸುವ ಪ್ರಥಮ ಚಿಕಿತ್ಸೆಗಳ ಕುರಿತು ಸಚಿತ್ರ ಮಾಹಿತಿ ನೀಡಿದರು.
ಶಾಲಾ ಪ್ರಿನ್ಸಿಪಾಲ್ ರಮಾಶಂಕರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಸುಂದರಲಾಲ ಬಹುಗುಣರ ಚಿಪ್ಕೋ ಚಳುವಳಿ ಕುರಿತಾದ ಪ್ರಹಸನ, ಪ್ಲಾಸ್ಟಿಕ್ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಾದ ಸಮೂಹ ಗಾಯನ, ಭಾಷಣಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಸ್ವಯಂ ಎಸ್. ರೈ, ರಿತ್ವಿಕ್ ನಾಯಕ್, ಅನ್ವಿತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.